ಚಾಮುಂಡಿ ಬೆಟ್ಟದಲ್ಲಿ ಶುರುವಾಗಿದೆ ಕುಡಿಯುವ ನೀರಿನ ಸಮಸ್ಯೆ
ಮೈಸೂರು, ಜುಲೈ 6: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢದ ಸಂಭ್ರಮ ಪ್ರಾರಂಭವಾಗಿದೆ. ಇತ್ತ ಚಾಮುಂಡಿ ಬೆಟ್ಟ ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಂಭ್ರಮದಲ್ಲಿದೆ. ಮತ್ತೊಂದೆಡೆ ಚಾಮುಂಡಿ ಬೆಟ್ಟದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಬವಣೆಯ ಬಿಸಿಯೂ ತಟ್ಟಿದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸದ್ಯ 400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಮಾತ್ರವಲ್ಲದೆ ಸಾಕಷ್ಟು ಮಂದಿ ವ್ಯಾಪಾರಕ್ಕೆ ಬಂದು ಇಲ್ಲಿಯೇ ನೆಲೆಸಿದ್ದಾರೆ. ಇವರೆಲ್ಲರಿಗೂ ದಸರಾ ಹಾಗೂ ಆಷಾಢ ಮಾಸದ ಸಂದರ್ಭದಲ್ಲಿ ಹೆಚ್ಚು ವ್ಯಾಪಾರ. ಅದನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ ಕೂಡ.
ಚಾಮುಂಡಿ ಬೆಟ್ಟದಲ್ಲೇ ನೀರಿಗೆ ಹಾಹಾಕಾರ:ಜಿಟಿಡಿ ನೀಡಿದ ಭರವಸೆಯೇನು?
ಆದರೆ ಕುಡಿಯುವ ನೀರಿನ ಸಮಸ್ಯೆ ಇವರನ್ನು ಕಾಡುತ್ತಿದೆ. ಇಲ್ಲಿ ಪ್ರತಿನಿತ್ಯ ದಾಸೋಹಕ್ಕೆ ಎರಡು ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ. ಈ ಮಧ್ಯೆ ಗ್ರಾಮಸ್ಥರಿಗೆ ಆರು ದಿನಕ್ಕೊಮ್ಮೆ ಒಂದು ತಾಸು ನಲ್ಲಿಗಳಲ್ಲಿ ನೀರು ಬಿಡಲಾಗುತ್ತಿದ್ದು, ಆರು ದಿನಗಳವರೆಗೆ ನೀರನ್ನು ಸಂಭಾಳಿಸುವುದೇ ಸವಾಲಾಗಿದೆ. 50 ಲಕ್ಷ ರೂಗಳಿಗೂ ಹೆಚ್ಚಿನ ಹಣದಲ್ಲಿ ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ 2 ಕುಡಿಯುವ ನೀರಿನ ಟ್ಯಾಂಕರ್ ಗಳ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಆದರೆ ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆದರೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕನಸು ನನಸಾಗಲು ಸಾಧ್ಯವಾಗುತ್ತಿಲ್ಲ.
ಚಾಮುಂಡಿ ಬೆಟ್ಟದ ಭಕ್ತರ ಹಿತದೃಷ್ಟಿಯಿಂದ ಬೆಟ್ಟದ ದೇವಾಲಯದ ಪಕ್ಕದಲ್ಲಿ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗಿದೆ. ಆದರೆ ತಾಂತ್ರಿಕ ದೋಷದಿಂದ ಇದು ಆಗಾಗ ಕೆಟ್ಟು ಕೂತಿರುತ್ತದೆ. ಸದ್ಯಕ್ಕೆ ಪ್ರಸ್ತುತ ಚಾಲನೆಯಲ್ಲಿರುವ ಘಟಕ, ಆಷಾಢದಲ್ಲಿ ಭಕ್ತರ ಅತ್ಯಲ್ಪ ಪ್ರಮಾಣದ ನೀರಿನ ದಾಹವನ್ನು ನೀಗಿಸಬಲ್ಲದು.
ಮೈಸೂರಿನಲ್ಲಿ ಹೆಚ್ಚಿದೆ ವಾನರನ ಆರ್ಭಟ; ಪಾಲಿಕೆಗೆ ದೂರುಗಳ ಮಹಾಪೂರ
ವಾಣಿ ವಿಲಾಸ ಸರಬರಾಜು ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಎರಡು ಕಡೆಯಿಂದಲೂ ನೀರು ನೀಡುವ ಕೆಲಸ ನಡೆಯುತ್ತಿಲ್ಲ. ನೀರಿಲ್ಲದೇ ಗ್ರಾಮದ ಜನತೆ ಹಬ್ಬದ ಸಂಭ್ರಮವನ್ನು ಆಚರಿಸಲು ಸಾಧ್ಯದಂತಾಗಿದೆ. ಇನ್ನಾದರೂ ಪ್ರವಾಸಿ ತಾಣವೆಂದೇ ಹೆಸರಾದ ನಾಡ ಅಧಿದೇವತೆ ನೆಲೆಯೂರಿರುವ ಚಾಮುಂಡಿ ಬೆಟ್ಟದಲ್ಲಿ ನೀರಿನ ಹಾಹಾಕಾರವನ್ನು ಅಧಿಕಾರಿಗಳು ನಿವಾರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.