ಈಗ ವಿಶ್ವನಾಥ್ ಗೆ ಸಿಕ್ಕಿದೆ ಒಕ್ಕಲಿಗರ ಬಲ
ಮೈಸೂರು, ನವೆಂಬರ್ 28: ಹುಣಸೂರು ಉಪ ಚುನಾವಣಾ ಕಣ ರಂಗೇರುತ್ತಿದೆ. ಈ ನಡುವೆ ಹುಣಸೂರಿನಲ್ಲಿ ಬಿಜೆಪಿಯಿಂದ ಒಕ್ಕಲಿಗರ ಮತ ಬೇಟೆ ಮುಂದುವರೆದಿದ್ದು ಕಾಂಗ್ರೆಸ್ ಮುಖಂಡರೊಬ್ಬರನ್ನು ಬಿಜೆಪಿಗೆ ಕರೆತರಲು ಸಿ.ಪಿ.ಯೋಗೇಶ್ವರ್ ನಡೆಸಿದ ಸಂಧಾನ ಯಶಸ್ವಿಯಾಗಿದೆ.
ಹುಣಸೂರಿನ ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರು ಮತ್ತು ಮೈಸೂರು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನ ಮುಖಂಡರಾದ ರಾಮಕೃಷ್ಣಗೌಡ ಅವರು ತಮ್ಮ ನೂರಾರು ಬೆಂಬಲಿಗರೂಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಹುಣಸೂರು ಚುನಾವಣೆ: ಬಿಜೆಪಿಯ ಈ 'ನಾಯಕ'ರಿಗೆ ಪ್ರತಿಷ್ಠೆಯ ಪ್ರಶ್ನೆ
ತೇಗದ ನಾಡಿನಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದು, ಸಿ.ಪಿ.ಯೋಗೇಶ್ವರ್ ತಂತ್ರದಿಂದ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಗೆ ಒಕ್ಕಲಿಗರ ಬಲ ದಿನೇ ದಿನೇ ಹೆಚ್ಚುತ್ತಿದೆ. ಈ ಮಧ್ಯೆ ಹುಣಸೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಒಕ್ಕಲಿಗ ಮತ ಗಳಿಸಿದರೆ ಬಿಜೆಪಿ ಗೆಲುವು ಸುಲಭವಾಗಲಿದೆ ಎಂಬುದು ಬಿಜೆಪಿ ಮುಖಂಡರ ಲೆಕ್ಕಾಚಾರ.
ಹೀಗಾಗಿ ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ನ ಮುಖಂಡರಾದ ರಾಮಕೃಷ್ಣಗೌಡರ ಜತೆ ಮಾತುಕತೆ ನಡೆಸಿ ಬಿಜೆಪಿಗೆ ಸೆಳೆದಿದ್ದಾರೆ. ರಾಮಕೃಷ್ಣಗೌಡರು ತಮ್ಮ ಬೆಂಬಲಿಗರೊಂದಿಗೆ ಕಮಲ ಮುಡಿಯಲು ಮುಂದಾಗಿದ್ದಾರೆ.