ಮೈಸೂರಿನಲ್ಲಿ ಮರುಕಳಿಸಿದೆಯಾ ಮರ್ಯಾದಾ ಹತ್ಯೆ ?
ಮೈಸೂರು, ಮಾರ್ಚ್ 1 : ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ನಡೆದ ಮರ್ಯಾದಾ ಹತ್ಯೆ ನೆನಪಿನಿಂದ ಮಾಸುವ ಮುನ್ನವೇ ಅಂತದೇ ಘಟನೆ ಮರುಕಳಿಸಿದೆ. ಹೌದು, ಹೆಚ್. ಡಿ ಕೋಟೆ ತಾಲ್ಲೂಕಿನ ಗೊಲ್ಲನಬೀಡು ಗ್ರಾಮದಲ್ಲಿ ಯುವತಿಯೊಬ್ಬಳು ಮರ್ಯಾದಾ ಹತ್ಯೆಗೆ ಬಲಿಯಾಗಿರುವ ಘಟನೆ ನಡೆದಿದೆ. ಗೊಲ್ಲನಬೀಡು ಗ್ರಾಮದ ಒಕ್ಕಲಿಗ ಜನಾಂಗದ ಯುವತಿ ಸಮೀಪದ ಆಲನಹಳ್ಳಿಯ ದಲಿತ ಜನಾಂಗದ ಯುವಕನನ್ನು ಪೀತಿಸಿ ಮದುವೆಯಾಗಿದ್ದರಿಂದ ಮರ್ಯಾದಾ ಹತ್ಯೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.
ಒಕ್ಕಲಿಗ ಜನಾಂಗದ ಯುವತಿ ಮತ್ತು ದಲಿತ ಜನಾಂಗದ ಯುವಕ 1 ವರ್ಷದಿಂದ ಪೀತಿಸುತ್ತಿದ್ದರು. ಪೋಷಕರವಿರೋಧ ಬರಬಹುದೆಂದು ಮನೆ ತೊರೆದಿದ್ದರು ಎಂದು ತಿಳಿದುಬಂದಿದೆ. ಕೆಲ ಮುಖಂಡರು, ಚುನಾಯಿತ ಪ್ರತಿನಿಧಿಗಳು ಸೇರಿಕೊಂಡು ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿ ಯುವತಿ ಮತ್ತು ಯುವಕನನ್ನು ಬೇರೆ ಮಾಡಿದ್ದರು. ಇತ್ತೀಚೆಗೆ ಯುವತಿಯ ಪೋಷಕರು ಒಕ್ಕಲಿಗ ಜನಾಂಗದ ಹುಡುಗನೊಂದಿಗೆ ಮದುವೆ ಮಾಡಲು ಮುಂದಾದಾಗ ಯುವತಿ ವಿರೋಧಿಸಿದ್ದಳು. ತಾನು ಪ್ರೀತಿಸಿದ್ದ ದಲಿತ ಜನಾಂಗದ ಯುವಕನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದಿದ್ದಳು ಎನ್ನಲಾಗಿದೆ.
ಇದೆಲ್ಲದರಿಂದ ಯುವತಿಯ ಪೋಷಕರು ತೀವ್ರ ಮನನೊಂದಿದ್ದರು. 3 ದಿನಗಳ ಹಿಂದೆ ಗೊಲ್ಲನಬೀಡಿನ ತೋಟದ ಮನೆಯ ಸಮೀಪದಲ್ಲಿ ಬಾಳೆ ತೋಟದ ಹತ್ತಿರ ಪುತಿಗೆ ಕ್ರಿಮಿನಾಶಕ ಕುಡಿಸಿ, ಆಕೆ ಸಾವನ್ನಪ್ಪಿದ ನಂತರ ಶವವನ್ನು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ಗ್ರಾಮದಲ್ಲಿ ಅನುಮಾನದ ಮಾತುಗಳು ಕೇಳಿಬರಲಾರಂಭಿಸಿದವು. ಯುವಕನ ಸಂಬಂಧಿಕರೊಬ್ಬರು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ ಪಟ್ಟಣದ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಆ ಬಳಿಕ ಎಚ್.ಡಿ.ಕೋಟೆ ಪಟ್ಟಣ ಠಾಣೆಯ ಪಿಎಸ್ಐ ಅಶೋಕ್ ಅವರು ಯುವತಿಯ ತಂದೆ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.