ಜಂಬೂಸವಾರಿ ಹಿಂದಿನ ಗಜಪಡೆಯ ತಾಲೀಮು ಹೇಗಿರುತ್ತೆ ಗೊತ್ತಾ?
ಮೈಸೂರು, ಆಗಸ್ಟ್ 30: ನಾಡ ಹಬ್ಬ ದಸರಾಕ್ಕೆ ಮೈಸೂರು ನಿಧಾನವಾಗಿ ಅಣಿಯಾಗುತ್ತಿದೆ. ಸಚಿವ ವಿ.ಸೋಮಣ್ಣ ಅವರ ಉಸ್ತುವಾರಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ದಸರಾಗೆ ಬೇಕಾದ ತಯಾರಿಗಳನ್ನು ಮಾಡುತ್ತಿದ್ದು, ಯಶಸ್ವಿ ದಸರಾ ನಡೆಸಲು ಟೊಂಕ ಕಟ್ಟಿ ನಿಂತಿದ್ದಾರೆ.
ಇನ್ನೊಂದೆಡೆ ಅಂಬಾರಿ ಹೊರುವ ಅರ್ಜುನನ ನೇತೃತ್ವದಲ್ಲಿ ಮೊದಲ ಹಂತದ ಗಜಪಡೆ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದು, ಅವುಗಳಿಗೆ ತಾಲೀಮು ಕೂಡ ಆರಂಭವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಜಂಬೂ ಸವಾರಿ ಸಾಗುವ ಹಾದಿಯಲ್ಲಿ ತಾಲೀಮು ನಡೆಸಲಾಗುತ್ತಿದೆ. ಈಗಾಗಲೇ ಅರ್ಜುನ ನೇತೃತ್ವದಲ್ಲಿ ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರ ಆನೆಗಳ ತಾಲೀಮು ನಡೆಯುತ್ತಿದ್ದು, ಈಗಾಗಲೇ ಅವುಗಳಿಗೆ ಭೂರಿ ಭೋಜನ, ಗಜಮಜ್ಜನ ಎಲ್ಲವೂ ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಎರಡನೇ ಹಂತದ ಗಜಪಡೆ ಅರಮನೆಗೆ ಆಗಮಿಸಲಿದ್ದು, ಮೊದಲ ಹಂತದ ಗಜಪಡೆಯೊಂದಿಗೆ ಇವು ಸೇರಿಕೊಳ್ಳಲಿವೆ.
ಅರ್ಜುನ ಸಾರಥ್ಯದಲ್ಲಿ ಆರಂಭವಾಗಿದೆ ಜಂಬೂಸವಾರಿ ತಾಲೀಮು
ತಾಲೀಮಿನ ಮೊದಲ ಹಂತವಾಗಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಯಾವುದೇ ಭಾರವಿಲ್ಲದೆ ಹಾಗೆಯೇ ಸಾಗಿ ಬರಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಇವುಗಳ ಮೆರವಣಿಗೆ ನಡೆಯುತ್ತದೆ. ಒಂದರ ಹಿಂದೆ ಒಂದು ನಡೆಯುತ್ತವೆ. ಆ ಮೂಲಕ ಜನ ಜಂಗುಳಿ, ವಾಹನ ಸದ್ದು ಮೊದಲಾದವುಗಳನ್ನು ಪರಿಚಯಿಸಲಾಗುತ್ತದೆ.
ಇದಾದ ಬಳಿಕ ಅಂಬಾರಿ ಹೊರುವ ಅರ್ಜುನ ಮಾತ್ರವಲ್ಲದೆ, ಎಲ್ಲ ಆನೆಗಳ ಬೆನ್ನಿಗೆ ಉಸುಕಿನ ಮೂಟೆಯನ್ನು ಕಟ್ಟಿ ಅದರ ಮೇಲೆ ಮರಳಿನ ಮೂಟೆಗಳನ್ನು ಹೊರಿಸಿ ನಿಧಾನವಾಗಿ ಭಾರ ಹೊರುವ ತಾಲೀಮನ್ನು ನಡೆಸಲಾಗುತ್ತದೆ. ಇದಕ್ಕೆ ಆನೆಗಳು ಒಗ್ಗಿಕೊಳ್ಳುತ್ತಿದ್ದಂತೆಯೇ ತಾಲೀಮು ಕಠಿಣವಾಗುತ್ತಾ ಹೋಗುತ್ತದೆ.
