ಪೊಲೀಸ್ ಕಸ್ಟಡಿಯಲ್ಲಿ ಆರೋಪಿ ಸಾವು, ಹುಣಸೂರು ಪ್ರಕ್ಷುಬ್ಧ
ಹುಣಸೂರು, ಅಕ್ಟೋಬರ್ 30 : ಬಂಧಿಸಲು ಬಂದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿ ಮೃತನಾಗಿರುವ ಘಟನೆಯಿಂದಾಗಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಗುರುವಾರ ನ್ಯಾಯಾಲಯದ ಆದೇಶದ ಮೇಲೆ ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ, ತಾಯಿಯೊಂದಿಗೆ ಸೇರಿ ಪೊಲೀಸರ ಬೈಕ್ನ್ನು ಸುಟ್ಟು ಹಾಕಿದ್ದ. ಆ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ಕಸ್ಟಡಿಯಲ್ಲಿದ್ದ ಆರೋಪಿ ಮೃತಪಟ್ಟಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದರಿಂದ ಇಡೀ ಪಟ್ಟಣದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
ಏನಿದು ಪ್ರಕರಣ? : ತಾಲೂಕಿನ ರತ್ನಪುರಿ ಗ್ರಾಮದ ದೇವರಾಜು ಪೊಲೀಸರ ಮೇಲೆ ಹಲ್ಲೆ ನಡೆಸಿ ಕಸ್ಟಡಿಯಲ್ಲಿ ಮೃತಪಟ್ಟ ಆರೋಪಿ. ಈತನಿಗೆ ಇಬ್ಬರು ಪತ್ನಿಯರು ಇದ್ದಾರೆ. ಗ್ರಾಮಾಂತರ ಠಾಣೆ ಪೇದೆಗಳಾದ ಆನಂದ್ ಮತ್ತು ಜಿ.ಎಸ್.ಸತೀಶ್ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನ್ಯಾಯಾಲಯದ ಆದೇಶದಂತೆ ರತ್ನಪುರಿ ಗ್ರಾಮದ ನಿವಾಸಿ ದೇವರಾಜ್ರನ್ನು ದಸ್ತಗಿರಿ ಮಾಡುವ ವಾರೆಂಟ್ನೊಂದಿಗೆ ಅ.29 ಗುರುವಾರ ಮಧ್ಯಾಹ್ನ ಪೇದೆಗಳಾದ ಆನಂದ್ ಮತ್ತು ಸತೀಶ್ ಬೈಕಿನಲ್ಲಿ ತೆರಳಿ ಆರೋಪಿಯ ಮನೆಮುಂದೆ ವಾಹನ ನಿಲ್ಲಿಸಿದರು. ಮನೆ ಮುಂದೆ ಕುಳಿತಿದ್ದ ದೇವರಾಜ್ಗೆ ವಿಷಯ ತಿಳಿಸಿ ಸಹಕರಿಸಲು ಕೋರಿದಾಗ ಶರ್ಟ್ ಹಾಕಿಕೊಂಡು ಬರುತ್ತೇನೆಂದು ಒಳಹೋದ ದೇವರಾಜ್ ಕೈಯಲ್ಲಿ ಕುಯ್ಯುಗತ್ತಿ ಮತ್ತು ತಾಯಿ ಚಿಕ್ಕಮ್ಮ ಕುಡುಗೋಲಿನೊಂದಿಗೆ ಹೊರಬಂದು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸರನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ್ದರು. ನಂತರ ಅವರ ಬೈಕಿಗೆ ಬೆಂಕಿ ಹಾಕಿ ಸುಟ್ಟಿದ್ದನು.
