ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮೈಸೂರಿನ ಆಟೋ ಚಾಲಕ!
ಮೈಸೂರು, ನವೆಂಬರ್, 24 : ಬೇರೆಯವರ ಒಂದು ರೂಪಾಯಿ ಸಿಕ್ಕರೂ ಸಾಕು ಎತ್ತಿ ಜೇಬಿಗಿಳಿಸಿಕೊಂಡು, 'ಯಾರ್ದೊ ದುಡ್ಡು ಎಲ್ಲಮ್ಮನ ಜಾತ್ರೆ' ಎನ್ನುತ್ತಾ ಕಂಡವರ ಹಣದಲ್ಲಿ ಮಜಾ ಮಾಡುವವರೇ ಈ ಕಾಲದಲ್ಲಿ ಹೆಚ್ಚು. ಆದರೆ ಇಲ್ಲೊಬ್ಬ ಆಟೋಚಾಲಕ 'ಪ್ರಾಮಾಣಿಕತೆಯೇ ಬದುಕು' ಎಂದು ತಿಳಿದು ಜನ ಮೆಚ್ಚುವ ಕೆಲಸ ಮಾಡಿದ್ದಾನೆ. ಇಲ್ಲಿದೆ ನೋಡಿ ಆತನ ಪ್ರಾಮಾಣಿಕತೆಯ ಕಥೆ.
ಮೈಸೂರು ನಗರದ ಮಹದೇವಪುರ ನಿವಾಸಿ ಆಟೋ ಚಾಲಕ ಶಂಕರ್ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಈತ ತನ್ನ ಆಟೋದಲ್ಲಿ ಮಹಿಳೆ ಬಿಟ್ಟು ಹೋಗಿದ್ದ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾನೆ. ಚಿನ್ನಾಭರಣ ಕಳೆದುಕೊಂಡ ಮಹಿಳೆ ಚಾಮರಾಜನಗರದ ಕಾಗಲವಾಡಿಯ ಶ್ವೇತಾ ಎಂದು ತಿಳಿದು ಬಂದಿದೆ.[ಮಂಗಳೂರಿನ ಹೋಮ್ ಗಾರ್ಡ್ ಗೊಂದು ಸೆಲ್ಯೂಟ್ ಸಲ್ಲಿಸಿ]
ಆಟೋ ಚಾಲಕ ಶಂಕರ್ ಜೆಎಸ್ಎಸ್ ಆಸ್ಪತ್ರೆ ಮುಂಭಾಗದ ಆಟೋ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಅದರಂತೆ ಚಾಮರಾಜನಗರದ ಶ್ವೇತಾ ಜೆಎಸ್ಎಸ್ ಆಸ್ಪತ್ರೆ ಬಳಿಯಿಂದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಟೋ ಹತ್ತಿದ್ದಾರೆ.[ಸಮಯಪ್ರಜ್ಞೆ ಮೆರೆದ ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ಸಲಾಂ!]
ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಇಳಿದ ಶ್ವೇತಾ ಆತುರದಲ್ಲಿ ಸೀಟಿನ ಮೇಲೆ ಬ್ಯಾಗ್ ಬಿಟ್ಟು ಹೋಗಿದ್ದಾರೆ. ಆಗ ಚಾಲಕ ಶಂಕರ್ ತಕ್ಷಣ ಶ್ವೇತಾ ಬಿಟ್ಟು ಹೋದ ಬ್ಯಾಗ್ ನೋಡಿದಾಗ ಅದರಲ್ಲಿ ಚಿನ್ನಾಭರಣ, ಹಣ ಇರುವುದು ಕಂಡುಬಂದಿದೆ. ಕೂಡಲೇ ಅವರು ಕೆ.ಆರ್.ಪೊಲೀಸ್ ಠಾಣೆಗೆ ತೆರಳಿ ಚಿನ್ನಾಭರಣ ಹಾಗೂ ಹಣವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆಟೋ ಚಾಲಕ ಶಂಕರ್ ಅವರ ಪ್ರಾಮಾಣಿಕತೆಯನ್ನು ಪ್ರಶಂಸಿಸಿದ್ದಾರೆ.