ಶತಮಾನಗಳ ಇತಿಹಾಸವಿರುವ ಮೈಸೂರು ಸ್ಯಾಂಡಲ್ ಸೋಪ್
ಮೈಸೂರು, ಸೆಪ್ಟೆಂಬರ್ 14 : ಮೈಸೂರು ಸ್ಯಾಂಡಲ್ ಸೋಪ್ ಈ ಹೆಸರು ಕೇಳದ ಮಂದಿ ಬಹುಶಃ ನಮ್ಮ ರಾಜ್ಯದಲ್ಲಿ ಇಲ್ಲವೇನೋ! ದೇಶ, ವಿದೇಶಗಳಲ್ಲಿ ಕಂಪು ಸೂಸಿ ಕರ್ನಾಟಕದ ಹೆಮ್ಮೆಯೆನಿಸಿಕೊಂಡ ನಮ್ಮದೇ ಸಾಬೂನು. ಮೈಸೂರು ಸ್ಯಾಂಡಲ್ ಸೋಪಿನ ಈ ಸುಗಂಧಕ್ಕೆ 100 ತುಂಬಿದೆ. ಮೈಸೂರು ಸ್ಯಾಂಡಲ್ ಸೋಪ್ ಭಾರತದಲ್ಲಿರುವ ಅತೀ ದೊಡ್ಡ ಸೋಪ್ ನಿರ್ಮಾಣ ಕಂಪನಿಗಳಲ್ಲೊಂದಾಗಿದೆ. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಕಂಪನಿಯೆಂಬ ಕರ್ನಾಟಕ ಸರ್ಕಾರದ ಸಂಸ್ಥೆ, ಮೈಸೂರು ಮತ್ತು ದಕ್ಷಿಣ ಭಾರತದ ಚರಿತ್ರೆಯಲ್ಲಿ ಸದಾ ಉಲ್ಲೇಖನೀಯವಾಗಿದೆ.
ಸೆ.15ರಂದು ಮೈಸೂರು ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ
ಇದು ಕರ್ನಾಟಕ ಸರ್ಕಾರದಿಂದಲೇ ತಯಾರಾಗುವ ಸಾಬೂನಿನ ಒಂದು ಬ್ರ್ಯಾಂಡ್. ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನು ಎಂದು ಪ್ರಸಿದ್ಧವಾಗಿದೆ.
ಮೈಸೂರು ಸಿಲ್ಕ್ ಸೀರೆ ಹಿಂದಿದೆ ಕುತೂಹಲಕಾರಿ ಕಥೆ
ಮೈಸೂರು ಸ್ಯಾಂಡಲ್ ಸೋಪಿನ ಹುಟ್ಟು
೧೯೧೬ರರಲ್ಲಿ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಾರಿ ಸೋಪ್ ಫ್ಯಾಕ್ಟರಿಯನ್ನು ಸ್ಥಾಪಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಶ್ರೀ ಎಸ್. ಜಿ. ಶಾಸ್ತ್ರಿ ಈ ಮೂವರು ಮೈಸೂರು ಸ್ಯಾಂಡಲ್ ಸೋಪ್ ನ ಪ್ರವರ್ತಕರು. ಮೊದಲೇ ವಿಶ್ವಯುದ್ಧದ ಕಾರಣದಿಂದ ಯುರೋಪಿಗೆ ರಫ್ತು ಸಾಧ್ಯವಾಗದಿದ್ದಾಗ ಹೇರಳವಾಗಿ ದೊರೆಯುತ್ತಿದ್ದ ಗಂಧದ ಮರ ಮತ್ತು ಹೇರಳವಾಗಿದ್ದ ಗಂಧದ ಮರದ ದಾಸ್ತಾನು ಇದಕ್ಕೆ ಮುಖ್ಯ ಪ್ರೇರಣೆಯಾಗಿತ್ತು. 1980ರಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಮತ್ತು ಶಿವಮೊಗ್ಗದ ಗಂಧದೆಣ್ಣೆ ಕಾರ್ಖಾನೆಗಳನ್ನು ಮಿಳಿತಗೊಳಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿ ಮಾಡಲಾಯಿತು.
ಸೋಪ್ ಅಷ್ಟೇ ಅಲ್ಲ!
