ತಲಕಾಡಿನಲ್ಲಿ ಪಂಚಲಿಂಗ ದರ್ಶನ ಘಟಿಸುವುದು ಹೇಗೆ ಗೊತ್ತಾ?
ಮೈಸೂರು, ಡಿಸೆಂಬರ್ 9: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ತಲಕಾಡು ಪವಿತ್ರ ಮತ್ತು ಐತಿಹಾಸಿಕ ತಾಣವಾಗಿದ್ದರೂ, ಪಂಚಲಿಂಗ ದರ್ಶನದ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆಯುತ್ತದೆ.
ಹಾಗೆ ನೋಡಿದರೆ ಈ ತಾಣ ಆಸ್ತಿಕ-ನಾಸ್ತಿಕರೆನ್ನದೆ ಎಲ್ಲರನ್ನು ಸೆಳೆಯುವ ತಾಣವಾಗಿದೆ. ಇಲ್ಲಿರುವ ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಮರಳೇಶ್ವರ ಎಂಬ ನಾಲ್ಕು ಶಿವದೇವಾಲಯಗಳ ಲಿಂಗಗಳನ್ನು ದರ್ಶನ ಮಾಡಿದರೆ ಪಾಪ ಕಳೆಯುತ್ತದೆ. ಅದರಲ್ಲೂ ಪಂಚಲಿಂಗದರ್ಶನದ ವೇಳೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯೂ ಇದೆ.
ಕಾಶಿಯಿಂದ ಬರುವ ತೀರ್ಥ
ಸಾಮಾನ್ಯವಾಗಿ ತಲಕಾಡಿನಲ್ಲಿರುವ ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಮರಳೇಶ್ವರ ದೇವಾಲಯಗಳು ಇತರೆ ದಿನಗಳಲ್ಲಿ ಮರಳಿನಲ್ಲಿ ಹುದುಗಿ ಹೋಗಿರುತ್ತವೆ. ಪಂಚಲಿಂಗದರ್ಶನ ಸಂದರ್ಭ ಮರಳು ತೆಗೆದು ದೇವಾಲಯಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಇನ್ನು ತಲಕಾಡಿನ ಮಹತ್ವದ ಬಗ್ಗೆ ಹೇಳುವುದಾದರೆ, ಕಾಶಿಯ ಮಣಿವರ್ಣಿಕಾ ಸರೋವರದಿಂದ ಗಂಗೆಯು ಪ್ರತಿ ವರ್ಷದ ತುಲಾ ಮಾಸದಲ್ಲಿ ಒಂದು ತಿಂಗಳುಗಳ ಕಾಲ ತಲಕಾಡಿನ ಗೋಕರ್ಣಕ್ಕೆ ತೀರ್ಥರೂಪದಲ್ಲಿ ಪ್ರವೇಶಿಸಿ ನೆಲೆ ನಿಲ್ಲುತ್ತಾಳೆ ಎಂಬ ನಂಬಿಕೆಯಿದ್ದು, ಹೀಗಾಗಿ ದಕ್ಷಿಣ ಕಾಶಿ ಎಂದು ಕೂಡ ಕರೆಯಲಾಗುತ್ತದೆ.
ಹೇಗಿರಲಿದೆ ಪಂಚಲಿಂಗ ದರ್ಶನದ ವಿಧಿ ವಿಧಾನಗಳು...
ವಿವಿಧ ಮುಖಗಳಿಂದ ದರ್ಶನ
ಕಾಶಿ ವಿಶ್ವನಾಥನು ಸೋಮದತ್ತ ಮತ್ತು ಶಿಷ್ಯರಿಗೆ ಹಾಗೂ ತಲ-ಕಾಡ ಎಂಬ ಬೇಡರಿಗೆ ಸಾಮೂಹಿಕ ಮೋಕ್ಷ ನೀಡಲೆಂದು ಶ್ರೀ ವೈದ್ಯೇಶ್ವರನ ರೂಪದಲ್ಲಿ ಬಂದು ಕಾವೇರಿ ನದಿ ತಟದ ಬೂರುಗ ಮರದ ಕೆಳಗೆ ನೆಲೆಸಿ ಮೋಕ್ಷ ನೀಡಿದಲ್ಲದೆ, ಭಕ್ತರಿಗೆ ಮೋಕ್ಷ ನೀಡಲೆಂದೇ ಪ್ರಧಾನ ಮುಖವಾದ ಈಶನ ಮುಖದಿಂದ ಶ್ರೀ ವೈದ್ಯನಾಥೇಶ್ವರ, ಪೂರ್ವ ಮುಖವಾದ ತತ್ಪುರುಷ ಮುಖದಿಂದ ಶ್ರೀ ಅರ್ಕೇಶ್ವರ, ಅಘೋರ ಮುಖದಿಂದ ಪಾತಾಳೇಶ್ವರ ಸದ್ಯೋಜಾತ ಮುಖದಿಂದ ಮರಳೇಶ್ವರ ಸ್ತ್ರೀ ವಾಸುದೇವ ಮುಖದಿಂದ ಮಲ್ಲಿಕಾರ್ಜುನೇಶ್ವರನಾಗಿ ನೆಲೆಗೊಂಡಿದ್ದಾಗಿ ನಂಬಿಕೆಯಿದೆ. ಪಂಚಲಿಂಗದರ್ಶನ ದಿನದ ಬಗ್ಗೆ ನೋಡಿದರೆ, ವಸಿಷ್ಠ ಗೋತ್ರದ ಸೋಮದತ್ತನೆಂಬ ಮುನಿಪುಂಗವ ಮತ್ತು ಆತನ ಶಿಷ್ಯರಿಗೆ ತಲಕಾಡಿನಲ್ಲಿರುವ ಪಂಚಲಿಂಗಗಳಲ್ಲಿ ಒಂದಾದ ಶ್ರೀ ವೈದ್ಯನಾಥೇಶ್ವರನು ಏಕ ಕಾಲದಲ್ಲಿ ಮೋಕ್ಷವಿತ್ತ ದಿನವೇ ಪಂಚಲಿಂಗದರ್ಶನದ ದಿನವಾಗಿದೆಯಂತೆ.
