ಮಡಿಕೇರಿ – ಮೈಸೂರಿನಲ್ಲಿಯೂ ಮಳೆಗೆ ಜನರು ಕಂಗಾಲು
ಮೈಸೂರು, ಆಗಸ್ಟ್ 7 : ಕಳೆದ 24 ಗಂಟೆಯಿಂದ ಮೈಸೂರು- ಕೊಡಗು ಭಾಗದಲ್ಲೂ ವರುಣನ ಅಬ್ಬರ ಜೋರಾಗಿದೆ.
ನಿನ್ನೆ ಅಬ್ಬರಿಸಿ ಬೊಬ್ಬಿರಿದಿದ್ದ ವರುಣದೇವ ಇಂದು ಆರ್ಭಟ ಇಳಿಸಿಕೊಂಡಿದ್ದರೂ ಅಲ್ಪಪ್ರಮಾಣದಲ್ಲಿದೆ. ಇತ್ತ ಮಳೆಯ ಪ್ರಮಾಣ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ತಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿದೆ.
ಹಾಗಾಗಿ ಮಳೆಯಿಂದಾಗಿ ಅಪಾರ ನಷ್ಟ ಉಂಟಾಗಿದೆ. ಹುಣಸೂರಿನ ಕೆಲವು ಗಿರಿಜನ ಹಾಡಿಯಲ್ಲಿ ವಾಸಿಸುವವರ ಮನೆ ಕುಸಿದಿದೆ. ಇದರಿಂದಾಗಿ ಕುಟುಂಬಗಳು ಸೂರಿಲ್ಲದೆ ಬೀದಿ ಪಾಲಾಗಿವೆ.
ಕೋಟೆ ನಾಡಲ್ಲಿ ಈಗ ಜಿಟಿ ಜಿಟಿ ಮಳೆ; ಫಲ ಕೊಟ್ಟಿದೆಯಂತೆ ಕತ್ತೆ ಮದುವೆ
ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಹುಣಸೂರು ತಾಲೂಕಿನ ಮುದುಗನೂರಿನಲ್ಲಿ ಎರಡು ಎಕರೆ ಜಮೀನಲ್ಲಿ ಶಿವಕುಮಾರ್ ಎಂಬ ರೈತ ಬೆಳೆದಿದ್ದ ಶುಂಠಿ ಬೆಳೆ ಮಳೆಯಲ್ಲಿ ಮುಳುಗಿಹೋಗಿದ್ದು, ಅನ್ನದಾತ ಕಂಗಾಲಾಗಿದ್ದಾನೆ.
ಎಚ್.ಡಿ.ಕೋಟೆಯ ಭೀಮನಹಳ್ಳಿಯಲ್ಲಿ 31.5 ಮಿ.ಮೀ, ಬೀಚನಹಳ್ಳಿಯಲ್ಲಿ 11.5 ಸೇರಿದಂತೆ ತಾಲ್ಲೂಕಿನಾದ್ಯಂತ ಮಳೆಯಾಗಿದೆ. ಹುಣಸೂರಿನ ಊಯಿಗೊಂಡನಹಳ್ಳಿ, ಗುರುಪುರದಲ್ಲಿ 29.5, ನೇರಳಕುಪ್ಪೆಯಲ್ಲಿ 29 ಸೇರಿದಂತೆ ಹಲವೆಡೆ ಸಾಧಾರಣ ಮಳೆ ಸುರಿದಿದೆ.
ಮೈಸೂರು ನಗರದಲ್ಲಿ 20 ಮಿ.ಮೀ, ದೊಡ್ಡಮಾರಗೌಡನಹಳ್ಳಿಯಲ್ಲಿ 21.5 ಹಾಗೂ ತಾಲ್ಲೂಕಿನ ಬಹುತೇಕ ಕಡೆ ಮಳೆಯಾಗಿದೆ. ಮಳೆಗೆ ಮೈಸೂರು ನಗರದ ಪಾಲಿಕೆ ಮುಂಭಾಗವೇ ಬೃಹತ್ ಮರವೊಂದು ಉರುಳಿ ಬಿದ್ದಿದೆ. ರಾಜಮಾರ್ಗದ ಕಂಬಗಳು ಇದರಿಂದ ನೆಲಕಚ್ಚಿವೆ. ರಸ್ತೆಯ ಒಂದು ಭಾಗಕ್ಕೆ ಮರದ ಕೊಂಬೆಗಳು ಬಿದ್ದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಭಯ್ ತಂಡವು ಮರವನ್ನು ತೆರವುಗೊಳಿಸಿತು.
