ಹುಣಸೂರಿನಲ್ಲಿ ಹೆಸರಿಗೆ ಮಾತ್ರ ಜಿ.ಟಿ.ದೇವೇಗೌಡ ತಟಸ್ಥ: ಮಾಡೋದೆಲ್ಲಾ...
ಜಿದ್ದಾಜಿದ್ದಿನ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿರುವ ಹುಣಸೂರು ಕ್ಷೇತ್ರದಲ್ಲಿ, ಇಲ್ಲಿನ ಪ್ರಭಾವಿ ಮುಖಂಡ ಜಿ.ಟಿ.ದೇವೇಗೌಡ ಅವರ ಆಶೀರ್ವಾದ ಯಾವ ಪಕ್ಷದ ಕಡೆಗೆ?
ಟೆಕ್ನಿಕಲಿಯಾಗಿ ಮಾತ್ರ ನಾನು ಜೆಡಿಎಸ್ ನಲ್ಲಿರುವುದು ಎಂದು ಈಗಾಗಲೇ ಜಿಟಿಡಿ ಹೇಳಿಯಾಗಿದೆ. ಆದರೆ, ಬಹಿರಂಗವಾಗಿ ಇವರು ಯಾವ ಪಕ್ಷದ ಪರವಾಗಿಯೂ ಪ್ರಚಾರಕ್ಕೆ ಇಳಿಯುತ್ತಿಲ್ಲ.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಜಿಟಿಡಿ ಸಚಿವರಾಗಿದ್ದ ವೇಳೆ, ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ಬಹಿರಂಗವಾಗಿಯೇ ಹೊಗಳಿದ್ದರು.
ತಟಸ್ಥವಾಗಿದ್ದೇನೆ ಎಂದು ತಣ್ಣಗಾದ ಜಿಟಿಡಿ; ಆದರೂ ಹೊಗೆಯಾಡುತ್ತಿದೆ ಅಸಮಾಧಾನ
ಏನು, ಜಿಟಿಡಿ, ಮೋದಿಯವರನ್ನು ಹೊಗಳುತ್ತಿದ್ದಾರಲ್ಲಾ, ಇವರೇನು ಬಿಜೆಪಿ ಕಡೆ ವಾಲುತ್ತಾರಾ ಎನ್ನುವ ಪ್ರಶ್ನೆ, ವರ್ಷದ ಹಿಂದೆಯೇ ಉದ್ಭವಿಸಿತ್ತು. ಅದು, ಬರಬರುತ್ತಾ ನಿಜವಾಗುತ್ತನೂ ಬಂತು. ಸದ್ಯದ ಉಪಚುನಾವಣೆಯಲ್ಲಿ ಜಿ.ಟಿ.ದೇವೇಗೌಡ್ರು, ಹೆಸರಿಗೆ ಮಾತ್ರ ತಟಸ್ಥ.
ಮೂರು ಪಕ್ಷದವರೂ ಬೆಂಬಲಿಸಿ ಎಂದಿದ್ದಾರೆ, ಸದ್ಯಕ್ಕೆ ನಾನು ತಟಸ್ಥ
"ಹುಣಸೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಮೂರು ಪಕ್ಷದವರೂ ಬೆಂಬಲಿಸಿ ಎಂದಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಅಂತ ಹೇಳಿದ್ದೇನೆ ಅಷ್ಟೆ. ಮೂರು ಪಕ್ಷದವರು ನನ್ನ ಬೆಂಬಲ ಕೇಳಿದ್ದಾರೆ. ಆದರೆ ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ" ಎಂದು ನಾಲ್ಕೈದು ದಿನಗಳ ಕೆಳಗೆ ಜಿ.ಟಿ.ದೇವೇಗೌಡ ಹೇಳಿದ್ದರು.
