ಮೈಸೂರು ವಿವಿ ಅತಿಥಿ ಉಪನ್ಯಾಸಕರ ಸೇವೆ ಖಾಯಂಗೆ ಹೈಕೋರ್ಟ್ ಆದೇಶ
ಮೈಸೂರು, ಏಪ್ರಿಲ್ 28:ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಂಗಾಮಿ ಅಥವಾ ಅತಿಥಿ ಉಪನ್ಯಾಸಕರಾಗಿ 10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವವರನ್ನು ಕಾಯಂಗೊಳಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.
ಅತಿಥಿ ಉಪನ್ಯಾಸಕರ ಅರ್ಜಿ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಈ ಸೂಚನೆ ನೀಡಿದ್ದಾರೆ. ಹುದ್ದೆ ಕಾಯಂಗೊಳಿಸುವ ಸಂಬಂಧ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಅತ್ತಿಹಳ್ಳಿಯ ಡಾ. ಎಂ ಕಾಂತರಾಜು ಹಾಗೂ ಇತರೆ 59 ಮಂದಿ ಅತಿಥಿ ಉಪನ್ಯಾಸಕರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಆರ್ ದೇವದಾಸ್ ಅವರಿದ್ದ ಏಕ ಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.
ನೀರಿಗಾಗಿ ಪರಿತಪಿಸುತ್ತಿದ್ದಾರೆ ಮೈಸೂರು ವಿವಿ ಹಾಸ್ಟೆಲ್ ವಿದ್ಯಾರ್ಥಿನಿಯರು
ಅರ್ಜಿದಾರರು ನಾವೆಲ್ಲರೂ ಮೈಸೂರು ವಿವಿಯಲ್ಲಿ ಮೊದಲ ಅತಿಥಿ ಉಪನ್ಯಾಸಕರಾಗಿ ನಂತರ ಹಂಗಾಮಿ ಉಪನ್ಯಾಸಕರಾಗಿ 10 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದೇವೆ. ಎಲ್ಲರಿಗೂ ನಿಗದಿತ ವಿದ್ಯಾರ್ಹತೆ ಇದೆ. ಮಂಜೂರಾದ ಹುದ್ದೆಗಳಿಗೆ ನಮ್ಮನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಹಾಗಾಗಿ ನಿಯಮದಂತೆ ನಮ್ಮೆಲ್ಲರ ಸೇವೆಯನ್ನು ಕಾಯಂಗೊಳಿಸುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ಮಾಡಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಒಂದು ವೇಳೆ ಉಪನ್ಯಾಸಕರು ಯುಜಿಸಿ ನಿಯಮಾವಳಿಯಂತೆ ನೆಟ್ ಅಥವಾ ಸ್ಲೆಟ್ ತೇರ್ಗಡೆ ಸೇರಿದಂತೆ ಅಗತ್ಯ ವಿದ್ಯಾರ್ಥಿಗಳನ್ನು ಪಡೆದಿದ್ದರಲ್ಲದೆ ಅಂತಹವರಿಗೆ ಅಗತ್ಯ ವಿದ್ಯಾರ್ಹತೆಗಳನ್ನು ನಿಗದಿತ ಅವಧಿಯಲ್ಲಿ ಪಡೆದುಕೊಳ್ಳಲು 2004ರ ಸೇವಾ ಕಾಯಂ ನಿಯಮದಂತೆ ಅಗತ್ಯ ಷರತ್ತು ವಿಧಿಸಬಹುದು. ಯಾವುದೇ ಕಾರಣಕ್ಕೂ ಅರ್ಜಿದಾರರನ್ನು ಸೇವೆಯಿಂದ ಬಿಡುಗಡೆ ಅಥವಾ ಮುಂದುವರಿಸದೇ ಇರಕೂಡದು. ಸೇವೆ ಕಾಯಂ ವೇಳೆ ವಿಶ್ವವಿದ್ಯಾಲಯ ರೋಸ್ಟರ್ ಮತ್ತು ಮೀಸಲಾತಿ ನಿಯಮ ಪಾಲನೆ ಮಾಡಬೇಕೆಂದು ನ್ಯಾಯಾಲಯ ತಿಳಿಸಿದೆ.