ಗಣೇಶ ಹಬ್ಬ ಆಚರಣೆಗೆ ಕೈಜೋಡಿಸಿದ ಮುಸ್ಲಿಂ ಭಾಂದವರು
ಮೈಸೂರು, ಸೆಪ್ಟೆಂಬರ್ 13 : ದೇವರು, ಹಬ್ಬ, ಆಚರಣೆಗಳೆಲ್ಲವನ್ನೂ ಧರ್ಮ-ಧರ್ಮಗಳ ನಡುವೆ ದಳ್ಳುರಿ ಹಚ್ಚಲು ಬಳಸುತ್ತಿರುವ ಈ ದಿನಮಾನಗಳಲ್ಲಿ ಮೈಸೂರಿನಲ್ಲಿ ಇದಕ್ಕೆ ವ್ಯತಿರಿಕ್ತವಾದ ಧರ್ಮಾತೀತವಾದ ಘಟನೆ ನಡೆದಿದೆ.
ನಗರದ ಕೃಷ್ಣರಾಜ ಮೊಹಲ್ಲಾದ ಸುಣ್ಣದಕೇರಿ ಬಳಿ ಇರುವ ಕಾಕರವಾಡಿಯ 8ನೇ ಕ್ರಾಸ್ನಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರು ಒಟ್ಟಾಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ.
ಮೈಸೂರು: ಹಿಂದು-ಮುಸ್ಲಿಂ ಒಟ್ಟಾಗಿ ಗೌರಿ-ಗಣೇಶ ಹಬ್ಬ ಆಚರಣೆ
ಶ್ರೀ ವಿನಾಯಕ ಯುವಕರ ಭಕ್ತ ಮಂಡಳಿ 15 ವರ್ಷಗಳಿಂದ ಗಣೇಶ ಮೂರ್ತಿಯನ್ನು ಪತ್ರಿಷ್ಠಾಪಿಸಿ ಭ್ರಾತೃತ್ವ ಭಾವದಲ್ಲಿ ಹಬ್ಬ ಆಚರಿಸುತ್ತಿದೆ. ಭರತ್ ಕುಮಾರ್ , ನಾಸಿರ್, ಪುನೀತ್, ರಾಜು, ವಿನುತ್, ಸಚಿನ್, ನಯಾಜ್ ಪಾಷ, ಅಜ್ಮಲ್, ರಿಜ್ವಾನ್, ತೌಹಿದ್ ಪಾಷ ಈ ತಂಡದ ಸದಸ್ಯರಾಗಿದ್ದಾರೆ. ಗಂಗಾಮತಸ್ಥರ ಸಂಘ, ಚಾಮುಂಡೇಶ್ವರಿ ಯುವಕರ ನಾಗರಿಕ ಸಮಿತಿ, ಈಗಲ್ ಟೀಮ್ ಇವರಿಗೆ ಸಾಥ್ ನೀಡುತ್ತಿವೆ.
28 ರಿಂದ 37 ವರ್ಷ ಆಸುಪಾಸಿನ ಇವರು ಕ್ಯಾಬ್, ಆಟೋ ಚಾಲನೆ, ಎಲೆಕ್ಟ್ರಿಕಲ್ ವೈರಿಂಗ್, ತರಕಾರಿ ಮಾರಾಟ ಮತ್ತಿತರ ಸಣ್ಣಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಧರ್ಮ, ನಂಬಿಕೆ, ವೃತ್ತಿ, ಜೀವನರೀತಿ, ಸಂಪಾದನೆ ಯಾವುದೇ ಅಂಶಗಳು ಸಾರ್ವಜನಿಕವಾಗಿ ಗೌರಿ ಗಣೇಶ ಹಬ್ಬ ಆಚರಣೆಗೆ ಎಂದಿಗೂ ತೊಡಕಾಗಿಲ್ಲ ಎನ್ನುತ್ತಾರೆ ಈ ಯುವಕರು.
ಹಬ್ಬದ ದಿನ ಮಂಡಳಿ ಸದಸ್ಯರೆಲ್ಲಾ ಸೇರಿ ಸಾಂಪ್ರದಾಯಿಕವಾಗಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ಪ್ರಸಾದ ವಿತರಿಸುತ್ತಾರೆ. ಹಿಂದಿನ ವರ್ಷಗಳಲ್ಲಿ 7 ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ನಾಟಕ, ರಸಮಂಜರಿ ಕಾರ್ಯಕಮಗಳನ್ನು ಏರ್ಪಡಿಸುತ್ತಿದ್ದೆವು. ಆದರೆ, ಈ ವರ್ಷ ಜಿಲ್ಲಾಡಳಿತದ ನಿಯಮಗಳಿಗೆ ಅನುಸಾರ 3 ದಿನಗಳ ಕಾಲ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಗುತ್ತದೆ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಚಾಮರಾಜನಗರದಲ್ಲಿ ಗಣೇಶನಿಗೆ ದೇವಾಲಯ ಕಟ್ಟಿದ ಮುಸ್ಲಿಂ ವ್ಯಕ್ತಿ
ಕೊನೆ ದಿನ ವಿಜೃಂಭಣೆಯಿಂದ ವಿಸರ್ಜನಾ ಉತ್ಸವ ನೆರವೇರಿಸಲಾಗುವುದು. ಬಲವಂತ ಚಂದಾ ವಸೂಲಿ ಇಲ್ಲ. ನಾವೇ ಹಣ ಹಾಕಿ ಆಚರಣೆ ಮಾಡುತ್ತೇವೆ. ಯಾರಾದರೂ ಸ್ವಇಚ್ಛೆಯಿಂದ ಅಕ್ಕಿ ಮತ್ತಿತರೆ ಪದಾರ್ಥಗಳನ್ನು ನೀಡಿದರೆ ಸ್ವೀಕರಿಸುತ್ತೇವೆ ಎಂದು ಸದಸ್ಯರು ವಿವರಿಸಿದರು.
ಆಷಾಢ ಶುಕ್ರವಾರ ಚಾಮುಂಡೇಶ್ವರಿ ದೇವಿ ಪೂಜೆ, ಗಂಗಾಮಾತೆ, ಮಾರಿಹಬ್ಬ, ಶನೀಶ್ವರ ಉತ್ಸವ, ರಂಜಾನ್, ಬಕ್ರಿದ್ ಹಬ್ಬಗಳನ್ನೂ ಸೌಹಾರ್ದಯುತವಾಗಿ ಆಚರಿಸುವುದಾಗಿ ಹೇಳಿರುವ ಮಂಡಳಿ ಸದಸ್ಯರು, ಸರಳ ರೀತಿಯಲ್ಲಿಯೇ ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ.