ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
ಮೈಸೂರು, ಏಪ್ರಿಲ್ 13; ಮೈಸೂರಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹೆಲಿ ಟೂರಿಸಂ ಆರಂಭಿಸಲು ತೀರ್ಮಾನಿಸಿರುವ ಪ್ರವಾಸೋದ್ಯಮ ಇಲಾಖೆ ವಿರುದ್ಧ ಸಾರ್ವಜನಿಕರು ತಿರುಗಿ ಬಿದ್ದಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಹೋಟೆಲ್ ಲಲಿತ ಮಹಲ್ ಆವರಣದಲ್ಲಿ ನೂರಾರು ಮರಗಳನ್ನು ಕಡಿದು ಹೆಲಿಪ್ಯಾಡ್ ಮಾಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಹೆಲಿ ಟೂರಿಸಂಗೆ ಗುರುತಿಸಲಾಗಿದ್ದ ಸ್ಥಳದಲ್ಲಿದ್ದ ಮರಗಳನ್ನು ಕಡಿಯಲು ಪ್ರವಾಸೋದ್ಯಮ ಇಲಾಖೆ ಮುಂದಾಗಿತ್ತು. ಆದರೆ ಇದಕ್ಕೆ ಅಡ್ಡಿಪಡಿಸಿದ್ದ ಪರಿಸರ ಪ್ರೇಮಿಗಳು, ನೂರಾರು ಮರಗಳಿಗೆ ಕೊಡಲಿಪೆಟ್ಟು ನೀಡಿ ಹೆಲಿ ಟೂರಿಸಂ ಮಾಡದಂತೆ ಆಕ್ಷೇಪ ವ್ಯಕ್ತಪಡಿಸಿ, ಬೀದಿಗಿಳಿದು ಹೋರಾಟವನ್ನು ನಡೆಸಿದ್ದರು.
ಮೈಸೂರಲ್ಲಿ ಹೆಲಿ ಟೂರಿಸಂ; ಖಡಕ್ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ
ಇದಾದ ಬಳಿಕ ಮರಗಳನ್ನು ಕತ್ತರಿಸಿ ಹೆಲಿ ಟೂರಿಸಂ ಮಾಡಲು ಸಜ್ಜಾದ ಸರ್ಕಾರದ ನಡೆಗೆ ಜನಸಾಮಾನ್ಯರು ಹಾಗೂ ವಿವಿಧ ಸಂಘಟನೆಗಳು ಸಹ ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ಹೆಲಿ ಟೂರಿಸಂ ಮಾಡುವ ವಿಷಯವನ್ನು ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ 'ಸೇವ್ ಮೈಸೂರು' ಹೆಸರಿನಲ್ಲಿ ಅಭಿಯಾನ ಸಹ ಆರಂಭವಾಗಿದೆ.
