ಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾ
Recommended Video
ಮೈಸೂರು, ಆಗಸ್ಟ್ 27: ನಾಡಹಬ್ಬ ದಸರೆಗೆ ಮೊದಲ ಹಂತದಲ್ಲಿ ಆರು ಆನೆಗಳು ಜಂಬೂಸವಾರಿಯ ಸಾರಥ್ಯ ವಹಿಸಲು ಮೈಸೂರಿಗೆ ದಾಂಗುಡಿ ಇಟ್ಟಿವೆ. ನಾಳೆಯಿಂದ ತಾಲೀಮು ಶುರುವಿಟ್ಟುಕೊಳ್ಳಲು ಸಿದ್ಧತೆಯೂ ನಡೆಯುತ್ತಿದೆ. ಈ ಎಲ್ಲಾ ಆನೆಗಳನ್ನು ಕಣ್ತುಂಬಿಕೊಳ್ಳಲು ಮಕ್ಕಳಾದಿಯಿಂದ ದೊಡ್ಡವರೂ ಮೈಸೂರು ಅರಮನೆಗೆ ಬರುತ್ತಿದ್ದಾರೆ.
ಅಂಬಾರಿ ಹೊರುವ ಅರ್ಜುನ ಈ ಬಾರಿಯೂ ಮುಂದು, ಬರೋಬ್ಬರಿ 5,800 ಕೆ.ಜಿ ತೂಕ
ದಸರಾದ ಪ್ರಮುಖ ಆಕರ್ಷಣೆಯಾಗಿರುವ ಈ ಆನೆಗಳ ವಿಶೇಷತೆಯೇನು? ದಸರೆಗೆ ಯಾವ ಆಧಾರದ ಮೇಲೆ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲವೂ ಎಷ್ಟು ವರ್ಷದಿಂದ ದಸರೆಯಲ್ಲಿ ಭಾಗವಹಿಸುತ್ತಿವೆ ಎಂಬುದರ ಮಾಹಿತಿಯನ್ನು ಒನ್ ಇಂಡಿಯಾ ನಿಮಗೆ ನೀಡುತ್ತಿದೆ:
20 ವರ್ಷದಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದಾನೆ ಅರ್ಜುನ
59 ವರ್ಷದ ಅರ್ಜುನ ಬಳ್ಳೆ ಆನೆ ಶಿಬಿರದ ವಾಸಿ. ಮಾವುತ ವಿನು, ಕಾವಾಡಿ ಮಧು. 2.95 ಮೀಟರ್ ಎತ್ತರವಿದ್ದು, 3.75 ಮೀಟರ್ ಉದ್ದವಿದ್ದಾನೆ. 5,800 ಕೆ.ಜಿ. ತೂಗುತ್ತಾನೆ. 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಿಂದ ಸೆರೆಹಿಡಿಯಲಾಗಿತ್ತು. ಕಳೆದ 20 ಇಪ್ಪತ್ತು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 2012ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಈತನ ಬೆನ್ನ ಮೇಲಿದೆ.
62 ವರ್ಷದ ವಿಜಯ ಬಲು ಚತುರ
62 ವರ್ಷದ ವಿಜಯ ದುಬಾರೆ ಆನೆ ಶಿಬಿರದ ವಾಸಿ. ಮಾವುತ ಭೋಜಪ್ಪ, ಕಾವಾಡಿ ಭರತ್. 2.29 ಮೀಟರ್ ಎತ್ತರ, 3 ಮೀಟರ್ ಉದ್ದವಿದ್ದು, 2,825 ಕೆ.ಜಿ ತೂಕವಿದೆ. ಸಾಧು ಸ್ವಭಾವವಾದ ಈ ಆನೆಯನ್ನು 1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. 12 ವರ್ಷಗಳಿಂದ ದಸರಾ ಉತ್ಸವದಲ್ಲಿ ಈ ಆನೆ ಭಾಗಿಯಾಗುತ್ತಿದೆ.
