ಕೋವಿಡ್ ಹೆಸರಲ್ಲಿ ಸರ್ಕಾರದಿಂದ ಭಾರಿ ಅಕ್ರಮ: ಕೆಪಿಸಿಸಿ ವಕ್ತಾರ ಆರೋಪ
ಮೈಸೂರು, ಜುಲೈ 16: ಕೋವಿಡ್19 ಆರೈಕೆ ಕೇಂದ್ರಕ್ಕೆ ಹಾಸಿಗೆ, ದಿಂಬು, ಹೊದಿಕೆಗಳನ್ನು ಖರೀದಿಸುವ ವಿಚಾರದಲ್ಲಿ ನಡೆದಿರುವ ಭಾರಿ ಅವ್ಯವಹಾರದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಸ್.ಆರ್ ವಿಶ್ವನಾಥ್ ಭಾಗಿಯಾಗಿದ್ದಾರೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಬಂಧದ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಸಂಬಂಧಿ ಡಾ.ಮಂಜುನಾಥ್ ಕೈವಾಡವಿದೆ. ಕೋವಿಡ್ ನಿಯಂತ್ರಣ ಸಂಬಂಧ ವೈದ್ಯಕೀಯ ಉಪಕರಣಗಳನ್ನು ಖರೀದಿಸಿರುವ ವಿಚಾರದಲ್ಲಿ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಮಂಜುನಾಥ್ ಭಾಗಿಯಾಗಿದ್ದಾರೆ ಎಂದರು.
ಸಿದ್ದರಾಮಯ್ಯ ಬೆಂಬಲಕ್ಕೆ ಧ್ರುವ ನಾರಾಯಣ್; ಚಳವಳಿಯ ಎಚ್ಚರಿಕೆ
ಡಾ.ಮಂಜುನಾಥ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಸಂಬಂಧಿಕರಾಗಿದ್ದಾರೆ. ಕೋವಿಡ್ ಆರೈಕೆ ಕೇಂದ್ರಕ್ಕೆ ಹಾಸಿಗೆ, ದಿಂಬು, ಹೊದಿಕೆಗಳನ್ನು100 ದಿನಗಳಿಗೆ ಬಾಡಿಗೆ ಪಡೆಯುವುದರ ಮೂಲಕ 240 ಕೋಟಿ ರೂ. ವೆಚ್ಚ ಮಾಡಲಾಗಿದೆ. ಒಟ್ಟಾರೆ ನಾಲ್ಕು ಜನ ಗುತ್ತಿಗೆದಾರರಿಗೆ ನೀಡಲಾಗಿದ್ದು, ಬೆಂಗಳೂರಿನ ಮಂತ್ರಿಗಳ ಸಂಬಂಧಿಕರಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಹೆಸರನ್ನು ಹೇಳಿಕೊಂಡು ಬಿಜೆಪಿ ಮುಖಂಡರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಿದ್ದರೂ ಬಿಜೆಪಿಯಿಂದ ಹಣದ ಲೂಟಿ ನಿಂತಿಲ್ಲ. ಕೋವಿಡ್ ನಿಯಂತ್ರಣ ವಿಚಾರದಲ್ಲಿ ವಿವಿಧ ಇಲಾಖೆಗಳ ಮಂತ್ರಿಗಳ ನಡುವೆ ಹೊಂದಾಣಿಕೆ ಇಲ್ಲದಂತಾಗಿದೆ. ಕೊರೊನಾ ವೈರಸ್ ಸೋಂಕಿತರನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಬಿಜೆಪಿ ಮುಖಂಡರು ಕೇವಲ ಹೇಳಿಕೆಗೆ ಮತ್ತು ಪ್ರಚಾರಕ್ಕೆ ಸೀಮಿತರಾಗಿದ್ದಾರೆ ಎಂದು ಆರೋಪ ಮಾಡಿದರು.
ಕೊರೊನಾ ವೈರಸ್ ಚೀನಾ ದೇಶದಿಂದ ನಮಗೆ ಬಂತು, ಆದರೆ ನಮ್ಮ ದೇಶದಲ್ಲಿ "ಮೋವಿಡ್20' ಆಗಿ ಉದ್ಭವ ಆಗಿದೆ. ಇದು ಮೋದಿ ವೈರಸ್. ಸರ್ಕಾರ ಸೋಂಕಿತರನ್ನು ಓಡಾಡೋಕ್ಕೆ ಬಿಟ್ಟು ಸ್ವತಃ ಗ್ರಾಮೀಣ ಭಾಗದಲ್ಲಿ ಸೋಂಕು ಹರಡಿಸುತ್ತಿದೆ. ತಜ್ಞರ ಅಭಿಪ್ರಾಯ ಪಡೆಯುವ ಸೌಜನ್ಯ, ವಿರೋಧ ಪಕ್ಷದ ಅಭಿಪ್ರಾಯ ಕೇಳುವ ತಾಳ್ಮೆ ಕೂಡಾ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದರು.
"ಕೊಟ್ಟ ಕುದುರೆ ಏರದವರು ನಾವಲ್ಲ, ಬಿಜೆಪಿಯವರು..."
ಸರ್ಕಾರ ನಡೆಸುವವರಿಗೆ ಸಾಮಾನ್ಯ ಜ್ಞಾನವೇ ಇಲ್ಲದಂತಾಗಿದ್ದು, ಕಂದಾಯ ಸಚಿವ ಅಶೋಕ ಕೇವಲ 550 ಕೋಟಿ ರೂ. ಮಾತ್ರ ಖರ್ಚಾಗಿದೆ ಅಂತ ಹೇಳ್ತಾರೆ. "ಅಶೋಕ್ ಅವರೇ, ನಾವು ಕೇಳ್ತಾ ಇರೋದು 5, 6 ಇಲಾಖೆಗಳದ್ದು, ಕೇವಲ ಒಂದು ಇಲಾಖೆಯದ್ದಲ್ಲ.
ಕಂದಾಯ ಸಚಿವರೇ ನಿಮಗೆ ಸುಳ್ಳು ಹೇಳಲು ಚೆನ್ನಾಗಿ ಗೊತ್ತು, ಸಿದ್ದರಾಮಯ್ಯನವರ ಲೆಕ್ಕ ಕೊಡಿ ಚಳುವಳಿಗೆ ಪತ್ರದ ಮೂಲಕ ಉತ್ತರ ಕೊಡುವುದಾಗಿ ನಮ್ಮ ಉಸ್ತುವಾರಿ ಸಚಿವರು ಹೇಳ್ತಾರೆ. ಆದರೆ ಅವರ ಮನೆಗೆ ತಲುಪಿಸೋ ಲೆಕ್ಕದ ಪತ್ರದಲ್ಲಿ ಅಪೂರ್ಣ ಮಾಹಿತಿ ನೀಡಿದ್ದಾರೆ. ಇದು ಬಿಜೆಪಿಯವರ ಕೆಲಸ ಎಂದು ವಾಗ್ದಾಳಿ ನಡೆಸಿದರು.