ಕೊರೊನಾ ವೈರಸ್: ನಂಜನಗೂಡು ಜ್ಯುಬಿಲಿಯಂಟ್ ಕಂಪನಿ ಸೋಂಕು ಪ್ರಕರಣಕ್ಕೆ ತಿರುವು!
ಬೆಂಗಳೂರು, ಏಪ್ರಿಲ್. 22: ಮೈಸೂರು ಜಿಲ್ಲೆ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆ ನೌಕರನಿಗೆ ಕೊರೊನಾ ವೈರಸ್ ಹೇಗೆ ತಗುಲಿತು ಎಂಬುದು ಈಗಲೂ ನಿಗೂಢವಾಗಿದೆ. ಜ್ಯಬಿಲಿಯಂಟ್ ಕಂಪನಿಯ 46 ಮಂದಿಗೆ ಕೊರೊನಾ ಸೋಂಕು ತಗುಲಿದ್ದ ಬಗೆ ಮಾತ್ರ ನಿಗೂಢವಾಗಿದೆ. ಕಂಪನಿಯ ಉದ್ಯೋಗಿಯಾಗಿರುವ ಪೆಶಂಟ್ ನಂಬರ್ 52ಕ್ಕೆ ಸೋಂಕು ಎಲ್ಲಿಂದ ಬಂತು ಎಂಬುದು ಈಗಲೂ ನಿಗೂಢವಾಗಿದೆ.
ಸರ್ಕಾರಕ್ಕೂ ಜ್ಯುಬಿಲಿಯಂಟ್ ಕಂಪನಿಯ ಪ್ರಕರಣ ನಿಗೂಢವಾಗಿದೆ ಎಂದು ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿರುವ ಅವರು, ಚೀನಾದಿಂದ ಬಂದ ಕಂಟೈನರ್ನಿಂದ ಸೋಂಕು ಹರಡಿದೆ ಎನ್ನಲಾಗಿತ್ತು, ಅದು ಈಗ ಕಂಟೇನರ್ ಪರೀಕ್ಷೆ ಕೂಡ ನೆಗೆಟಿವ್ ಬಂದಿದೆ. ಈ ಫ್ಯಾಕ್ಟರಿಗೆ ಯಾರು ಬಂದಿದ್ದರು ಎನ್ನುವುದು ನಿಗೂಢವಾಗಿದೆ. ಇಂದಿಗೆ ಜ್ಯುಬಿಲಿಯಂಟ್ ನೌಕರರ ಪರೀಕ್ಷೆ ಅಂತಿಮವಾಗಿದೆ.
ಕೊರೊನಾ ವಿರುದ್ಧ ಹೋರಾಟ: ಸೈನಿಕರಿಗೆ ಹಳೆ ವಿದ್ಯಾರ್ಥಿಗಳ ಸಹಾಯ
ಎಲ್ಲ ನೌಕರರ ರಕ್ತ ಪರೀಕ್ಷೆ ಮಾಡಲಾಗಿದೆ. ಕಳೆದ ಐದಾರು ತಿಂಗಳಿಂದ ಈಚೆಗೆ ಫ್ಯಾಕ್ಟರಿಗೆ ಯಾವ ದೇಶದಿಂದ, ಎಲ್ಲಿಂದ ಯಾರು ಬಂದಿದ್ದರು ಎನ್ನುವುದರ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗಲು ತಬ್ಲಿಘಿ ಜಮಾತ್ ಮತ್ತು ಜ್ಯುಬಿಲಿಯಂಟ್ ಕಾರಣ ಎಂದು ಸೋಮಶೇಖರ್ ಹೇಳಿದ್ದಾರೆ. ಜೊತೆಗೆ ರಾಜ್ಯದಲ್ಲಿ ಸೋಂಕು ಹೆಚ್ಚಾಗಲು ಜ್ಯುಬಿಲಿಯಂಟ್ ಕಂಪನಿ ಕಾರಣ ಎನ್ನುವ ಮೂಲಕ ಪ್ರಕರಣಕ್ಕೆ ತಿರುವು ಕೊಟ್ಟಿದ್ದಾರೆ.
ಮೈಸೂರು ನಗರದಲ್ಲಿ 12 ಕಂಟೈನ್ಮೆಂಟ್ ವಲಯ: ಮೈಸೂರು ನಗರದ ಮೀನ ಬಜಾರ್, ಎಸ್ವಿಪಿ ನಗರ, ಟೀಚರ್ಸ್ ಲೇಔಟ್, ಜನತಾ ನಗರ, ಕುವೆಂಪು ನಗರ, ವಿಜಯನಗರ 1& 2 ನೇ ಹಂತ, ಗೋಕುಲಂ, ಜಯಲಕ್ಷ್ಮೀ ಪುರಂ, ಶ್ರೀರಾಂಪುರ 2 ನೇ ಹಂತ, ಜೆಪಿನಗರ, ನಜರಬಾದ್ ಏರಿಯಾಗಳನ್ನ ಕಂಟೈನ್ಮೆಂಟ್ ಝೋನ್ಗಳೆಂದು ಘೋಷಣೆ ಮಾಡಲಾಗಿದೆ. ಜೊತೆಗೆ ನಂಜನಗೂಡಿನ ಸಮೀಪದ ಐದು ಗ್ರಾಮಗಳನ್ನು ಸೀಲ್ಡೌನ್ ಮಾಡಲಾಗಿದೆ. ನಂಜನಗೂಡು ತಾಲೂಕಿನ ಕೂಗಲೂರು, ಬ್ಯಾಳರು, ದೇವರಸನಹಳ್ಳಿ, ತಾಂಡವಪುರ ಮತ್ತು ಬಸವಪುರ ಗ್ರಾಮಗಳಲ್ಲಿ ಸೀಲ್ಡೌನ್ ಮಾಡಲಾಗಿದೆ. ಕಳೆದ ಎರಡು ತಿಂಗಳುಗಳಿಂದ ತನಿಖೆ ನಡೆಯುತ್ತಿದ್ದರೂ ಜ್ಯುಬಿಲಿಯಂಟ್ ಕಾರ್ಖಾನೆ ಸೋಂಕಿನ ಮೂಲ ಪತ್ತೆಯಾಗಿಲ್ಲ.