ಬೊಕ್ಕಸ ಖಾಲಿಯಾಗಿರುವುದು ಯಾರದ್ದು?; ಬಿಎಸ್ ವೈ ಪುತ್ರನ ವಿರುದ್ಧ ಹರಿಹಾಯ್ದ ಎಚ್ ಡಿಕೆ
ಮೈಸೂರು, ಅಕ್ಟೋಬರ್ 3: "ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿಲ್ಲ, ಬೊಕ್ಕಸ ಖಾಲಿಯಾಗಿರುವುದು ವಿಜಯೇಂದ್ರರದ್ದೋ ಅಥವಾ ಸರ್ಕಾರದ್ದೋ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮೈಸೂರಿನಲ್ಲಿ ಪ್ರಶ್ನಿಸಿದ್ದಾರೆ.
ಮೈಸೂರಿನ ವರುಣಾ ವೃತ್ತದ ಬಳಿ ಸಭೆ ಕಾರ್ಯಕರ್ತರ ಸಭೆಗೆ ಮುನ್ನ ಮಾತನಾಡಿದ್ದ ಸಿಎಂ ಪುತ್ರ ಬಿ ಎಸ್ ವಿಜಯೇಂದ್ರ, "ರಾಜ್ಯದಲ್ಲಿ ಬೊಕ್ಕಸ ಖಾಲಿಯಾಗಿದೆ, ನನಗೆ ಅಧಿಕೃತ ಅಂಕಿ ಅಂಶ ಇಲ್ಲ. ಬೊಕ್ಕಸದಲ್ಲಿ ಹಣ ಇಲ್ಲದೇ ಇರುವುದು ಬಿ ಎಸ್ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಿದೆ. ಈ ಹಿಂದೆ ಎರಡೂ ಪಕ್ಷಗಳಿಂದ ಹಗಲು ದರೋಡೆ ನಡೆದಿದೆ" ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಹರಿಹಾಯ್ದ ಎಚ ಡಿಕೆ, ಏಕವಚನದಲ್ಲೇ ವಿಜಯೇಂದ್ರ ಅವರನ್ನು ಟೀಕಿಸಿದರು. 'ಯಾರ್ರೀ ಅವನು? ಆ ಹುಡುಗನಿಗೆ ಏನು ಗೊತ್ತು? ಹಣ ಲಪಟಾಯಿಸುವುದೊಂದೇ ಗೊತ್ತು. ಅಂಥವರನ್ನು ನಾಯಕರನ್ನಾಗಿ ಬಿಂಬಿಸಲು ಬಿಜೆಪಿಯಲ್ಲಿ ಪ್ರಯತ್ನ ನಡೆಸಿದ್ದಾರೆ' ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಜೆಡಿಎಸ್ ಭಯಂಕರ ಆರೋಪ
"ನೆರೆ ನಿರ್ವಹಣೆಗೆ ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ನಾನು 14 ತಿಂಗಳು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ರಾಜ್ಯ ಸರ್ಕಾರದ ಬೊಕ್ಕಸ ಸಂಪದ್ಭರಿತವಾಗಿದೆ. ಕೇಂದ್ರ ಸರ್ಕಾರದ ಮುಲಾಜಿಗೆ ಒಳಗಾಗದೆಯೂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಬಹುದು' ಎಂದರು.
'ಎರಡು ಬಜೆಟ್ ಗಳಲ್ಲಿ ಸಾಲಮನ್ನಾಕ್ಕಾಗಿ 25 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದೆ. ಅದರಲ್ಲಿ ಇನ್ನೂ ಐದಾರು ಸಾವಿರ ಕೋಟಿ ಮಿಕ್ಕಿದೆ. ಅದನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಬಹುದು' ಎಂದರು. 'ಮುಖ್ಯಮಂತ್ರಿ ಕನಿಷ್ಠ ಸರ್ವಪಕ್ಷ ಸಭೆಯನ್ನಾದರೂ ಕರೆಯಬೇಕಿತ್ತು. ಆದರೆ, ಮಂತ್ರಿಗಳು, ಸಂಸದರು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಅಧಿವೇಶನದಲ್ಲಿ ಈ ಬಗ್ಗೆ ದನಿ ಎತ್ತುತ್ತೇನೆ' ಎಂದು ಎಚ್ಚರಿಸಿದರು.
ದಯೆ ಇಲ್ಲದ ಮೋದಿಯೆದುರು ದೀನವಾಗಿ ಅಂಗಲಾಚುತ್ತಿರುವ ಯಡಿಯೂರಪ್ಪ
"ಕೊಡಗು ಜಿಲ್ಲೆಯಲ್ಲಿ ನೆರೆ ಬಂದಾಗ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ವಿಚಾರಿಸಿದ್ದರು. ನಿರಂತರ ಸಂಪರ್ಕದಲ್ಲಿದ್ದರು. ಆದರೆ, ಪ್ರಧಾನಿ ಭೇಟಿಯಾಗಲು ಈಗ ಅವರದ್ದೇ ಪಕ್ಷದ ಯಡಿಯೂರಪ್ಪ ಅವರಿಗೆ ಸಾಧ್ಯವಾಗುತ್ತಿಲ್ಲ. ಮೋದಿ ಹಾಗೂ ಯಡಿಯೂರಪ್ಪ ನಡುವೆ ಸಾಮರಸ್ಯ ಇಲ್ಲ' ಎಂದು ನುಡಿದರು.