ಸೋಪ್ ಮಾತ್ರವಲ್ಲದೆ ಇಲ್ಲಿ ಡಿಟರ್ಜೆಂಟ್ ಪೌಡರ್, ಕ್ಲೀನಿಂಗ್ ಆಯಿಲ್, ಶ್ರೀಗಂಧದ ಕಡ್ಡಿ, ಬೇಬಿ ಆಯಿಲ್, ಟಾಲ್ಕಂ ಪೌಡರ್ ಮೊದಲಾದವುಗಳನ್ನು ಕಂಪನಿ ನಿರ್ಮಿಸುತ್ತಿದೆ. ಮೈಸೂರ್ ಸ್ಯಾಂಡಲ್ಸ್ ಎಂಬುದು ಇವೆಲ್ಲದರ ಬ್ರಾಂಡ್ ನೇಮ್. ಹಲವಾರು ಉತ್ಪನ್ನಗಳನ್ನು ಕಂಪನಿ ನಿರ್ಮಿಸುತ್ತಿದ್ದರೂ ಹೆಚ್ಚಾಗಿ ಖರ್ಚಾಗುತ್ತಿರುವ ಮೈಸೂರ್ ಸ್ಯಾಂಡಲ್ ಸೋಪ್ ಆಗಿದೆ. ಒಟ್ಟು ಮಾರಾಟದ ಶೇ. 40 ರಷ್ಟು ಲಾಭ ಮೈಸೂರು ಸ್ಯಾಂಡಲ್ ಸೋಪ್ ನಿಂದಲೇ ಬರುತ್ತಿದೆ.
ಅಪಾರ ಜನಮನ್ನಣೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಸೋಪ್, ಶ್ರೀಗಂಧದ ತೈಲ, ಟಾಲ್ಕಂ ಪೌಡರ್ ಇರುವ ಸ್ಪೆಷಲ್ ಕಿಟ್ ಗಳನ್ನು ಪೂರೈಸುವ ಮೂಲಕ ಮೈಸೂರ್ ಸ್ಯಾಂಡಲ್ ಸೋಪ್ ಅಪಾರ ಜನಮನ್ನಣೆಯನ್ನೂ ಗಳಿಸಿತು. ಆದರೂ ಮಾರುಕಟ್ಟೆಯಲ್ಲಿನ ಪೈಪೋಟಿಯನ್ನು ಎದುರಿಸಲು ಪ್ರಸ್ತುತ ಸಂಸ್ಥೆಗೆ ಕಠಿಣ ಶ್ರಮ ಪಡಬೇಕಾಗಿ ಬಂತು. 2006ರ ನಂತರ ಬ್ರಾಂಡಿಂಗ್ ನತ್ತ ಸಂಸ್ಥೆ ಹೆಚ್ಚು ಗಮನ ಹರಿಸಿತು. ಆ ವರ್ಷವೇ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯನ್ನು ಮೈಸೂರ್ ಸ್ಯಾಂಡಲ್ಸ್ ನ ಬ್ರಾಂಡ್ ಅಂಬಾಸಿಡರ್ ನ್ನಾಗಿ ಮಾಡಲಾಯಿತು. ಪ್ಯಾಕೆಟ್ನಲ್ಲಿ ನವ ನವೀನತೆಯನ್ನು ಮಾಡುತ್ತಿದ್ದರೂ ಈಗಲೂ ಮೈಸೂರು ಸೋಪ್ ಪೊಟ್ಟಣದೊಳಗೆ ಮಾತ್ರ ಅದೇ ಸುಗಂಧ ಮತ್ತು ವಿಶ್ವಾಸ ಬೆರೆತಿರುತ್ತದೆ.
