ಹಳೆ ಮೈಸೂರು ಭಾಗದಿಂದ ಯಾರಿಗೆ ಸಿಗಲಿದೆ ಸಚಿವ ಸ್ಥಾನದ ಪಟ್ಟ
ಮೈಸೂರು, ಆಗಸ್ಟ್ 19: ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ಮೊದಲ ಹಂತದ ವಿಸ್ತರಣೆಗೆ ನಾಳೆ ದಿನಾಂಕ ಹಾಗೂ ಸಮಯ ನಿಗದಿಯಾಗಿದೆ. ಇದರ ಜೊತೆ ಜೊತೆಗೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಾಗಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅಷ್ಟಾಗಿ ಇಲ್ಲದಿದ್ದರೂ, ಇಲ್ಲಿ ಯಾವ ಶಾಸಕರು ಸಂಪುಟ ದರ್ಜೆಗೆ ಸೇರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಸಚಿವರ ಪಟ್ಟಿ ಇಂದು ಅಂತಿಮ; ಆಕಾಂಕ್ಷಿಗಳಲ್ಲಿ ಢವ ಢವ!
ಮೈಸೂರು ಭಾಗದಿಂದ ಯಡಿಯೂರಪ್ಪ ಸಂಪುಟವನ್ನು ಪ್ರತಿನಿಧಿಸುವ ಅವಕಾಶ ಯಾರಿಗೆ ಸಿಗಲಿದೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಯ 31 ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಷ್ಟೇ ಬಿಜೆಪಿಯ ಶಾಸಕರಿದ್ದಾರೆ. ಅವರಲ್ಲಿ ಕೆಲವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಯಾರವರು?
ಮೈಸೂರಿನಿಂದ ರಾಮ್ ದಾಸ್ ಗೆ ಸಿಗಬಹುದೇ ಸ್ಥಾನ
ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರಿದ್ದು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ರಾಮದಾಸ್ ನಾಲ್ಕನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಸಂಪುಟ ದರ್ಜೆ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಉತ್ತಮ ವಾಗ್ಮಿ ಆದ ಇವರು ಹಿರಿತನದ ಆಧಾರದ ಮೇಲೆ ಹಾಗೂ ಜಾತಿ ಪ್ರಾತಿನಿಧ್ಯದ ಮೇಲೆ ಮೊದಲ ಸ್ಥಾನದಲ್ಲಿ ಸಚಿವರಾಗಬಹುದು ಎನ್ನಲಾಗುತ್ತಿದೆ. ಇವೆಲ್ಲವುಗಳ ಜತೆ ಅವರ ಸಹೋದರ, ಉದ್ಯಮಿ ಎಸ್.ಎ.ಶ್ರೀಕಾಂತ್ ದಾಸ್, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಜತೆ ಒಡನಾಟ ಹೊಂದಿದ್ದು ಇದು ಕೂಡ ಸಹಕಾರಿಯಾಗಬಲ್ಲದು ಎಂಬುದು ಮೂಲಗಳ ವಿಶ್ವಾಸ.
ಗ್ರಾಮಾಂತರ ಭಾಗದಲ್ಲಿ ಹರ್ಷವರ್ಧನ್ ಗೆ ಪ್ರಾತಿನಿಧ್ಯ
ಇನ್ನು ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ನಾಗೇಂದ್ರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಹರ್ಷವರ್ಧನ್ ಮೊದಲ ಬಾರಿ ಆಯ್ಕೆ ಆಯ್ಕೆಯಾಗಿದ್ದಾರೆ. ಹೊಸ ಮುಖ ಹಾಗೂ ಗ್ರಾಮಾಂತರ ವಿಭಾಗಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದಾದರೆ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಹೆಸರಿಗೆ ಮೊದಲು ಚಾಲ್ತಿ ಸಿಗಬಹುದು.
ಚಾಮರಾಜನಗರದಲ್ಲಿ ನಿರಂಜನ್, ಕೊಡಗಿಗೆ ಬೋಪಯ್ಯ?
ಇತ್ತ ಚಾಮರಾಜನಗರದಲ್ಲಿ ಬಿಜೆಪಿಯಿಂದ ಏಕೈಕ ಶಾಸಕರಿದ್ದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ನಿರಂಜನ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಜಿಲ್ಲೆಯಿಂದ ಪ್ರಾತಿನಿಧ್ಯ ಪಡೆಯಬಹುದು. ಕೊಡಗು ಜಿಲ್ಲೆಯಲ್ಲಿ ಇಬ್ಬರು ಶಾಸಕರಿದ್ದು ಅಪ್ಪಚ್ಚುರಂಜನ್ ಹಾಗೂ ಕೆ.ಜಿ ಬೋಪಯ್ಯ ಇಬ್ಬರೂ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಈ ಪೈಕಿ ಬೋಪಯ್ಯ ವಿಧಾನಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಹಿರಿಯರಾಗಿದ್ದು, ಸಚಿವರಾಗುವುದು ಬಹುತೇಕ ಖಚಿತವಾಗಿದೆ.
ಯಾರಾಗಲಿದ್ದಾರೆ ಮಂಡ್ಯದ ನೂತನ ಬಿಜೆಪಿ ಉಸ್ತುವಾರಿ ಸಚಿವರು?
ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗುವ ಒಬ್ಬ ಶಾಸಕರಿಲ್ಲ. ಮಂಡ್ಯ ಜಿಲ್ಲೆಗೆ ಹೇಗೆ ಪ್ರಾತಿನಿಧ್ಯ ನೀಡುತ್ತಾರೆ ಎಂಬುದು ತಿಳಿದಿಲ್ಲ. ಅನರ್ಹಗೊಂಡ ಶಾಸಕರಾದ ಕೆ.ಆರ್ ಪೇಟೆಯ ನಾರಾಯಣ ಗೌಡ ಅವರು ರಾಜಕೀಯದಿಂದಲೇ ನಿವೃತ್ತಿ ಘೋಷಿಸಿದ್ದು ಯಾರನ್ನಾದರೂ ವಿಧಾನಪರಿಷತ್ತಿಗೆ ಆಯ್ಕೆ ಮಾಡಿ ಸಚಿವರನ್ನಾಗಿ ಮಾಡುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಜಾತಿ, ಮತದಾರರ ಜೊತೆಗೆ ಸಂಪರ್ಕ ಸದನದ ಪ್ರತಿಪಕ್ಷಗಳನ್ನು ಎದುರಿಸುವ ಸಾಮರ್ಥ್ಯ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಸಚಿವ ಸ್ಥಾನ ನೀಡಲಾಗುವುದು. ಹೀಗಾಗಿ ಮೊದಲ ಹಂತದಲ್ಲಿ ಹಿರಿಯರಿಗೆ ಸಚಿವ ಸ್ಥಾನ ದೊರೆಯುವುದು ಬಹುತೇಕ ಖಚಿತವಾಗಿದೆ.