ಸಚಿವ ಜಿಟಿಡಿಗೆ ಹೈಕೋರ್ಟ್ ತುರ್ತು ನೋಟಿಸ್
ಮೈಸೂರು, ಜುಲೈ 5: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಿ.ಟಿ ದೇವೇಗೌಡ ಅವರಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.
ಈ ಕುರಿತಂತೆ ಸೊಸೈಟಿ ಆಡಳಿತ ಮಂಡಳಿ ಸದಸ್ಯರಾದ ಮೈಸೂರಿನ ಚಂದ್ರಶೇಖರ್ ಮತ್ತು ಮಂಜುನಾಥ್ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ್ದಾರೆ. ನ್ಯಾಯಮೂರ್ತಿ ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತ್ತು. ಅಲ್ಲದೇ ಅರ್ಜಿ ಸಂಬಂಧ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಹಕಾರ ಸಂಘಗಳ ಸೊಸೈಟಿಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ರಿಜಿಸ್ಟ್ರಾರ್ ಸೇರಿದಂತೆ ಇನ್ನಿತರರಿಗೆ ನೋಟಿಸ್ ಜಾರಿಗೊಳಿಸಿದೆ.
ವಿಶ್ವನಾಥ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ
ಮೈಸೂರು - ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಸಂಘದ ಮಾರಾಟ ಸಂಘದ ಆಡಳಿತ ಮಂಡಳಿಯು 2014 ಸಾಲಿನ ಚುನಾಯಿತ ಪ್ರತಿನಿಧಿಗಳ ಅವಧಿ 2019 ಏಪ್ರಿಲ್ 19ಕ್ಕೆ ಮುಕ್ತಾಯಗೊಂಡಿತು. ಎಲ್ಲರನ್ನು ಮಾರ್ಚ್ 19ರಲ್ಲಿ ಚುನಾವಣೆ ನಡೆಸಲು ದಿನಾಂಕ ಪ್ರಕಟಿಸಲಾಗಿತ್ತು. ಬೈಲಾ ಪ್ರಕಾರ ಆರ್ಥಿಕ ಚಟುವಟಿಕೆಯಲ್ಲಿ ನಿಗದಿತ ಗುರಿ ಸಾಧಿಸಲು ವಿಫಲವಾಗಿದೆ ಎಂಬ ಕಾರಣಕ್ಕೆ ಹುಣಸೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘದ ಪ್ರಾತಿನಿಧಿಕ ಅರ್ಹತೆಯನ್ನು 2019ರಂದೇ ರದ್ದುಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸಂಘದ ಪರವಾಗಿ ಮತದಾನ ಮಾಡಲು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಜಿ. ಟಿ ದೇವೇಗೌಡರ ಪುತ್ರ ಅರ್ಹತೆ ಕಳೆದುಕೊಂಡಿದ್ದಾರೆ. ಇದರಿಂದಲೇ ಹುಣಸೂರು ಸಂಘದ ಮತದಾನದ ಹಕ್ಕು ಮರು ಸ್ಥಾಪನೆಯಾಗುವವರೆಗೂ ಮೈಸೂರು - ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರಿ ಸಗಟು ಮಾರಾಟ ಸಂಘದ ಚುನಾವಣೆ ವಿಳಂಬ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಿ.ಟಿ. ದೇವೇಗೌಡರು ಪ್ರಯತ್ನ ಮುಂದುವರಿಸಿದ್ದಾರೆ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ.