"ಬಿಜೆಪಿಯವರು ಪಲಾಯನವಾದಿಗಳು"; ಮೈಸೂರಲ್ಲಿ ಕಾಂಗ್ರೆಸ್ ಶಾಸಕರ ವಾಗ್ದಾಳಿ
ಮೈಸೂರು, ಜುಲೈ 31: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಆರೋಪಿಸಿದ್ದಾರೆ.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, "ಈ ಸರ್ಕಾರದ್ದು ನಾಲಿಗೆಯಲ್ಲಿ ಬೆಣ್ಣೆ, ಮನಸ್ಸಲ್ಲಿ ವಿಷ ತುಂಬಿದೆ. ಮೊದಲು ಅವರು ಚಪ್ಪಳೆ ಹೊಡೆದು ಸ್ವಾಗತ ಮಾಡಿದ್ರು. ನಂತರ ದೀಪ ಹಚ್ಚಿ ಆರತಿ ಮಾಡಿ ಕರೆದುಕೊಂಡ್ರು. ಆಮೇಲೆ ಹೆಬ್ಬಾಗಿಲು ತೆರೆದು ಬರಮಾಡಿಕೊಂಡರು" ಎಂದು ವ್ಯಂಗ್ಯವಾಡಿದರು.
ಸಂಸದರೇ ಎಲ್ಲಿದ್ದೀರಪ್ಪಾ?: ಪ್ರತಾಪ್ ಸಿಂಹ ವಿರುದ್ಧ ಕೊಡಗು ಕಾಂಗ್ರೆಸ್ ಅಸಮಾಧಾನ
"ಸರ್ಕಾರ ನೀಡಿರುವ ಕೋವಿಡ್ ಲೆಕ್ಕದಲ್ಲಿ ಬಹಳ ಸುಳ್ಳಿದೆ. ಪ್ರತಿ ಇಲಾಖೆಗೆ ಶೇ. 30 ರಿಂದ 40ರಷ್ಟು ಮಾತ್ರ ಹಣ ಬಂದಿದೆ. ಕೋವಿಡ್ ಸಮಯದಲ್ಲಿ ಸಿದ್ದರಾಮಯ್ಯ ತಂದಿದ್ದ ಅನ್ನಭಾಗ್ಯ ನೆರವಾಗಿದೆ. ಕೊರೊನಾ ಸಮಯದಲ್ಲಿ ವಿವಿಧ ವಿಭಾಗದ ಚಾಲಕರಿಗೆ ಹಣ ನೀಡುತ್ತೇವೆ ಎಂದಿದ್ದರು. ಆದರೆ ಇದುವರೆಗೂ ಹಣ ಅವರ ಕೈ ಸೇರಿಲ್ಲ. ವಿಧಾನಸೌಧದಲ್ಲಿ ಕೇಳಿದರೆ ಜನರ ಹತ್ತಿರ ಹೋಗೋಣ ಎನ್ನುತ್ತಾರೆ. ಮಾಧ್ಯಮದ ಮೂಲಕ ಕೇಳಿದರೆ, ಬೀದಿಯಲ್ಲಿ ಕೇಳುತ್ತೀರಾ ಅಂತಾರೆ. ಬಿಜೆಪಿಯವರು ಪಲಾಯನವಾದಿಗಳು. ಅವರಲ್ಲಿ ಸಚಿವರಾಗುವ ಸಮರ್ಥರು ಯಾರೂ ಇಲ್ಲ. ಕಾಂಗ್ರೆಸ್ ನಿಂದ ಕರೆದುಕೊಂಡು ಹೋಗಿ ಸಚಿವರನ್ನಾಗಿ ಮಾಡಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ಮೈಸೂರು ಜಿಲ್ಲೆಯಲ್ಲಿ ಕೊರೊನಾ ಎಲ್ಲೆ ಮೀರಿ ಹೋಗಿದೆ. ಜಿಲ್ಲಾಡಳಿತ ಪ್ರತಿ ದಿನ ಬುಲೆಟಿನ್ ಬಿಡುಗಡೆ ಮಾಡಿ ಸೋಂಕಿತರು, ಸತ್ತವರ ಲೆಕ್ಕ ಕೊಡುವುದರಲ್ಲೇ ಕಾಲ ಕಳೆಯುತ್ತಿದೆ. ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಹೆಲ್ಪ್ ಲೆಸ್ ಅಂತಾರೆ. ಕೋವಿಡ್ ಆಸ್ಪತ್ರೆಗೆ ಹೋದರೆ ಸಾಕಷ್ಟು ಅವ್ಯವಸ್ಥೆ ಇದೆ. ರಾಜ್ಯ ಸರ್ಕಾರ ಪ್ರಚಾರಕ್ಕೆ ಬಳಸಿದ ಹಣದಲ್ಲಿ ಆಸ್ಪತ್ರೆ ಕಟ್ಟಿಸಿದ್ದರೆ ನೂರಾರು ಜನ ಬದುಕುತ್ತಿದ್ದರು" ಎಂದಿದ್ದಾರೆ.
ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, "ಕೊರೊನಾ ತುರ್ತು ಪರಿಸ್ಥಿತಿ ನೆಪದಲ್ಲಿ ರಾಜ್ಯ ಸರ್ಕಾರ ಮರಣ ಶಾಸನ ಬರೆಯುತ್ತಿದೆ. ಸದನದಲ್ಲಿ ವಿಷಯ ಮಂಡನೆ ಮಾಡದೇ ಕಾಯ್ದೆ ಜಾರಿಗೆ ತರೋದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಎಪಿಎಂಸಿ, ಭೂ ಸುಧಾರಣೆ ಸೇರಿ ಹಲವು ಕಾಯ್ದೆಗಳನ್ನು ತರಾತುರಿಯಲ್ಲಿ ಜಾರಿಗೆ ತರುತ್ತಿದೆ. ಪರಿಸ್ಥಿತಿ ಹೀಗೇ ಆದರೆ ರಾಜ್ಯದ ಅನ್ನದಾತ ಕೂಲಿ ಕಾರ್ಮಿಕನಾಗ್ತಾನೆ" ಎಂದು ರಾಜ್ಯ ಸರ್ಕಾರದ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.