ದಸರಾ ಆನೆಗಳಿಗೆ ಬರೋಬ್ಬರಿ 98 ಲಕ್ಷದ ವಿಮೆ !
ಅರಮನೆಯಿಂದ ರಾಜ ಮಾರ್ಗದಲ್ಲಿ ಸುಮಾರು ಐದು ಕಿ.ಮೀ.ನಷ್ಟು ದೂರದಲ್ಲಿರುವ ಬನ್ನಿಮಂಟಪದವರೆಗೆ ನಡೆಯುವ ತಾಲೀಮು ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುತ್ತದೆ. ಜತೆಗೆ ಬೆನ್ನ ಮೇಲಿನ ಭಾರವೂ ಹೆಚ್ಚಾಗುತ್ತದೆ. ಇನ್ನು ಜಂಬೂ ಸವಾರಿಯ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಅಂಬಾರಿಯನ್ನೇ ಹೋಲುವ ಮತ್ತು ಅಷ್ಟೇ ಭಾರವಿರುವ ಮರದ ಅಂಬಾರಿಯನ್ನು ಅರ್ಜುನನಿಗೆ ಕಟ್ಟಿ ತಾಲೀಮು ನಡೆಸಲಾಗುತ್ತದೆ. ಆ ಮೂಲಕ ಜಂಬೂಸವಾರಿಯಂದು ಯಾವುದೇ ತೊಂದರೆಯಾಗದಂತೆ ಚಿನ್ನದ ಅಂಬಾರಿ ಹೊತ್ತು ಸಾಗಲು ಸದೃಢಗೊಳಿಸಲಾಗುತ್ತದೆ.
ಇದರ ನಡುವೆ ಬಹುಮುಖ್ಯವಾದ ಭಾರೀ ಸದ್ದಿನ ಸಿಡಿ ಮದ್ದುಗಳ ತಾಲೀಮು ಕೂಡ ನಡೆಯಲಿದೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಒಂದೆಡೆ ನಿಲ್ಲಿಸಿ ಅವುಗಳ ಎದುರು ಭಾರೀ ಸದ್ದಿನ ಸಿಡಿ ಮದ್ದುಗಳನ್ನು ಸಿಡಿಸಿ ಶಬ್ದಕ್ಕೆ ಹೆದರದೆ ಧೈರ್ಯವಾಗಿ ನಿಲ್ಲುವ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ. ಸಿಡಿಮದ್ದಿನ ತಾಲೀಮು ಕೂಡ ಹಲವು ಹಂತಗಳಲ್ಲಿ ನಡೆಯಲಿದ್ದು, ಮೊದಮೊದಲು ಆನೆಗಳು ಬೆದರಿದಂತೆ ಕಂಡರೂ ಬಳಿಕ ಆ ಶಬ್ದವನ್ನು ಎದುರಿಸಿ ನಿಲ್ಲುವ ಧೈರ್ಯ ಅವುಗಳಿಗೆ ಬರುತ್ತದೆ.
ಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾ
ಜಂಬೂಸವಾರಿಗೆ ದಿನಗಳು ಹತ್ತಿರವಾದಂತೆಲ್ಲ ಕಠಿಣ ತಾಲೀಮು ನಡೆಸಿ ಗಜಪಡೆಯನ್ನು ಸರ್ವ ಸಿದ್ಧಗೊಳಿಸಲಾಗುತ್ತದೆ. ಈ ತಾಲೀಮು ಇವತ್ತು ನಿನ್ನೆಯದಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಇಲ್ಲಿ ತಾಲೀಮನ್ನು ಯಶಸ್ವಿಯಾಗಿ ನಡೆಸುವ ಮಾವುತರು, ಕಾವಾಡಿಗಳು ಮತ್ತು ಅರಣ್ಯ ಅಧಿಕಾರಿಗಳ ಕಾರ್ಯ ವೈಖರಿಯನ್ನು ಶ್ಲಾಘಿಸಲೇಬೇಕಾಗುತ್ತದೆ.