ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ!
ಮೈಸೂರು, ನವೆಂಬರ್ 25; ಮೈಸೂರು ಭಾಗದಲ್ಲಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯ ಅಖಾಡ ರಂಗೇರಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿಯಾಗಿದ್ದು ಮಾತ್ರ ರೋಚಕ ಕಹಾನಿ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, 14ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಜಕೀಯದಲ್ಲಿ ಯಾರೂ ದೀರ್ಘಕಾಲದ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 'ಕೈ' ಪಾಳಯದಲ್ಲಿ ಎಂಎಲ್ಸಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗೆ ಜೆಡಿಎಸ್ ಮಣೆ ಹಾಕಿದೆ. ರಾತ್ರೋರಾತ್ರಿ ಕಾಂಗ್ರೆಸ್ ಮುಖಂಡನನ್ನು ಹೈಜಾಕ್ ಮಾಡಿದ ಜೆಡಿಎಸ್ 'ಕಾಂಗ್ರೆಸ್' ಚೆಕ್ಮೇಟ್ ಹೇಳಿದೆ.
ಪರಿಷತ್ ಚುನಾವಣೆ: ಕೈ- ಕಮಲ ನಾಯಕರಿಗೆ ಸಂಸದೆ ಸುಮಲತಾ ರವಾನಿಸಿದ ಸಂದೇಶವೇನು?
ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ನಿಂದ ಡಾ. ತಿಮ್ಮಯ್ಯ, ಬಿಜೆಪಿಯಿಂದ ರಘು ಕೌಟಿಲ್ಯ ಮತ್ತು ಜೆಡಿಎಸ್ನಿಂದ ಸಿ. ಎನ್. ಮಂಜೇಗೌಡ ಅಭ್ಯರ್ಥಿಗಳು.
ಪರಿಷತ್ ಫೈಟ್; ಸರ್ಕಾರಿ ಅಧಿಕಾರಿ ಕೈಯಲ್ಲಿ ಕಾಂಗ್ರೆಸ್ ಬಿ-ಫಾರಂ!
ಕಾಂಗ್ರೆಸ್ನಲ್ಲಿ ಸಿ. ಎನ್. ಮಂಜೇಗೌಡ ಮೇಲ್ಮನೆ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಅಲ್ಲದೆ, ಇವರು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೂ ಕೂಡ ಆಗಿದ್ದರು. ನಾನು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ಇಲ್ಲಿಯವರೆಗೆ ಪಕ್ಷದಿಂದ ನನಗೆ ಯಾವುದೇ ಹುದ್ದೆ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮೇಲ್ಮನೆಗೆ ನನಗೆ ಅವಕಾಶ ನೀಡಬೇಕು ಎಂದು ಸಿ. ಎನ್. ಮಂಜೇಗೌಡ ಪ್ರಬಲ ವಾದ ಮಂಡಿಸಿದ್ದರು. ಆದರೆ, ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಅಲ್ಲದೆ, ಕಳೆದ 3-4 ತಿಂಗಳಿನಿಂದ ಜೆಡಿಎಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದರು.
ಪರಿಷತ್ ಫೈಟ್; ಕುಟುಂಬ ರಾಜಕೀಯದ ಬಗ್ಗೆ ಬಿಜೆಪಿ ಟ್ವೀಟ್!
ಮಧ್ಯರಾತ್ರಿ ಅಭ್ಯರ್ಥಿ ಘೋಷಣೆ
ಎಂದಿನಂತೆ ಜೆಡಿಎಸ್ ಕೊನೆ ಕ್ಷಣದ ಅಚ್ಚರಿಯ ನಡೆ ಅನುಸರಿಸಿದ್ದು, ಕಾಂಗ್ರೆಸ್ಗೆ 'ಚೆಕ್ಮೇಟ್' ನೀಡಿದೆ. ಮಧ್ಯರಾತ್ರಿ ಕಾಂಗ್ರೆಸ್ ಆಕಾಂಕ್ಷಿಯನ್ನು ಜೆಡಿಎಸ್ ಅಭ್ಯರ್ಥಿಯೆಂದು ಘೋಷಿಸಿ ಪ್ರತಿಪಕ್ಷಗಳಿಗೆ ಶಾಕ್ ನೀಡುವ ತಂತ್ರಗಾರಿಕೆ ರೂಪಿಸಿದೆ. ನಿರೀಕ್ಷೆಯಂತೆ ಕೊನೇ ಕ್ಷಣದವರೆಗೆ ಜೆಡಿಎಸ್ ಮುಖಂಡರು ಗುಟ್ಟು ಬಿಟ್ಟುಕೊಡಲಿಲ್ಲ. ಹಾಲಿ ಸದಸ್ಯ ಸಂದೇಶ್ ನಾಗರಾಜ್ ಪಕ್ಷವನ್ನು ತೊರೆಯುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಹಾಗೂ ಕಳೆದ ಮೂರು ವರ್ಷಗಳಿಂದ ಪಕ್ಷದ ಮುಖಂಡ ಎಚ್. ಡಿ. ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಹೊಸ ಮುಖದ ಅನ್ವೇಷಣೆಯಲ್ಲಿತ್ತು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್
ಪಕ್ಷದಲ್ಲಿ ಕೆಲವರು ನಾಮಕಾವಸ್ಥೆಗೆ ಟಿಕೆಟ್ ಕೇಳಿದ್ದರೂ ಅವರು ಯಾರೂ ಸ್ಪರ್ಧಿಸುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಹಾಗಾದರೆ, ಈ ಬಾರಿ ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯಲಿರುವ ದ್ವಿಸದಸ್ಯ ಕ್ಷೇತ್ರದಿಂದ ಸ್ಪರ್ಧಿಸುವವರು ಯಾರು ಎನ್ನುವ ಕುತೂಹಲವಿತ್ತು.