ಮಂಜಿನ ನಗರಿಯಲ್ಲೂ ವರುಣನ ಅಟಾಟೋಪ : ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು ಅಲ್ಲಲ್ಲಿ ಪ್ರವಾಹ ಸ್ಥಿತಿಯಿದೆ. ಪ್ರಮುಖ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಸಂಭವಿಸಿದೆ. ಬಿರುಗಾಳಿಯು ಜನರನ್ನು ಬೆಚ್ಚಿಬೀಳಿಸುತ್ತಿದೆ.
ಭಾಗಮಂಡಲ ಹಾಗೂ ಪೊನ್ನಂಪೇಟೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇರ್ಫು ಜಲಪಾತ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ. ಗಾಳಿಯೂ ಜೋರಾಗಿದ್ದು, ಅಲ್ಲಿಗೆ ತೆರಳಲೂ ಪ್ರವಾಸಿಗರು ಹೆದರುತ್ತಿದ್ದಾರೆ. ಮಹಾಮಳೆಗೆ ಜನರು ಭೀತಿಗೆ ಒಳಗಾಗಿದ್ದಾರೆ. ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತವಾಗಿದೆ. ಕಳೆದ ವರ್ಷ ಭೂಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನರು, ಸುರಕ್ಷಿತ ಹಾಗೂ ಸಂಬಂಧಿಕರ ಮನೆಗೆ ತೆರಳುತ್ತಿದ್ದಾರೆ. ಜಿಲ್ಲಾಡಳಿತವು 33 ಸೂಕ್ಷ್ಮ ಪ್ರದೇಶ ಗುರುತಿಸಿದ್ದು, ಅಲ್ಲಿ ತೀವ್ರ ನಿಗಾ ವಹಿಸಿದೆ.
ಇತ್ತ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಸಮೀಪದ ಬೆಟ್ಟದ ಕಾಡು ಗ್ರಾಮದಲ್ಲಿ 8ಕ್ಕೂ ಹೆಚ್ಚು ಮನೆಗಳು ಜಲಾವೃತ ಹಂತಕ್ಕೆ ತಲುಪಿವೆ. ಹೀಗಾಗಿ ಕೊಡಗು ಜಿಲ್ಲಾಡಳಿತ 8 ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿದೆ.
ಪ್ರವಾಹ ಪರಿಸ್ಥಿತಿ : ಕಾಂಗ್ರೆಸ್ನಿಂದ ವೀಕ್ಷಕರ ನೇಮಕ
ಭಾರಿ ಮಳೆಗೆ ಕೊಣನೂರು- ಮಾಕುಟ್ಟ ಅಂತರ ರಾಜ್ಯ ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಕಾಂಕ್ರೀಟ್ ತಡೆಗೋಡೆ ಸಹಿತ ರಸ್ತೆ ಕುಸಿದಿದೆ. ಕಳೆದ ವರ್ಷವೂ ಮಾಕುಟ್ಟ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಈ ಸ್ಥಳದಲ್ಲಿ 60 ಲಕ್ಷ ವೆಚ್ಚದಲ್ಲಿ ತಡೆಗೋಡೆ ಸಹಿತ ಕಾಮಗಾರಿ ನಡೆಸಲಾಗಿತ್ತು.
ಕೆಲವು ತಿಂಗಳ ಹಿಂದಷ್ಟೇ ನಿರ್ಮಿಸಲಾದ ತಡೆಗೋಡೆಯೊಂದಿಗೆ ರಸ್ತೆಯು ಸುಮಾರು 60 ಮೀಟರ್ ಉದ್ದಕ್ಕೆ ಕುಸಿಯಲು ಕಳಪೆ ಕಾಮಗಾರಿಯೇ ಕಾರಣ ಎನ್ನಲಾಗಿದೆ. ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಾಧ್ಯತೆಯಿದೆ. ರಸ್ತೆಯ ಒಳಭಾಗದಿಂದ ಜಲ ಬರುತ್ತಿರುವ ಹಿನ್ನೆಲೆ ರಸ್ತೆ ಬದಿ ಜೋಡಿಸಿದ್ದ ಮರಳಿನ ಚೀಲಗಳು ಕೊಚ್ಚಿಹೋಗಿವೆ. ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಿದ್ದರೂ ಮರಳಿನ ಚೀಲಗಳು ಕುಸಿದಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.