ಕೆ.ಮರೀಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಬೆಂಗಳೂರು, ಜುಲೈ 25 : ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ಕೆ.ಮರೀಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜುಲೈ 28ಕ್ಕೆ ಮುಂದೂಡಿದೆ. ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಎದುರಿಸುತ್ತಿರುವ ಮರೀಗೌಡ ಅವರು ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಕೆ.ಮರೀಗೌಡ ಅವರು ಮೈಸೂರು ಜೆಎಂಎಫ್ಸಿ ಕೋರ್ಟ್ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ರದ್ದಾಗಿದೆ. ಆದ್ದರಿಂದ, ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.[ಮರೀಗೌಡ ಕಾಂಗ್ರೆಸ್ಸಿನಿಂದ ಅಮಾನತು]
ಸೋಮವಾರ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಮರೀಗೌಡ ಪರವಾಗಿ ವಕೀಲ ಸಿ.ಎಚ್.ಜಾಧವ್ ವಾದ ಮಂಡಿಸಿದರು. ಈ ಸಂರ್ಭದಲ್ಲಿ ಆರೋಪಿಯನ್ನು ಹುಡುಕಲಾಗುತ್ತಿದೆಯೇ? ಎಂದು ನ್ಯಾಯಮೂರ್ತಿಗಳು ಸರ್ಕಾರವನ್ನು ಪ್ರಶ್ನಿಸಿದರು.[ಮರಿಗೌಡನ ಬಂಧನಕ್ಕಾಗಿ ಮೈಸೂರಲ್ಲಿ ಹಾರಿತು ಗಾಳಿಪಟ!]
ವಾದ ಮಂಡನೆ ಮಾಡಿದ ಸರ್ಕಾರಿ ಅಭಿಯೋಜಕ ದೇಸಾಯಿ ಅವರು, 'ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ. ಆದರೆ, ಆರೋಪಿ ಇರುವ ಸ್ಥಳ ಇನ್ನೂ ಪತ್ತೆಯಾಗಿಲ್ಲ. ಕೇರಳಕ್ಕೂ ಪೊಲೀಸರ ತಂಡ ಕಳಿಸಲಾಗಿದೆ' ಎಂದರು......['ಸಿದ್ದರಾಮಯ್ಯ ಬಯಸಿದರೆ 24 ಗಂಟೆಯಲ್ಲಿ ಮರೀಗೌಡ ಬಂಧನ']
ಮರೀಗೌಡ ವಿರುದ್ಧದ ಆರೋಪವೇನು?
ಜುಲೈ 3ರ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಫ್ತಾರ್ ಕೂಟದಲ್ಲಿ ಭಾಗವಹಿಸಲು ಮೈಸೂರಿಗೆ ತೆರಳಿದ್ದರು. ಶಿಷ್ಟಾಚಾರದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಸರ್ಕಾರಿ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡಿದ್ದರು. ಆಗ ಅಲ್ಲಿಗೆ ಆಗಮಿಸಿದ್ದ ಕೆ.ಮರೀಗೌಡ ಅವರು ಜಿಲ್ಲಾಧಿಕಾರಿ ಸಿ.ಸಿಖಾ ಅವರನ್ನು ಏಕವಚನದಲ್ಲಿ ನಿಂದಿಸಿದ್ದರು. ಮರೀಗೌಡ ಅವರ ಬೆಂಬಲಿಗರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ, ಕಾರು ಅಡ್ಡಹಾಕಿದ್ದರು.
ಜಿಲ್ಲಾಧಿಕಾರಿಗಳನ್ನು ನಿಂದಿಸಿದ್ದು ಏಕೆ?
ಯಾದಗಿರಿ ಉಪ ವಿಭಾಗಾಧಿಕಾರಿಯಾಗಿ ಬಡ್ತಿ ಹೊಂದಿ, ವರ್ಗಾವಣೆಯಾಗಿರುವ ನವೀನ್ ಜೋಸೆಫ್ ಅವರನ್ನು ಜಿಲ್ಲಾಧಿಕಾರಿಗಳು ಏಕೆ ಕರ್ತವ್ಯದಿಂದ ಬಿಡುಗಡೆ ಮಾಡಿಲ್ಲ? ಎಂದು ಮರೀಗೌಡ ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ಅವರನ್ನು ನಿಂದಿಸಿದ್ದರು.
ಸಿ ಶಿಖಾ ದೂರು ಕೊಟ್ಟಿದ್ದರು
ಸರ್ಕಾರಿ ಕೆಲಸಕ್ಕೆ ಕೆ.ಮರೀಗೌಡ ಅಡ್ಡಿಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ನಜರಬಾದ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೇವರಾಜ ಉಪವಿಭಾಗದ ಎಸಿಪಿ ರಾಜಶೇಖರ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಮ್ಮ ವಿರುದ್ಧ ದೂರು ದಾಖಲಾದ ದಿನದಿಂದ ಮರೀಗೌಡ ಅವರು ತಲೆಮರೆಸಿಕೊಂಡಿದ್ದಾರೆ.
ಜುಲೈ 28ಕ್ಕೆ ಜಾಮೀನು ಅರ್ಜಿ ಮುಂದೂಡಿಕೆ
ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ಕೆ.ಮರೀಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜುಲೈ 28ಕ್ಕೆ ಮುಂದೂಡಿದೆ.
ಸಿದ್ದರಾಮಯ್ಯ ಹೇಳುವುದೇನು?
'ಮರೀಗೌಡ ಬಂಧನಕ್ಕೆ ತಮ್ಮದೇನು ತಕರಾರು ಇಲ್ಲ. ಮರೀಗೌಡ ಎಲ್ಲಿದ್ದಾನೆ ಎಂಬುದು ನನಗೆ ಗೊತ್ತಿಲ್ಲ. ಪ್ರಕರಣದಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಂಡು ಆತನನ್ನು ಹುಡುಕಿ ಬಂಧಿಸಲಿ. ಪಕ್ಷದಲ್ಲಿ ಆತ ನಮ್ಮೊಂದಿಗೆ ಇರಬಹುದು. ಆದರೆ, ಕಾನೂನು ಎಲ್ಲರಿಗೂ ಒಂದೇ ಎಂದು' ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ನಿಂದ ಅಮಾನತು?
ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಸಿದ್ದರಾಮಯ್ಯ ಪರಮಾಪ್ತ ಕೆ.ಮರೀಗೌಡ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಕೆ.ಮರೀಗೌಡ ಅವರನ್ನು ಪಕ್ಷದಿಂದ ಅಮಾನತು ಮಾಡಲು ಈಗಾಗಲೇ ನಿರ್ಧಾರವನ್ನು ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.