ಮೈಸೂರಿನಲ್ಲಿ ಹೆಲಿ ಟೂರಿಸಂ; ಸಂಸದ ಪ್ರತಾಪ್ ಸಿಂಹ ವಿರೋಧ
'ಮರಗಳನ್ನು ಉಳಿಸಿ ಮೈಸೂರು ಉಳಿಸಿ' ಎಂಬ ಹೆಸರಿನಲ್ಲಿ ಅಭಿಯಾನ ನಡೆಯುತ್ತಿದ್ದು, ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಮೈಸೂರಿಗರು ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿರುವ ಅನೇಕರು, ಅಭಿಯಾನಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಖಾತೆಗಳಲ್ಲಿ ಶೇರ್ ಮಾಡುವ ಮೂಲಕ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ಹೆಲಿ ಟೂರಿಸಂಗೆ ಆಕ್ಷೇಪ: ಮರಗಳನ್ನು ಉಳಿಸಲು ಅಭಿಯಾನ
ಹೋರಾಟಕ್ಕೆ ಸಿದ್ದರಾಮಯ್ಯ ಸಾಥ್
ಈ ನಡುವೆ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿರುವ ಹೆಲಿ ಟೂರಿಸಂ ನಿರ್ಮಾಣದ ವಿರುದ್ಧದ ಹೋರಾಟಕ್ಕೆ ಮೈಸೂರಿನವರೇ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಾಥ್ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮರಗಳನ್ನು ಕತ್ತರಿಸಿ ನೂತನ ಹೆಲಿಪ್ಯಾಡ್ ನಿರ್ಮಿಸಲು ಮುಂದಾಗಿರುವ ಸರ್ಕಾರ ನಿರ್ಧಾರ ವಾಪಸ್ ಪಡೆಯಬೇಕು. ಇದರ ವಿರುದ್ದ ಸಿಡಿದೆದ್ದಿರುವ ಮೈಸೂರಿನ ಜನತೆ ಜೊತೆ ನಾನು ಇದ್ದೇನೆ ಎಂದು ಸಾರ್ವಜನಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ನೂತನ ಹೆಲಿಪ್ಯಾಡ್ ನಿರ್ಮಾಣಕ್ಕೆ ವಿರೋಧ ಉಂಟಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಇಲಾಖೆಗೆ ಸಲ್ಲಿಸುವಂತೆ ತಿಳಿಸಿದೆ. ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಇಲಾಖೆ, ಯಾವುದೇ ಸ್ಥಳದಲ್ಲಿ 50ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾದರೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಸದ್ಯ ಉದ್ದೇಶಿತ ಹೆಲಿ ಟೂರಿಸಂ ಪ್ರಾರಂಭಿಸಲು ಗುರುತಿಸಲಾಗಿರುವ ಜಾಗದಲ್ಲಿ 150 ಮರ ಕಡಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಕ್ಷೇಪಣ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದ್ದು, ಸಾರ್ವಜನಿಕರು ಅಂಚೆ, ಇ-ಮೇಲ್ ಹಾಗೂ ನೇರವಾಗಿ ಬಂದು ಆಕ್ಷೇಪಣೆ ಸಲ್ಲಿಸಬೇಕೆಂದು ಕೋರಿ ಮೈಸೂರು ಸಹಾಯಕ ಅರಣ್ಯ ಸಂರಕ್ಷಣಧಿಕಾರಿಯಿಂದ ಪ್ರಕಟಣೆ ಹೊರಡಿಸಿದ್ದಾರೆ.
ಏ.23ಕ್ಕೆ ಸಾರ್ವಜನಿಕರ ಸಭೆ
ಹೆಲಿ ಟೂರಿಸಂ ಆರಂಭಿಸಲು ಮರಗಳನ್ನು ಕಡಿಯುವ ಸಲುವಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿರುವ ಅರಣ್ಯ ಇಲಾಖೆ ಈ ಕುರಿತಂತೆ ಚರ್ಚಿಸಲು ಏ.23ರಂದು ವಿಶೇಷ ಸಭೆಯನ್ನು ಸಹ ಕರೆದಿದೆ. ಅಂದು ಮಧ್ಯಾಹ್ನ 1 ಗಂಟೆಗೆ ಮೈಸೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿದ್ದು, ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು, ಮರಗಳನ್ನು ಕಡಿಯುವ ಸಲುವಾಗಿ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ವಿರೋಧ
ಸೋಮವಾರ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಉದ್ದೇಶಿತ ಜಾಗಕ್ಕೆ ಭೇಟಿ ಕೊಟ್ಟಿದ್ದರು. "ಅಗತ್ಯವಿದ್ದರೆ ಮೈಸೂರು ವಿಮಾನ ನಿಲ್ದಾಣವನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಮರ ಕಡಿಯಬಾರದು. ಇಲ್ಲಿ ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡುವ ಅಗತ್ಯವಿಲ್ಲ. ಅರಣ್ಯ ಇಲಾಖೆಯವರು ಅನುಮತಿ ಕೊಡಬಾರದು" ಎಂದು ಹೇಳಿದ್ದರು.