ಪಂಚಲಿಂಗದರ್ಶನ ಘಟಿಸುವುದು ಹೇಗೆ?
ಪಂಚಲಿಂಗ ದರ್ಶನವು 12 ವರ್ಷಗಳಿಗೊಮ್ಮೆ ಮಾತ್ರ ನಡೆಯುತ್ತದೆ ಎಂದು ಹೇಳಲಾಗುತ್ತದೆ, ಆದರೆ ಅದು ಸರಿಯಲ್ಲ. ಕಾರ್ತಿಕ ಮಾಸ, ಅಮಾವಾಸ್ಯೆ, ಐದು ಸೋಮವಾರ, ವೃಶ್ಚಿಕರಾಶಿ, ಕಹೂಯೋಗ ಈ ಅಂಶಗಳು ಒಟ್ಟಾಗಿ ಬಂದಾಗ ಪಂಚಲಿಂಗ ದರ್ಶನ ಘಟಿಸುತ್ತದೆ ಎಂಬುದು ಸತ್ಯ. ಹೀಗಾಗಿ ಯಾವುದೇ ಸಂವತ್ಸರವಾಗಲೀ ಐದು ಕಾರ್ತಿಕ ಸೋಮವಾರದಂದು ಅಮಾವಾಸ್ಯೆ ವೃಶ್ಚಿಕಾ ಮಾಸ ಪ್ರಾತಃಕಾಲ ಕುಹೂಯೋಗ ಅಥವಾ ಪದ್ಮಕಯೋಗದಲ್ಲಿ ವಿಶಾಖ ನಕ್ಷತ್ರ, ಅನುರಾಧ ಅಥವಾ ಜ್ಯೇಷ್ಠ ನಕ್ಷತ್ರ ಸೇರುವುದೋ ಆ ದಿನವೇ ಪಂಚಲಿಂಗ ದರ್ಶನ ಘಟಿಸುತ್ತದೆ.
ಗಂಗರ ಕಾಲದಲ್ಲೇ ಪಂಚಲಿಂಗ ದರ್ಶನ?
ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಪಂಚಲಿಂಗ ದರ್ಶನದ ಬಗ್ಗೆ ಒಂದಷ್ಟು ಮಾಹಿತಿ ಲಭ್ಯವಾಗುತ್ತದೆ. ಆ ಪ್ರಕಾರ ಕ್ರಿ.ಶ.247 ರಿಂದ 266 ರವರೆಗೆ ತಲಕಾಡನ್ನು ಆಳಿದ ಗಂಗರ ದೊರೆ ಹರಿವರ್ಮ ಕಾಲದಲ್ಲೇ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಆಚರಣೆಯಲ್ಲಿತ್ತೆಂದು ಹೇಳಲಾಗುತ್ತಿದ್ದು, ಇದಕ್ಕೆ ಖಚಿತತೆ ಇಲ್ಲವಂತೆ. ಖಚಿತ ಮಾಹಿತಿ ದೊರೆತಿರುವಂತೆ 1908, 1915, 1925, 1938, 1952, 1959, 1966, 1979, 1986, 1993ರಲ್ಲಿ ಪಂಚಲಿಂಗ ದರ್ಶನ ನಡೆದಿದ್ದು, 21ನೇ ಶತಮಾನದ ಮೊದಲ ಪಂಚಲಿಂಗ ದರ್ಶನವಾಗಿ 2006 ನವೆಂಬರ್ 20 ರಂದು ನಡೆದಿದೆ. ಆ ನಂತರ 2009ನೇ ನವೆಂಬರ್ 16 ರಂದು ನಡೆದಿದೆ, ಇದಾದ ಬಳಿಕ 2013 ರಲ್ಲಿ ಡಿಸೆಂಬರ್ 2 ರಂದು ಪಂಚಲಿಂಗ ದರ್ಶನ ನಡೆದಿತ್ತು. ಇದೀಗ 2020 ಡಿಸೆಂಬರ್ 14 ರಂದು ನಡೆಯುತ್ತಿರುವುದು ವಿಶೇಷವಾಗಿದೆ.