ಮೈಸೂರು ಗಂಧದೆಣ್ಣೆ ಉತ್ಪಾದನೆಯಲ್ಲೂ ಅಗ್ರಸ್ಥಾನ
ಮೈಸೂರು ಭಾಗದಲ್ಲಿ ಹೇರಳವಾಗಿ ಸಿಗುತ್ತಿದ್ದ ಗಂಧದ ಮರವನ್ನು ವಿವಿಧ ರೂಪಗಳಲ್ಲಿ ಬಳಕೆ ಮಾಡಿಕೊಳ್ಳುವುದರ ಫಲವೇ ಸ್ಯಾಂಡಲ್ ಸೋಪ್ ಹಾಗೂ ಗಂಧದ ಎಣ್ಣೆ ತಯಾರಿ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅನುಷ್ಠಾನಗೊಂಡ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಇದು ಕೂಡ ಒಂದು. ಜಗತ್ತಿನಲ್ಲಿ ಉತ್ಪಾದನೆಯಾಗುವ ಗಂಧದೆಣ್ಣೆಯಲ್ಲಿ ಬಹುಪಾಲು ಮೈಸೂರು ಭಾಗದಲ್ಲೇ ಉತ್ಪಾದನೆಯಾಗುತ್ತದೆ. ಗಂಧದೆಣ್ಣೆ ತೆಗೆಯಲು ಬೇಕಾಗುವ ಎಲ್ಲಾ ರೀತಿಯ ಯಂತ್ರ ಸೌಲಭ್ಯಗಳು ಮೈಸೂರಿನಲ್ಲಿನ ಕಾರ್ಖಾನೆಯಲ್ಲಿದ್ದ, ಇದು ಜಗತ್ತಿನ ಅತಿ ದೊಡ್ಡ ಹಾಗೂ ಸುಸಜ್ಜಿತ ಗಂಧದೆಣ್ಣೆಯ ಕಾರ್ಖಾನೆ ಎನಿಸಿದೆ. ಅತ್ಯಂತ ಆಧುನಿಕವಾದ ಗುಣನಿಯಂತ್ರಣ ಪ್ರಯೋಗಾಲಯವು ಕೂಡ ಇಲ್ಲಿದೆ. ಮುಂಬೈ, ಕಾನ್ಪುರ , ಕುಪ್ಪಂ , ಮೆಟ್ಟೂರು , ಸೇಲಂ ಹೀಗೆ ಮೊದಲಾದ ಕಡೆಯಲ್ಲಿಯೂ ಸಣ್ಣ ಪ್ರಮಾಣದ ಕಾರ್ಖಾನೆಗಳಿವೆ.
ಮೈಸೂರಿಂದೇ ಸಿಂಹಪಾಲು
ಭಾರತದಲ್ಲಿ ಸುಮಾರು 3 ಲಕ್ಷ ಪೌಂಡ್ ಗೂ ಹೆಚ್ಚಿನ ಪ್ರಮಾಣದ ಗಂಧದೆಣ್ಣೆಯ ತಯಾರಾಗುತ್ತದೆ. ಇದರಲ್ಲಿ ಅರ್ಧದಷ್ಟು ಮೈಸೂರು ನಗರದ ಕಾರ್ಖಾನೆಯಲ್ಲಿಯೇ ತಯಾರಾಗುತ್ತದೆ. ಭಾರತದ ತಯಾರಿಕೆಯ 60%ರಷ್ಟು ಎಣ್ಣೆ ಹೊರದೇಶಗಳಿಗೆ ಮುಖ್ಯವಾಗಿ ಅಮೆರಿಕ, ಇಂಗ್ಲೆಂಡ್ , ಇಟಲಿ , ಜಪಾನ್ , ಆಸ್ಟ್ರೇಲಿಯಾ ಮತ್ತು ಜರ್ಮನ್ ಗಳಿಗೆ ರಫ್ತಾಗುತ್ತದೆ. ಅಲ್ಲದೆ ಮೈಸೂರಿನಿಂದ ಅಮೆರಿಕಕ್ಕೆ ಕೊಂಚ ಪ್ರಮಾಣದಲ್ಲಿ ಗಂಧದ ಮರವು ರಫ್ತಾಗುತ್ತದೆ. ಗಂಧದ ಎಣ್ಣೆಯನ್ನು ಸುಗಂಧ ದ್ರವ್ಯಗಳ ಕೈಗಾರಿಕೆಯಲ್ಲಿ ಹೇರಳವಾಗಿ ಉಪಯೋಗಿಸುತ್ತಾರೆ . ಅತ್ಯಂತ ಹೆಸರುವಾಸಿಯಾದ ಪರಿಮಳ ತಯಾರಿಕೆಗೆ ಇದು ಬಹು ಉಪಯುಕ್ತವಾದ ಮೂಲವಸ್ತು ಇದನ್ನು ಔಷಧಿ ರೂಪದಲ್ಲೂ ಕೂಡ ಬಳಸುತ್ತಾರೆ .