ಹೆಸರಿಗೆ ತಕ್ಕಂತೆ ಶಕ್ತಿಶಾಲಿ ಈ ಅಭಿಮನ್ಯು
53ರ ಹರೆಯದ ಅಭಿಮನ್ಯು ಖೆಡ್ಡಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಧೀರ ಎಂದೇ ಖ್ಯಾತಿ ಪಡೆದಿದ್ದಾನೆ. ಮತ್ತಿಗೋಡು ಆನೆ ಶಿಬಿರದಲ್ಲಿ ಆಶ್ರಯ ಪಡೆದ ಅಭಿಮನ್ಯು ಹೆಸರಿಗೆ ಅನುಗುಣವಾಗಿ ಶಕ್ತಿಶಾಲಿಯೇ ಸರಿ. ವಸಂತ ಮಾವುತನಾಗಿ, ರಾಜು ಕಾವಾಡಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 2.68 ಮೀಟರ್ ಎತ್ತರ, 3.51 ಮೀಟರ್ ಉದ್ದ ಇರುವ ಈತ ಬರೋಬ್ಬರಿ 5,145 ಕೆ.ಜಿ ತೂಕ ಹೊಂದಿದ್ದಾನೆ. 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಾಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಕಾಡಾನೆ ಸೆರೆ ಹಿಡಿಯುವ, ಪಳಗಿಸುವ, ಚಿಕಿತ್ಸೆ ಕೊಡುವ ಕಾರ್ಯಾಚರಣೆಯಲ್ಲಿ ಈತ ನಿಸ್ಸೀಮ. 20 ವರ್ಷದಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, 2015ರವರೆಗೂ ಆನೆ ಗಾಡಿ ಎಳೆಯುವ ಜವಾಬ್ದಾರಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾನೆ.
ಕಾಕನಕೋಟೆಯಲ್ಲಿ ವರಲಕ್ಷ್ಮಿಯದ್ದೆ ಕಾರುಬಾರು
63 ವರ್ಷದ ಹೆಣ್ಣಾನೆ ವರಲಕ್ಷ್ಮಿ ಮತ್ತಿಗೋಡು ಆನೆ ಶಿಬಿರದ ವಾಸಿ. ಮಾವುತ ರವಿ, ಕಾವಾಡಿ ಮಾದೇಶ. 2.46 ಮೀಟರ್ ಎತ್ತರ, 3.34 ಮೀಟರ್ ಉದ್ದವಿರುವ ಈ ಆನೆ ತೂಕ 3,510 ಕೆ.ಜಿ. ಈಕೆ ಸಾಧು ಸ್ವಭಾವದವಳಾಗಿದ್ದು, 1977ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಗಿದೆ. ಕಳೆದ 10 ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದು ಯಾವುದೇ ಅಡೆತಡೆಯಿಲ್ಲದೇ ಮುನ್ನಡೆಯುತ್ತಿದ್ದಾಳೆ.
ಬಲಿಷ್ಠತೆಗೆ ಮತ್ತೊಂದು ಹೆಸರೇ ಈ ಧನಂಜಯ
36 ವರ್ಷದ ಧನಂಜಯ ಭವಿಷ್ಯದಲ್ಲಿ ಅಂಬಾರಿ ಹೊರುವ ವಿಶ್ವಾಸ ಮೂಡಿಸಿದ್ದಾನೆ. ದುಬಾರೆ ಆನೆ ಶಿಬಿರದಲ್ಲಿ ಆಶ್ರಯ ಪಡೆದಿದ್ದು, ಮಾವುತ ಭಾಸ್ಕರ್, ಕಾವಾಡಿ ಸೂನ್ಯ ಇವನ ಸಾರಥಿಗಳಾಗಿದ್ದಾರೆ. 2.78 ಎತ್ತರ, 3.84 ಮೀಟರ್ ಉದ್ದವಿದ್ದು, 4,460 ಕೆ.ಜಿ. ತೂಕ ಹೊಂದಿದೆ. 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ವಲಯ ವ್ಯಾಪ್ತಿಯಲ್ಲಿ ಇವನನ್ನು ಸೆರೆಹಿಡಿಯಲಾಯಿತು. ಬಲಿಷ್ಠವಾಗಿದ್ದು ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ಭಾಗವಹಿಸುತ್ತಾನೆ. ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.
ಮೊದಲ ಬಾರಿ ದಸರೆ ಗಜಪಡೆಗೆ ಈಶ್ವರ ಸೇರ್ಪಡೆ
49 ವರ್ಷದ ಈಶ್ವರ ಗಜಪಡೆಗೆ ಹೊಸದಾಗಿ ಸೇರಿರುವ ಆನೆ. ದುಬಾರೆ ಆನೆ ಶಿಬಿರದ ವಾಸಿಯಾಗಿರುವ ಈತನಿಗೆ ಮಾವುತ ವಿಶ್ವನಾಥ, ಕಾವಾಡಿ ವಿಜಯ. 2.75 ಮೀಟರ್ ಎತ್ತರ, 3.50 ಮೀಟರ್ ಉದ್ದ ಹೊಂದಿರುವ ಈತನ ತೂಕ 3,995 ಕೆ.ಜಿ. 2014ರಲ್ಲಿ ಹಾಸನ ಜಿಲ್ಲೆಯ ಎಸಳೂರಿನಲ್ಲಿ ಸೆರೆಹಿಡಿಯಲಾಗಿದೆ. ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಈ ಆನೆ ಪಾಲ್ಗೊಳ್ಳುತ್ತಿರುವುದು ವಿಶೇಷ.