ಮುಂಗಾರು ಆರಂಭಕ್ಕೆ ಮುನ್ನುಡಿ ಬರೆದ ಮೃಗಶಿರ ಮಳೆ
ಮೈಸೂರು, ಜೂನ್ 17: ಕೊಡಗಿನಲ್ಲಿ ಮುಂಗಾರು ಚೇತರಿಸಿಕೊಳ್ಳುತ್ತಿದ್ದು, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಸದಾ ಮೋಡ ಮುಸುಕಿದ ವಾತಾವರಣ ಮತ್ತು ಮೈ ಕೊರೆಯುವ ಚಳಿ ಮಳೆಗಾಲದ ವಾತಾವರಣವನ್ನು ತೆರೆದಿಟ್ಟಿದೆ. ಜತೆಗೆ ಜೂ.8ರಿಂದ ಆರಂಭಗೊಂಡ ಮೃಗಶಿರ ಮಳೆಯು ರಭಸ ಹೆಚ್ಚಿಸಿಕೊಳ್ಳುವುದರೊಂದಿಗೆ ಮುಂಗಾರಿನ ಆರಂಭಕ್ಕೆ ಮುನ್ನುಡಿ ಬರೆಯುತ್ತಿದೆ.
ಮಳೆ ಸುರಿದ ಕಾರಣ ಮರ ಬೀಳುವುದು, ವಿದ್ಯುತ್ ಕಡಿತಗೊಳ್ಳುತ್ತಿರುವ ಘಟನೆಗಳು ನಡೆಯುತ್ತಿದೆ. ಮಳೆಯ ಪರಿಣಾಮ ಜೀವನದಿ ಕಾವೇರಿಯಲ್ಲಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ. ತೊರೆ, ಹೊಳೆಗಳಲ್ಲಿಯೂ ನೀರಿನ ಹರಿವು ಹೆಚ್ಚುತ್ತಿದ್ದು, ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣವನ್ನು ನೋಡುವುದಾದರೆ ಕಳೆದ ಒಂದು ದಿನದ ಅವಧಿಯಲ್ಲಿ ಸರಾಸರಿ 55.27 ಮಿ.ಮೀ ಮಳೆ ದಾಖಲಾಗಿದೆ.
ಭಾಗಮಂಡಲದಲ್ಲಿ 125.2 ಮಿ.ಮೀ. ಮಳೆ
ಮಡಿಕೇರಿ ತಾಲ್ಲೂಕಿನ ಹೆಚ್ಚಿನ ಮಳೆಯಾಗುತ್ತಿದ್ದು, 78.87 ಮಿ.ಮೀ ಮಳೆಯಾಗಿದ್ದರೆ, ಜಿಲ್ಲೆಯಲ್ಲಿ ಅತಿಹೆಚ್ಚು 125.2 ಮಿ.ಮೀ ಮಳೆ ಭಾಗಮಂಡಲದಲ್ಲಿ ದಾಖಲಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿರುವ ಹಾರಂಗಿ ಜಲಾಶಯಕ್ಕೆ ಮಡಿಕೇರಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವುದರಿಂದ ಸುಮಾರು 993 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಸದ್ಯ ಗರಿಷ್ಠ ಮಟ್ಟ 2,859 ಅಡಿಯ ಜಲಾಶಯದಲ್ಲೀಗ 2829.35 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯದಿಂದ 80 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
124.80 ಅಡಿ ಸಾಮರ್ಥ್ಯದ ಕೆಆರ್ಎಸ್
ಇನ್ನೊಂದೆಡೆ ಕೊಡಗಿನಲ್ಲಿ ಮಳೆಯಾಗುತ್ತಿರುವ ಕಾರಣ ಜೀವನಾಡಿ ಕೆಆರ್ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿಯೂ ಏರಿಕೆ ಕಂಡು ಬಂದಿದೆ. ಇದೀಗ 124.80 ಅಡಿ ಸಾಮರ್ಥ್ಯದ ಕೆಆರ್ಎಸ್ ಜಲಾಶಯದಲ್ಲಿ 82.44 ಅಡಿಯಷ್ಟು ನೀರಿದೆ. ಜಲಾಶಯಕ್ಕೆ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, 6379 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಜಲಾಶಯದ ಒಳ ಹರಿವು ಹೆಚ್ಚಾಗುವ ಸಾಧ್ಯತೆ
ಕಾವೇರಿ ಕಣಿವೆಯಲ್ಲಿ ಮುಂಗಾರು ಬಿರುಸುಗೊಂಡಿದ್ದೇ ಆದರೆ, ಜಲಾಶಯದ ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊಡಗು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಉತ್ತಮವಾಗಿ ಮಳೆಯಾದ ಕಾರಣದಿಂದ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ತಗ್ಗಿ ಡೆಡ್ ಸ್ಟೋರೆಜ್ ಮಟ್ಟವನ್ನು ತಲುಪಿರಲಿಲ್ಲ. ಹೀಗಾಗಿ ಜಲಾಶಯದ ನೀರನ್ನೇ ನಂಬಿದ ಜನ ಮತ್ತು ರೈತಾಪಿ ವರ್ಗ ನೆಮ್ಮದಿಯಾಗಿದ್ದರು.
ಕೆಆರ್ಎಸ್ ಬಹುಬೇಗ ಭರ್ತಿಯಾಗುವ ನಿರೀಕ್ಷೆ
ಕಳೆದ ಮೂರು ವರ್ಷಗಳಿಂದ ಕೊಡಗು, ಹಾಸನ ಸೇರಿದಂತೆ ಕಾವೇರಿ ಕಣಿವೆಯಲ್ಲಿ ಧಾರಾಕಾರ ಮಳೆಯಾಗಿ ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ನದಿಗಳಲ್ಲಿ ಪ್ರವಾಹ ಏರ್ಪಟ್ಟು, ಲಕ್ಷಾಂತರ ಕ್ಯುಸೆಕ್ ನೀರು ಜಲಾಶಯ ತುಂಬಿದ ಪರಿಣಾಮ ಮಳೆಗಾಲದಲ್ಲಿ ಬಿಡಲಾಗಿತ್ತು. ಕಳೆದ ವರ್ಷ ಜಲಾಶಯವು ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಭರ್ತಿಯಾಗಿತ್ತು. ಈ ಬಾರಿಯೂ ಇದೇ ರೀತಿ ಉತ್ತಮವಾಗಿ ಮಳೆಯಾದರೆ ಜುಲೈ ತಿಂಗಳಾಂತ್ಯಕ್ಕೆ ಭರ್ತಿಯಾದರೂ ಅಚ್ಚರಿಪಡಬೇಕಾಗಿಲ್ಲ.