ವಿಷಯ ತಿಳಿದ ನಂತರ ಎಸ್ಐ ಪಿ.ಲೋಕೇಶ್ ಆರೋಪಿ ದೇವರಾಜನನ್ನು ಗುರುವಾರ ಸಂಜೆ ಬಂಧಿಸಿ, ಹುಣಸೂರು ಗ್ರಾಮಂತರ ಪೋಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದರು. ಕೂಡಲೇ ಆರೋಪಿಯ ಆರೋಗ್ಯದಲ್ಲಿ ಏರುಪೇರಾದ ಕಾರಣ ಆತನನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಗುರುವಾರ ರಾತ್ರಿ 11.30ರ ಸಮಯದಲ್ಲಿ ಬಿಳಿಕೆರೆಯ ಕುಪ್ಪೆ ಗೇಟ್ ಬಳಿ ಮೃತಪಟ್ಟಿದ್ದಾನೆ.
ರತ್ನಪುರಿ ಗ್ರಾಮದಲ್ಲಿ ಮೃತ ದೇವರಾಜುನ ಸಾವಿನ ಪ್ರಕರಣ ತನಿಖೆಯಾಗಬೇಕು, ತಪಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಅಂಗಡಿ ಮುಂಗಟ್ಟು, ಹೋಟೆಲ್ಗಳು, ಬಾರ್ ರೆಸ್ಟೋರೆಂಟ್ಗಳು, ಶಾಲಾ ಕಚೇರಿಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು. ಖಾಸಗಿ ಮತ್ತು ಸಾರಿಗೆ ಹಾಗೂ ಯಾವುದೇ ದ್ವಿಚಕ್ರವಾಹನಗಳನ್ನು ಬಿಡದೆ ಪ್ರತಿಭಟನೆ ನಡೆಸಿದರು. ಪ್ರಭಟನಾ ಸ್ಥಳಕ್ಕೆ ಜನರಿಗಿಂತ ಪೊಲೀಸರು ಮತ್ತು ಅವರ ವಾಹನಗಳ ದಂಡು ಹೆಚ್ಚಾಗಿತ್ತು.
ಪೊಲೀಸರಿಗೆ ಘೇರಾವ್ : ಗ್ರಾಮದೊಳಗೆ ಪ್ರವೇಶ ಮಾಡುತ್ತಿದ್ದ ಪೊಲೀಸರಿಗೆ ಗ್ರಾಮಸ್ಥರು ಘೇರಾವ್ ಹಾಕಿ ಹಿಂದಕ್ಕೆ ಕಳುಹಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಸುಮಾರು ಒಂದು ಕಿಮೀ ದೂರದ ಸಿ.ಬಿ.ಟಿ. ಕಾಲೋನಿಯಲ್ಲಿ ಬಿಡಾರ ಬಿಟ್ಟಿದ್ದರು. ಸ್ವಲ್ಪ ಸಮಯದ ಬಳಿಕ ಗ್ರಾಮದ ಕೆಲವು ಮುಖಂಡರ ಮುಖೇನ ಗ್ರಾಮದಲ್ಲಿ ಸಭೆ ನಡೆಸಿ ಶಾಂತಿ ಸಭೆ ಹಾಗೂ ಕಾನೂನು ಸುವ್ಯವಸ್ಥೆಗೆ ಸಹಕಾರ ಕೋರಿದರ ಮೇರೆಗೆ ಎಎಸ್ಪಿ ಮತ್ತು ತಂಡ ಗ್ರಾಮಕ್ಕೆ ಆಗಮಿಸಲು ಒಪ್ಪಿಗೆ ನೀಡಲಾಗಿದೆ.
ದೇವರಾಜನ ಸಾವಿನ ಪ್ರಕರಣದಲ್ಲಿ ಹುಣಸೂರು ಗ್ರಾಮಾಂತರ ಎಸ್ಐ ಮತ್ತು ಪೇದೆಗಳಾದ ಅನಂದ್, ಸತೀಶ್, ದೊಡ್ಡಸ್ವಾಮಿ, ಅಶೋಕ್ ಅವರ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಮೃತನ ಶವ ಪರೀಕ್ಷೆ ವರದಿ ಬಂದ ಬಳಿಕವೇ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.