ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿ ಮತ್ತೆ ಬಂದ್ ಆಗುವ ಭಯ!
Recommended Video
ಮೈಸೂರು, ಆಗಸ್ಟ್ 17: ಮತ್ತೆ ಕಪಿಲ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವ ಕಾರಣ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿಯ ಬಳಿಯಿರುವ ಶ್ರೀ ಮಲ್ಲನಮೂಲೆ ಮಠದ ಬಳಿ ರಸ್ತೆಗೆ ನೀರು ಬಂದಿದೆ. ಇದು ಹೀಗೆ ಮುಂದುವರೆದರೆ ಮೈಸೂರು-ನಂಜನಗೂಡು-ಊಟಿ ರಾಷ್ಟ್ರೀಯ ಹೆದ್ದಾರಿ 766 ಸಂಪರ್ಕ ಕಡಿದು ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಈ ಹೆದ್ದಾರಿಯಲ್ಲಿ ದಿನ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಕಪಿಲ ನದಿ ನೀರಿನ ಪ್ರಮಾಣ ಹೆಚ್ಚಾದರೆ ರಸ್ತೆ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಇಲ್ಲಿ ಓಡಾಡುವ ಪ್ರಯಾಣಿಕರಿಗೆ ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಕಾರ್ಮಿಕರು, ಹಾಗೂ ಅಂತರರಾಜ್ಯ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಲಿದ್ದು, ಮತ್ತೆ ಸುತ್ತಿ ಬಳಸಿ ಹರಸಾಹಸ ಪಟ್ಟು ಪ್ರಯಾಣಿಸುವ ನಿರ್ಮಾಣವಾಗುವ ಆತಂಕವೂ ಹೆಚ್ಚಾಗಿದೆ.
ಭಾರಿ ಮಳೆ, ಪ್ರವಾಹ: ವಿವಿಧೆಡೆ ಕೆಎಸ್ಆರ್ಟಿಸಿ ಬಸ್ ಸಂಚಾರ ರದ್ದು
ಈಗಾಗಲೇ ಕಪಿಲ ನದಿಯ ಪ್ರವಾಹದಿಂದ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ಕ್ಷೇತ್ರಕ್ಕೆ ಸೇರುವ ಬೊಕ್ಕಹಳ್ಳಿ ಗ್ರಾಮದಲ್ಲಿ ಈ ಹಿಂದೆ ಗಂಜಿ ಕೇಂದ್ರ ತೆರೆಯಲಾಗಿದ್ದು, ಮತ್ತೆ ಪ್ರವಾಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಂಜಿ ಕೇಂದ್ರಗಳನ್ನು ಮುಂದುವರೆಸಲಾಗಿದೆ ಎಂದು ಉಪ ತಹಶೀಲ್ದಾರ್ ಕೆ.ಎಸ್.ಬಾಲಸುಬ್ರಹ್ಮಣ್ಯ, ಆರ್.ಐ. ಕೃಷ್ಣಾಚಾರ್ ತಿಳಿಸಿದ್ದಾರೆ.