ಮೈಸೂರಿನಲ್ಲಿ ಭಾರೀ ಮಳೆ, ಕುಪ್ಪಣ್ಣ ಪಾರ್ಕ್ ಗೆ ಬಂದ ಮೊಸಳೆ
ಮೈಸೂರು, ಅಕ್ಟೋಬರ್ 11: ದಸರೆಯ ಬಳಿಕ ಸ್ವಲ್ಪ ಬಿಡುವು ಕೊಟ್ಟಿದ್ದ ವರುಣ ದೇವ, ಮಂಗಳವಾರ ರಾತ್ರಿಯಿಂದ ತನ್ನ ಆರ್ಭಟ ಮುಂದುವರೆಸಿದ್ದಾನೆ. ರಾತ್ರಿ ಸುರಿದ ಭಾರೀ ಮಳೆಗೆ ಹರಿದು ಬಂದ ನೀರಿನಲ್ಲಿ ಮೊಸಳೆಯೊಂದು ಕುಪ್ಪಣ್ಣ ಪಾರ್ಕ್ ನಲ್ಲಿ ಕಾಣಿಸಿಕೊಂಡು, ಗಾಬರಿ ಮೂಡಿಸಿದೆ.
ಕನಕಪುರ ಮಾರ್ಗದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ 3 ಅಡಿ ನೀರು
ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿದ್ದಲ್ಲದೇ ಕಾರಂಜಿ ಕೆರೆ ತುಂಬಿ, ಅಲ್ಲಿನ ಮೊಸಳೆಯೊಂದು ಕುಪ್ಪಣ್ಣಪಾರ್ಕ್ ನಲ್ಲಿ ಕಾಣಿಸಿಕೊಂಡಿದೆ. ಪಾರ್ಕ್ ಸ್ವಚ್ಛಗೊಳಿಸಲು ಬುಧವಾರ ಬೆಳಗ್ಗೆ ಬಂದವರ ಕಣ್ಣಿಗೆ ಮೊಸಳೆ ಬಿದ್ದಿದ್ದು, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಎಸಿಎಫ್ ಪ್ರಕಾಶ್ ಮತ್ತು ಸಿಬ್ಬಂದಿ ಅಕ್ರಂ, ಮಂಜು, ಸಿದ್ದಲಿಂಗಯ್ಯ ಇನ್ನಿತರರು ಬಲೆ ಬೀಸಿ, ಅದರ ಬಾಯಿಯನ್ನು ಹಗ್ಗದಿಂದ ಕಟ್ಟುವ ಮೂಲಕ ಮೊಸಳೆಯನ್ನು ಹಿಡಿದಿದ್ದಾರೆ. ಮೊಸಳೆಯನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ರಾಮನಗರದಲ್ಲಿ ಮಳೆರಾಯನ ಆರ್ಭಟಕ್ಕೆ ಬೆಳೆ, ಶಾಲೆ ಜಲಾವೃತ
ಕಳೆದ ಕೆಲವು ದಿನಗಳಿಂದ ವಿರಾಮ ನೀಡಿದ್ದ ಮಳೆರಾಯ ಮಂಗಳವಾರ ರಾತ್ರಿ ಆರ್ಭಟಿಸಿದ್ದಾನೆ. ನಗರದ ಹಲವು ರಸ್ತೆಗಳ ತುಂಬೆಲ್ಲ ನೀರು ಹರಿದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕೆಲವು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ, ಅವಾಂತರವಾಗಿದೆ.
ಇಲ್ಲಿನ ಜಯನಗರ 12ನೇ ಮುಖ್ಯರಸ್ತೆಯ 5ನೇ ಕ್ರಾಸ್ ನಲ್ಲಿನ ಮಂಜುಳ-ಸ್ವಾಮಿ ಎಂಬುವರ ಮನೆಯ ಛಾವಣಿಯು ಕುಸಿದಿದೆ. ಅಷ್ಟೇ ಅಲ್ಲ, ಮನೆಯ ಮಧ್ಯದ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿರುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಎನ್ ಆರ್ ಮೊಹಲ್ಲಾ, ಶ್ರೀರಾಂಪುರ, ವಿದ್ಯಾರಣ್ಯಪುರಂ, ಕನಕದಾಸ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಮಳೆ ತನ್ನ ಪ್ರತಾಪ ತೋರಿಸಿದೆ. ರಸ್ತೆಯಲ್ಲಿ ಹಾಗೂ ಮನೆಗಳಲ್ಲಿ ನೀರು ತುಂಬಿದ್ದರಿಂದ ಮೈಸೂರು- ಮಾನಂದವಾಡಿ ರಸ್ತೆ ತಡೆದು ಶ್ರೀರಾಂಪುರ ನಿವಾಸಿಗಳು ಪ್ರತಿಭಟನೆ ನಡೆಸಿದರು.