ಗುಂಡಿನ ಮತ್ತಿನಲ್ಲಿದ್ದ ಹೆಂಡತಿಯ ಪ್ರಾಣ ತೆಗೆದ ಗಂಡ
ಎಚ್.ಡಿ.ಕೋಟೆ, ಏಪ್ರಿಲ್ 11 : ಮದ್ಯದ ನಶೆಯಲ್ಲಿದ್ದ ಪತಿರಾಯ ಪಾನಮತ್ತಳಾಗಿದ್ದ ಪತ್ನಿಗೆ ಹೊಡೆದು ಸಾಯಿಸಿರುವ ಘಟನೆ ಎಚ್.ಡಿ.ಕೋಟೆ ಸಮೀಪದ ಡಿ.ಬಿ.ಕುಪ್ಪೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಳ್ಳೆ ಹಾಡಿಯಲ್ಲಿ ನಡೆದಿದ್ದು, ಘಟನೆಗೆ ಹಾಡಿಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವೇ ಕಾರಣ ಎನ್ನಲಾಗಿದೆ.
ಇತ್ತೀಚೆಗೆ ಗೋಳೂರು ಹಾಡಿಯಲ್ಲಿ ಅಕ್ರಮ ಮದ್ಯ ಕುಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ಅಕ್ರಮ ಮದ್ಯ ಮಾರಾಟ ನಿಂತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಬಳ್ಳೆ ಹಾಡಿಯ ಬಹುತೇಕ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರೇ ಕುಡಿತದ ದಾಸರಾಗಿರುವುದು ವಿಶೇಷ!
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬಳ್ಳೆ ಹಾಡಿಯ ನಿವಾಸಿ ಧನು ಎಂಬಾತನ ಪತ್ನಿ ಸುಚಿತ್ರ(20) ಎಂಬಾಕೆ ಶುಕ್ರವಾರ ರಾತ್ರಿ ಮನೆಯವರೊಂದಿಗೆ ಸೇರಿ ಮದ್ಯ ಸೇವಿಸಿದ್ದಾಳೆ. ಅವಳ ಗಂಡ ಅತ್ತೆ, ನಾದಿನಿ, ಮಾವನೂ ವಿಪರೀತ ಮದ್ಯ ಸೇವಿಸಿದ್ದಾರೆ. ಬಳಿಕ ಗಲಾಟೆ ಆರಂಭವಾಗಿದ್ದು, ಮಾತಿಗೆ ಮಾತು ಬೆಳೆದು ಗಂಡ ಧನು ಹೆಂಡತಿ ಸುಚಿತ್ರಳ ಕಪಾಳಕ್ಕೆ ಹೊಡೆದಿದ್ದಾನೆ. ಪರಿಣಾಮ ಬೆಳಗಿನ ಜಾವ ಮೃತ ಪಟ್ಟಿದ್ದಾಳೆ. ಸುಚಿತ್ರಳಿಗೆ ಶ್ರಾವಣಿ ಎಂಬ ಎರಡು ವರ್ಷದ ಹೆಣ್ಣು ಮಗುವಿದೆ.
ಈ ಬಗ್ಗೆ ಗ್ರಾಮಪಂಚಾಯಿತಿ ಅಧ್ಯಕ್ಷ ತಿರುಪತಿ ಎಚ್.ಡಿ.ಕೋಟೆ ತಹಸೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಡಿ.ಬಿ.ಕುಪ್ಪೆ ವ್ಯಾಪ್ತಿ ಎಲ್ಲಾ ಗ್ರಾಮಗಳಲ್ಲೂ ಕೂಡ ಮದ್ಯ ಮಾರಾಟ ನಿಷೇಧವಾಗಿದ್ದರೂ ಬಳ್ಳೆ ಹಾಡಿಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ತಡೆಯೊಡ್ಡಬೇಕಿದೆ. ಇಲ್ಲದಿದ್ದರೆ ಇನ್ನೆಷ್ಟು ಜನರು ಬಲಿಯಾಗಬೇಕಾಗುತ್ತದೋ?