ಮೈಸೂರು: ಕೋವಿಡ್ನಿಂದ ಮೃತಪಟ್ಟ ಶವ ಕೊಡಲು ಹಣಕ್ಕೆ ಬೇಡಿಕೆ; ದಾಂಧಲೆ
ಮೈಸೂರು, ಮೇ 7: ಕೋವಿಡ್ನಿಂದ ಮೃತಪಟ್ಟ ದೇಹ ಕೊಡಲು ಹಣಕ್ಕಾಗಿ ಪಟ್ಟು ಹಿಡಿದ ಮೈಸೂರಿನ ಮಿಷನ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಮೃತ ವ್ಯಕ್ತಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಮುಂದೆ ಕಲ್ಲು ತೂರಲು ಮುಂದಾದ ಘಟನೆ ನಡೆದಿದೆ.
ಮೈಸೂರಿನ ಗೌಸಿಯಾ ನಗರದ ನಿವಾಸಿ ವಾಜೀದ್ ಪಾಷ ಕೊರೊನಾ ಸೋಂಕಿಗೆ ತುತ್ತಾಗಿ ಕಳೆದ ಒಂದು ವಾರದ ಹಿಂದೆ ಮಿಷನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಸಂಜೆ ವಾಜೀದ್ ಪಾಷ ಸಾವನ್ನಪ್ಪಿದ್ದಾರೆ.
ಈ ಮಧ್ಯೆ ಮೃತ ದೇಹ ಕೊಡಲು ಹಣ ನೀಡುವಂತೆ ಮಿಷನ್ ಆಸ್ಪತ್ರೆ ಆಡಳಿತ ಮಂಡಳಿ ಪಟ್ಟ ಹಿಡಿದಿದ್ದು, ಆಡಳಿತ ಮಂಡಳಿ ವಿರುದ್ಧ ಮೃತನ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾವು ಬಡವರು ಸರ್, ಇಷ್ಟೊಂದು ದುಡ್ಡು ನಾವೆಲ್ಲಿಂದ ತರೋದು. ಆಸ್ಪತ್ರೆಯವರು ಎಲ್ಲರನ್ನು ಸಾಯಿಸ್ತಿದ್ದಾರೆ. ಇಲ್ಲಿ ಯಾವ ಚಿಕಿತ್ಸೆನೂ ಕೊಡಲ್ಲ. ಈ ಆಸ್ಪತ್ರೆಯವರು, ಸರ್ಕಾರದವರು ಎಲ್ರೂ ಹಣ ಮಾಡೋಕೆ ಈ ತರಾ ಮಾಡ್ತಿದ್ದಾರೆ. ಕೊರೊನಾ ಪಾಸಿಟಿವ್ ಅಂತಾ ಹೇಳಿದ್ರು, ಈಗ ನಮ್ಮ ಹುಡುಗ ಸತ್ತೊಗಿದ್ದಾನೆ'' ಎಂದು ಮೃತನ ಸಂಬಂಧಿ ಅಳಲು ತೋಡಿಕೊಂಡರು.
ಇನ್ನು ಮೃತದೇಹ ಕೊಡಲು ಹಣ ಕೇಳಿದಕ್ಕೆ ಸಂಬಂಧಿಕರು ಮಿಷನ್ ಆಸ್ಪತ್ರೆ ಮುಂಭಾಗ ಕಲ್ಲು ರಾಶಿ ಇಟ್ಟು, ಕಾಲಿನಲ್ಲಿ ಆಸ್ಪತ್ರೆ ಗೇಟ್ ಗೆ ಒದ್ದು, ಕಲ್ಲು ತೂರುವುದಾಗಿ ಬೆದರಿಕೆ ಹಾಕಿದ ಘಟನೆ ನಡೆಯಿತು. ಈ ವೇಳೆ ತಕ್ಷಣವೇ ಮಂಡಿ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಸ್ಥಿತಿ ಹತೋಟಿಗೆ ತಂದರು.