ಶ್ರೀರಾಮುಲು - ಜಿ.ಟಿ.ದೇವೇಗೌಡ ಭೇಟಿ
ಆದರೆ, ಇದಾದ ನಂತರ ಬಿಜೆಪಿ ಸಚಿವ ಶ್ರೀರಾಮುಲು, ಜಿಟಿಡಿ ಅವರನ್ನು ಭೇಟಿಯಾಗಿದ್ದರು. ಅಂದಿನಿಂದ ಹುಣಸೂರಿನಲ್ಲಿ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ಜಿಟಿಡಿ, ಬಹಿರಂಗವಾಗಿ, ಬಿಜೆಪಿಗೆ ಮತಚಲಾಯಿಸಿ ಎಂದು ಹೇಳದಿದ್ದರೂ, ಅವರ ಬೆಂಬಲಿಗರು ಬಹಿರಂಗವಾಗಿಯೇ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿಟ್ಟೂ ಬಿಡದೇ ಕಾದು ಕುಳಿತು ಜಿಟಿಡಿ ಭೇಟಿಯಾದ ಸಂಸದ ಪ್ರಜ್ವಲ್ ರೇವಣ್ಣ
ಜಿಟಿಡಿ ಇರುವ ಕಡೆಗೇ ತೆರಳಿ ಶುಭಾಶಯ ಸಲ್ಲಿಸಿದ ಪ್ರಜ್ವಲ್
ಕಳೆದ ಎರಡು ದಿನಗಳಿಂದ, ಜಿಟಿಡಿ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರ ಜೊತೆಗೆ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಸುಮಾರು 45ಸಾವಿರದಷ್ಟು ಇರುವ ಒಕ್ಕಲಿಗ ಮತದಾರರು ನಿರ್ಣಾಯಕ ಪಾತ್ರ ವಹಿಸಬಲ್ಲರು. ಒಂದು ಹಂತಕ್ಕೆ, ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್, ಅವರಿಗೆ ರಣತಂತ್ರ ರೂಸಿಸುವಲ್ಲೂ ಜಿಟಿಡಿ, ಸಲಹೆಯನ್ನು ನೀಡುತ್ತಿದ್ದಾರೆಂದು ತಿಳಿದು ಬಂದಿದೆ. ಜಿಟಿಡಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಅವರ ಭೇಟಿಗಾಗಿ ಕಾದು, ಕಡೆಗೆ ಜಿಟಿಡಿ ಇರುವ ಕಡೆಗೇ ತೆರಳಿ ಶುಭಾಶಯ ಸಲ್ಲಿಸಿದ್ದರು.
ಶ್ರೀರಾಮುಲು ಭೇಟಿ, ಹಲವು ಆಯಾಮಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು
"ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರನ್ನು ಮೈಸೂರಿನ ಅವರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಿದೆ. ನಮ್ಮಿಬ್ಬರದ್ದು ರಾಜಕೀಯ ಮೀರಿದ ಗೆಳೆತನ" ಎಂದು ಶ್ರೀರಾಮುಲು ಹೇಳಿದ್ದರು. ಕೆ.ಆರ್.ಪೇಟೆ ಮತ್ತು ಹುಣಸೂರಿನಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಲು ಬಂದಿದ್ದ ಶ್ರೀರಾಮುಲು, ಅವರ ಈ ಭೇಟಿ, ಹಲವು ಆಯಾಮಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತಂದಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಹುಣಸೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಹುಣಸೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಎಚ್. ವಿಶ್ವನಾಥ್, ಕಾಂಗ್ರೆಸ್ಸಿನಿಂದ ಎಚ್.ಪಿ.ಮಂಜುನಾಥ್ ಮತ್ತು ಜೆಡಿಎಸ್ಸಿನಿಂದ ದೇವರಹಳ್ಳಿ ಸೋಮಶೇಖರ್ ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಾದರೂ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯಾಗುವ ಸಾಧ್ಯತೆಯಿದೆ. ಜಿ.ಟಿ.ದೇವೇಗೌಡ, ಮತದಾನದ ಹೊತ್ತಿನಲ್ಲಿ, ಬಿಜಿಪಿ ಪಾಲಿಗೆ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.