ಅಂತಿಮವಾಗಿ ಜೆಡಿಎಸ್ ಕಾಂಗ್ರೆಸ್ ಆಕಾಂಕ್ಷಿಗೆ ಟಿಕೆಟ್ ನೀಡಿ ಶಾಕ್ ನೀಡಿದೆ. ನಾಮಪತ್ರ ಸಲ್ಲಿಸುವ ಹಿಂದಿನ ದಿನ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಿ. ಎನ್. ಮಂಜೇಗೌಡ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಮಧ್ಯರಾತ್ರಿ ಖುದ್ದು ಕುಮಾರಸ್ವಾಮಿ ಮಂಜೇಗೌಡರನ್ನು ಜೆಡಿಎಸ್ ಅಭ್ಯರ್ಥಿಯೆಂದು ಘೋಷಣೆ ಮಾಡಿದರು.
ಅತೃಪ್ತರತ್ತ ಗಾಳ
ಚುನಾವಣೆಯಲ್ಲಿ ಪಕ್ಷದ ಪ್ರಭಾವದೊಂದಿಗೆ ಹಣ ವೆಚ್ಚ ಮಾಡುವ ಅಭ್ಯರ್ಥಿಯ ಅಗತ್ಯ ಇದ್ದ ಹಿನ್ನಲೆಯಲ್ಲಿ ಇತರ ಪಕ್ಷಗಳ ಅತೃಪ್ತರತ್ತ ಕಣ್ಣು ಹಾಕಿದ್ದ ಜೆಡಿಎಸ್ನ ದೃಷ್ಟಿಗೆ ಸುಲಭವಾಗಿ ಮಂಜೇಗೌಡರು ಬಿದ್ದರು. ಹೆಚ್ಚಿನ ಚರ್ಚೆ ಇಲ್ಲದೆ ಮಂಜೇಗೌಡ ಜೆಡಿಎಸ್ಗೆ ಬರಲು ಒಪ್ಪಿದರು. ದಿನಬೆಳಗಾಗುವುದರೊಳಗೆ ಕೊರಳಿನಿಂದ ಕೈಶಲ್ಯವನ್ನು ಬದಲಾಯಿಸಿ ತೆನೆಹೊತ್ತ ಮಹಿಳೆಯ ಶಲ್ಯವನ್ನು ಮಂಜೇಗೌಡರು ಧರಿಸಿ ಶಾಸಕ ಸಾ. ರಾ. ಮಹೇಶ್ ಅವರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಸಾ. ರಾ. ಮಹೇಶ್ ಕಿಂಗ್ ಮೇಕರ್
ಸಿ. ಎನ್. ಮಂಜೇಗೌಡಗೆ ಟಿಕೆಟ್ ಕೊಡಿಸುವಲ್ಲಿ ಕೆ. ಆರ್. ನಗರದ ಶಾಸಕ ಸಾ. ರಾ. ಮಹೇಶ್ ಪ್ರಧಾನ ಪಾತ್ರ ವಹಿಸಿದ್ದರು. ಮೈಸೂರು ಭಾಗದಲ್ಲಿ ಪಕ್ಷದ ವರ್ಚಸ್ಸು ಉಳಿಕೊಳ್ಳಬೇಕಾದರೆ ಹಾಗೂ ಎಚ್. ಡಿ. ಕುಮಾರಸ್ವಾಮಿ ವಿರೋಧಿಗಳಿಗೆ ಸೂಕ್ತ ಸಂದೇಶ ನೀಡಲು ಮಂಜೇಗೌಡ ನಿಲ್ಲಿಸುವುದು ಜೆಡಿಎಸ್ಗೂ ಅನಿವಾರ್ಯವಾಗಿತ್ತು. ಸದ್ಯ ಕಿಂಗ್ ಮೇಯರ್ ಆಗಿರುವ ಸಾ. ರಾ. ಮಹೇಶ್ ಮಂಜೇಗೌಡರನ್ನು ಗೆಲ್ಲಿಸಿ ಪಕ್ಷದಿಂದ ಹೊರ ಹೋಗುತ್ತಿರುವ ಜಿ. ಟಿ. ದೇವೇಗೌಡ ಹಾಗೂ ಸಂದೇಶ್ ನಾಗರಾಜ್ ಅವರಿಗೆ ಸ್ಪಷ್ಟ ಸಂದೇಶ ನೀಡುವ ಉತ್ಸಾಹದಲ್ಲಿದ್ದಾರೆ.