ಲೋಕಸಭೆಗೆ ಸ್ಪರ್ಧೆ: ಕುಮಾರಸ್ವಾಮಿ ಪುತ್ರ ನಿಖಿಲ್ ಹೇಳಿದ್ದೇನು?
ಮೈಸೂರು, ಜನವರಿ 19 : ಮುಂಬರುವ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ತಾವು ಸ್ಫರ್ಧೆಗಿಳಿಯುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಿಂದ ನಿಖಿಲ್ ಸ್ಪರ್ಧೆ ಖಚಿತ ಎಂದು ಚರ್ಚೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕ್ಷೇತ್ರದ ನಾಯಕರು ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ ಅಂತಿಮವಾಗಿ ಪಕ್ಷದ ವರಿಷ್ಠರು ಈ ಕುರಿತು ತೀರ್ಮಾನಿಸುತ್ತಾರೆ. ರಾಜಕೀಯ ಪ್ರವೇಶ ಯಾವಾಗ ಎಂಬ ಪ್ರಶ್ನೆಯೇ ಇಲ್ಲಿ ಅಪ್ರಸ್ತುತ. ನಾನು ರಾಜಕೀಯದಲ್ಲಿ ಇದ್ದೇನೆ. ಮುಖ್ಯಮಂತ್ರಿ ಮಗನಾಗಿ ಒಳ್ಳೆಯ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಿನಿಮಾ ಪಕ್ಕಕ್ಕಿಟ್ಟು 12 ವಾರ ನಿರಂತರವಾಗಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಮಂಡ್ಯ ಮಾತ್ರವಲ್ಲ ಹಾಸನ,ಮೈಸೂರು, ರಾಮನಗರ, ತುಮಕೂರಿನಲ್ಲೂ ಪ್ರಚಾರದಲ್ಲಿ ಪಾಲ್ಗೊಂಡಿದ್ದೇನೆ. ಪಕ್ಷಕ್ಕಾಗಿ ಮುಂದೆಯೂ ದುಡಿಯುತ್ತೇನೆ ಎಂದರು.
ಒಂದು ವೇಳೆ ನಿಮ್ಮನ್ನೇ ಅಭ್ಯರ್ಥಿಯಾಗಿ ಘೋಷಿಸಿದರೆ ಸ್ಪರ್ಧೆಗಿಳಿಯುತ್ತೀರಾ? ಎಂಬ ಪ್ರಶ್ನೆಗೆ ನೋಡೋಣ ಎಂದು ಉತ್ತರಿಸಿದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸಾ. ರಾ ಮಹೇಶ್ ಕಳೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಶಿವರಾಮೇಗೌಡರಿಗೆ ಅವಕಾಶ ನೀಡಲಾಗಿತ್ತು. ಹಾಗೆಯೇ ಮುಂಬರುವ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಮಾಡಬೇಕೆಂದು ಆ ಕ್ಷೇತ್ರದ ಸಂಸದರು ಶಾಸಕರು ಒತ್ತಾಯಿಸಿದ್ದಾರೆ ಎಂದು ಹೇಳುವ ಮೂಲಕ ನಿಖಿಲ್ ಸ್ಪರ್ಧೆಯನ್ನು ಪರೋಕ್ಷವಾಗಿ ಖಚಿತಪಡಿಸಿದರು.