ಕಾಂಗ್ರೆಸ್ –ಜೆಡಿಎಸ್ ನಡುವೆ ಯಾವುದೇ ಸಮಸ್ಯೆ ಇಲ್ಲ: ಕುಮಾರಸ್ವಾಮಿ
ಮೈಸೂರು, ಆಗಸ್ಟ್ 28: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಸಿಎಂ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.
ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಮಠದಲ್ಲಿ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಡಿಯೂರಪ್ಪ-ಎಚ್ಡಿಕೆ ಪರಸ್ಪರ ಎದುರಾದಾಗ ಏನಾಯಿತು ನೋಡಿ?
ಕಾಂಗ್ರೆಸ್ - ಜೆಡಿಎಸ್ ನಡುವೆ ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಇದೆ. ಅದನ್ನು ಬಗೆಹರಿಸಿಕೊಳ್ಳುತ್ತೇವೆ. ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯುತ್ತಿದೆ. ಕೆಲ ಕಾರಣಗಳಿಂದ ಸಮನ್ವಯ ಸಮಿತಿ ವಿಳಂಬವಾಗುತ್ತಿದೆ. ಶೀಘ್ರದಲ್ಲಿ ಸಮನ್ವಯ ಸಮಿತಿ ಸಭೆ ನಡೆಸುತ್ತೇವೆ. ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುತ್ತೇವೆ ಎಂದು ಸಿಎಂ ತಿಳಿಸಿದರು.
ಇನ್ನು ಹಾಸನದಲ್ಲಿ ಜೆಡಿಎಸ್-ಕಾಂಗ್ರೆಸ್ ಮಧ್ಯೆ ಸಮಸ್ಯೆ ಇದೆ ಎಂದು ಹೇಳಿಕೆ ನೀಡಿದ್ದೆ. ಆದರೆ ಸಂದರ್ಶನದಲ್ಲಿ, ಪತ್ರಿಕೆಯಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮಾತನಾಡಿ ಯಾವತ್ತೂ ಮಾತೃಭೂಮಿ, ಮಾತೃಭಾಷೆಯನ್ನು ಮರೆಯಬಾರದು. ದೇವೇಗೌಡರು ದೆಹಲಿಗೆ ಹೋದರೂ ತಾಯ್ನಾಡು ಹಾಸನವನ್ನು ಮರೆತಿಲ್ಲ ಎಂದು ದೇವೇಗೌಡರನ್ನು ಹಾಡಿ ಹೊಗಳಿದರು.
ಮಠಗಳು ಜಾತಿ, ಮತ, ಧರ್ಮ, ಲಿಂಗ ಭೇದವಿಲ್ಲದೇ ಸಾಮಾಜಿಕ ಸೇವೆಯಲ್ಲಿ ತೊಡಗಿವೆ. ಸ್ವಾತಂತ್ರ್ಯ ನಂತರದಲ್ಲಿ ದೇಶ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿತ್ತು. ಮಠಗಳು ಶೈಕ್ಷಣಿಕ ವಲಯದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿವೆ.
ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನವಾಗುವುದಿಲ್ಲ, 5 ಕಾರಣಗಳು!
ಅದರಲ್ಲೂ ವೀರಶೈವ ಮಠಗಳ ಸೇವೆ ಅಪಾರವಾದದ್ದು. ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ವಿಶೇಷತೆ. ಇಂತಹ ಆಶಯಗಳಿಗೆ ಮಠಗಳು ಪೂರಕವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. 21ನೇ ಶತಮಾನದಲ್ಲಿ ನಮಗೆಲ್ಲಾ ಗೂಗಲ್ ಬಹಳ ಮುಖ್ಯ. ಆದರೆ ಗೂಗಲ್ ಯಾವತ್ತಿಗೂ ಗುರುವಿನ ಸ್ಥಾನಕ್ಕೆ ಬರಲಾರದು.
ಶಿಕ್ಷಣದ ವಿಚಾರದಲ್ಲಿ ಭಾರತ ವಿಶ್ವಕ್ಕೆ ಗುರುವಾಗಿತ್ತು. ಇಲ್ಲಿನ ನಳಂದ, ತಕ್ಷಶಿಲ ವಿಶ್ವವಿದ್ಯಾಲಯಗಳಲ್ಲಿ ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ಕಲಿಯುತ್ತಿದ್ದರು. ಅಂತಹ ಪರಿಸ್ಥಿತಿ ಮತ್ತೆ ಪುನರಾವರ್ತನೆಯಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಎಲ್ಲಾ ಮಠ ಮಾನ್ಯಗಳು ಕೂಡ ಸಾಮಾಜಿಕವಾಗಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ವೆಂಕಯ್ಯನಾಯ್ಡು ಕರೆ ನೀಡಿದರು.
ಮಾತೃಭಾಷೆ ಕಣ್ಣು ಇದ್ದಂತೆ. ಇತರ ಭಾಷೆ ಕನ್ನಡಕದಂತೆ. ಕನ್ನಡಕಕ್ಕಿಂತಲೂ ಕಣ್ಣು ಮುಖ್ಯ. ಹಾಗಾಗಿಯೇ ಸ್ಥಳೀಯ ಭಾಷೆಗಳನ್ನು ಉತ್ತೇಜಿಸಬೇಕು. ಕನ್ನಡ ಸುಂದರ ಭಾಷೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮನೆಯಲ್ಲಿ ಕನ್ನಡ ಮಾತನಾಡಲು ಉತ್ತೇಜಿಸಬೇಕು ಎಂದು ವೆಂಕಯ್ಯ ನಾಯ್ಡು ಕನ್ನಡ ಭಾಷೆಯನ್ನ ಕೊಂಡಾಡಿದರು.