ಸುಧಾರಣಾವಾದಿಗಳಿಂದ ಹಿಂದೂ ಧರ್ಮ ಉಳಿದಿದೆ : ದಿನೇಶ್ ಅಮಿನ್ ಮಟ್ಟು
ಮೈಸೂರು, ಜನವರಿ 27: ಹಿಂದೂ ಧರ್ಮವನ್ನು ಆಚಾರ್ಯರು ಉಳಿಸಿಲ್ಲ. ಸುಧಾರಣಾವಾದಿಗಳು ಉಳಿಸಿದರು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ತಿಳಿಸಿದ್ದಾರೆ.
ನಗರದ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಾನುಜಾಚಾರ್ಯ, ಮಧ್ವಚಾರ್ಯರು, ಶಂಕರಾಚಾರ್ಯರು ಯಾರಿಂದಲೂ ಧರ್ಮ ಉಳಿದಿಲ್ಲ. ಸ್ವಾಮಿ ವಿವೇಕಾನಂದ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮೊದಲಾದವರ ಆದರ್ಶ ಪ್ರಾಯ ಸಮಾಜಮುಖಿ ಕೆಲಸಗಳಿಂದ ಸಮಾಜ ಏಳಿಗೆಯಾಗಿದೆ. ಅವರೆಲ್ಲರೂ ಅಸ್ಪೃಶ್ಯತೆ, ಸಮಾನತೆ ತೊಲಗಿಸಲು ಶ್ರಮಪಟ್ಟಿದ್ದರಿಂದಲೇ ಹಿಂದೂ ಧರ್ಮ ಉಳಿದುಕೊಂಡಿದೆ ಎಂದರು.
ಸಾಹಿತಿ ಎಸ್. ಎಲ್. ಭೈರಪ್ಪ ಅವರು ಶುದ್ಧ ಹಾಲಿನ ಸಾಹಿತ್ಯದ ಬಗ್ಗೆ ಮಾತನಾಡುತ್ತಾರೆ. ನಿಜ ನಮಗೆ ಹಾಲಿನ ಸಾಹಿತ್ಯ ಬೇಕು. ಆದರೆ ಅದೇ ಹಾಲು ಹುಳಿಯಾದರೆ ಮೊಸರಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಮೊಸರಿನಂತ ಸಾಹಿತ್ಯ ಬೇಕು. ಭೈರಪ್ಪ ಅವರ ಸಾಹಿತ್ಯ ಬೇಡವೇ ಬೇಡ. ಹಿಂದೂ ನಾವು ಅಂತಾ ಬೋರ್ಡ್ ಹಾಕುತ್ತಾರಲ್ಲ. ಅದು ಉಳಿದಿರೋದು ರಾಮಾನುಜಚಾರ್ಯರು, ಮಧ್ವಚಾರ್ಯರು ಯಾವುದೋ ಆಚಾರ್ಯರಿಂದ ಅಲ್ಲ. ಬದಲಿಗೆ ಹಿಂದು ಧರ್ಮ ಉಳಿದಿರೋದು ನಾರಾಯಣಗುರು, ಸ್ವಾಮಿ ವಿವೇಕಾನಂದ ಅವರಂತಹ ಸುಧಾರಕರಿಂದ ಮಾತ್ರ ಎಂದರು.
'ನೀಲಿಕಣ್ಣಿನ ಹುಡುಗ'ನ ಒಡನಾಟದ ಬಗ್ಗೆ ದಿನೇಶ್ ಅಮಿನ್ ಮಟ್ಟು ಭಾವುಕ ಮಾತುಗಳು..
ಪ್ರಧಾನಿ ನರೇಂದ್ರ ಮೋದಿ ಟೀ ಮಾರಿದ್ದಕ್ಕೂ ಸಾಕ್ಷಿ ಇಲ್ಲ. ಅವರ ಕಾಲದಲ್ಲಿ ಉದ್ಯೋಗ ಸೃಷ್ಟಿಗೂ ಸಾಕ್ಷಿ ಇಲ್ಲ ಎಂದು ಮೋದಿ ವಿರುದ್ಧ ಅಮೀನ್ ಮಟ್ಟು ವಾಗ್ದಾಳಿ ನಡೆಸಿದರು.