ಆನ್ ಲೈನಲ್ಲಿ ಅರ್ಜಿ ಸಲ್ಲಿಸುವಾಗ ಹುಷಾರ್; ಹುಣಸೂರು ಯುವಕನ ಕಥೆ ಕೇಳಿ...
ಮೈಸೂರು, ಮಾರ್ಚ್ 11: ಉದ್ಯೋಗಕ್ಕೆಂದು ಕೇಂದ್ರ ಸರ್ಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ ಹುಣಸೂರಿನ ಯುವಕರೊಬ್ಬರು ಸುಮಾರು 21 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಹುಣಸೂರಿನ ಸೋಮನಹಳ್ಳಿ ಗ್ರಾಮದ ಬಿ.ಕಾಂ ಪದವೀಧರ ವಿನೋದ್ ರಾವ್ ಕೇಂದ್ರದ ಕೃಷಿ ಮಂತ್ರಾಲಯದಿಂದ ಕೃಷಿ ಕಾಲ್ ಸೆಂಟರ್ನ ಉದ್ಯೋಗಕ್ಕೆ ಆನ್ ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಎಂಬ ವದಂತಿ ನಂಬಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿ ಪರಿಗಣಿಸಿದ್ದು, ಅಗತ್ಯ ಲ್ಯಾಪ್ಟಾಪ್ ಕಳುಹಿಸಿಕೊಡಲು 21,100 ರೂ.ಗಳನ್ನು ಆನ್ಲೈನ್ನಲ್ಲಿ ಜಮೆ ಮಾಡಲು ಸೂಚಿಸಲಾಗಿತ್ತು. ಇದನ್ನು ನಂಬಿ ವಿನೋದ್ ಹಣ ಕಳುಹಿಸಿದ್ದಾರೆ. ಬಳಿಕ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡು ವಿಚಾರಿಸಿದ್ದಾರೆ. ಕೇಂದ್ರ ಸರಕಾರದ ಕೃಷಿ ಸಚಿವಾಲಯ ಯಾವುದೇ ಅರ್ಜಿ ಆಹ್ವಾನಿಸಲಿಲ್ಲ ಎನ್ನುವುದು ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ಈ ಕುರಿತು ದೂರು ನೀಡಲಾಗಿದೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆ ನೀಡಿದ್ದು, ಕೇಂದ್ರ ಹಾಗೂ ರಾಜ್ಯ ಕೃಷಿ ಇಲಾಖೆ ಉದ್ಯೋಗಕ್ಕಾಗಿ ಯಾವುದೇ ಜಾಹೀರಾತು ನೀಡಿರಲಿಲ್ಲ. ಈ ಕುರಿತು ರೈತರಿಗೆ, ವಿದ್ಯಾರ್ಥಿಗಳಿಗೆ ಅಥವಾ ಯಾರಿಗಾದರೂ ಕರೆ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಇಲ್ಲವೇ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡುವಂತೆ ಕೋರಿದ್ದಾರೆ.