ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ವದಂತಿ; ಎಚ್ಡಿಕೆ ಸ್ಪಷ್ಟನೆ
ಮೈಸೂರು, ಜೂನ್ 23: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿ ಹೋದ ಬಳಿಕ ಬಿಜೆಪಿ ನಾಯಕರಲ್ಲಿ ಉತ್ಸಾಹ ಹೊರ ಹೊಮ್ಮಿದೆ. ಅಷ್ಟೇ ಅಲ್ಲದೇ ಹಳೆ ಮೈಸೂರು ಭಾಗದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ರಾಜಕೀಯದಲ್ಲಿ ಒಂದಷ್ಟು ಬೆಳವಣಿಗೆ ನಡೆಯುವ ಸಾಧ್ಯತೆಯೂ ಕಂಡು ಬಂದಿದೆ.
ಪ್ರಧಾನ ಮಂತ್ರಿಗಳು ಭಾಗವಹಿಸಿದ್ದ ವೇದಿಕೆಯಲ್ಲಿಯೇ ಬಿಜೆಪಿ ನಾಯಕರನ್ನು ಹೊರತುಪಡಿಸಿ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಈಗಾಗಲೇ ಜೆಡಿಎಸ್ನಲ್ಲಿ ತಟಸ್ಥವಾಗಿರುವ ಜಿ. ಟಿ. ದೇವೇಗೌಡರು ಕಾಣಿಸಿಕೊಂಡಿದ್ದು, ಇದು ಈಗ ರಾಜಕೀಯವಾಗಿ ವಿವಿಧ ಆಯಾಮಗಳಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ತಂತ್ರಕ್ಕೆ ಜೆಡಿಎಸ್ ಅತಂತ್ರ!
ಜಿ. ಟಿ. ದೇವೇಗೌಡರ ಬಗ್ಗೆ ಹೇಳಬೇಕೆಂದರೆ ಅವರಿಗೆ ಪಕ್ಷದ ಬಲಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸಿನಲ್ಲಿ ನಂಬಿಕೆ ಜಾಸ್ತಿಯಿದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಗೆಲುವು ಸಾಧಿಸಿದರೂ ಕೊನೆಗೆ ಅವರೊಂದಿಗೆ ಸರ್ಕಾರ ನಡೆಸಲು ಮುಂದಾದಾಗ ಜಿಟಿಡಿ ಗೊಂದಲದಲ್ಲಿ ಸಿಲುಕಿದ್ದರು. ಅದಕ್ಕಿಂತ ಹೆಚ್ಚಾಗಿ ಸಹಕಾರ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದರು. ಅದನ್ನು ನೀಡುತ್ತಾರೆ ಎಂದು ನಂಬಿದ್ದರು. ಆದರೆ ಆಗಿದ್ದೇ ಬೇರೆ, ಅವರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನವನ್ನು ನೀಡಲಾಯಿತು.
ಜಿಟಿ ದೇವೇಗೌಡ ಅವರ ಮುಂದಿನ ರಾಜಕೀಯ ನಡೆ ಏನು
ಅದು ಅವರಿಗೆ ಒಂದು ರೀತಿಯಲ್ಲಿ ಅವಮಾನ ಮಾಡಿದಂತಾಗಿತ್ತು. ಆದರೂ ಅವರು ಅದನ್ನು ಸವಾಲಾಗಿ ಸ್ವೀಕರಿಸಿದರು. ತದ ನಂತರ ಅದೇ ಸಮಯದಲ್ಲಿ ಜೆಡಿಎಸ್ನ ಮತ್ತೊಬ್ಬ ಶಾಸಕ ಸಾ. ರಾ. ಮಹೇಶ್ ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲದೆ, ಉಸ್ತುವಾರಿಯನ್ನು ವಹಿಸುವ ಮೂಲಕ ಹೆಚ್. ಡಿ. ಕುಮಾರಸ್ವಾಮಿ ಜಿ. ಟಿ. ದೇವೇಗೌಡರನ್ನು ಬದಿಗೆ ಸರಿಸಿದ್ದರು. ಅವತ್ತಿನಿಂದಲೇ ಬಹುಶಃ ಜಿಟಿಡಿ ಮತ್ತು ಎಚ್ಡಿಕೆ ನಡುವೆ ಶೀತಲ ಸಮರ ಆರಂಭವಾಗಿತ್ತು.
ಚಾಮುಂಡೇಶ್ವರಿ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ
ಅಲ್ಲಿಂದಲೇ ತಟಸ್ಥರಾದ ಜಿ. ಟಿ. ದೇವೇಗೌಡರು ಇಲ್ಲಿಯವರೆಗೂ ಜೆಡಿಎಸ್ನಿಂದ ಅಂತರ ಕಾಪಾಡಿಕೊಂಡೇ ಬಂದಿದ್ದಾರೆ. ಹೀಗಿರುವಾಗಲೇ ಕೆಲವು ಸಮಯಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಹರಡಿತ್ತಲ್ಲದೆ, ಅದು ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡಿತ್ತು. ಯಾವಾಗ ಈ ವಿಚಾರ ಹೊರ ಬಂತೋ ಅತ್ತ ಎಚ್. ಡಿ. ಕುಮಾರಸ್ವಾಮಿ ಅವರ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿಯೂ ಒಂದಷ್ಟು ರಾಜಕೀಯ ಬೆಳವಣಿಗೆಗಳು ನಡೆದವು.
ಜೆಡಿಎಸ್ ಮುಖಂಡರಿಗೆ ಸಿಪಿವೈ ಗಾಳ
ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಎದುರು ಸೋಲು ಕಂಡಿದ್ದ ಬಿಜೆಪಿ ಮುಖಂಡ, ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಅಖಾಡಕ್ಕಿಳಿದಿದ್ದರು. ಪರಿಣಾಮ ಜೆಡಿಎಸ್ನ ಒಂದಷ್ಟು ಮುಖಂಡರು ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುವ ಯತ್ನ ಮಾಡಿದರು. ಜೆಡಿಎಸ್ ತೊರೆದ ಕೆಲವು ನಾಯಕರು ಎಚ್. ಡಿ. ಕುಮಾರಸ್ವಾಮಿ ವಿರುದ್ಧವೇ ಆರೋಪಗಳನ್ನು ಮಾಡಲು ಶುರು ಮಾಡಿದರು. ಕ್ಷೇತ್ರದಲ್ಲಿ ಅದರಲ್ಲೂ ಜೆಡಿಎಸ್ ಪಕ್ಷದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಯನ್ನು ಗಮನಿಸಿದ ಎಚ್ಡಿಕೆ ಅವರು ಈಗ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ.
ಕ್ಷೇತ್ರ ಬಿಡುತ್ತೇನೆಂದು ಅಪಪ್ರಚಾರ
ರೇಷ್ಮೆ ನಾಡು ನಮ್ಮ ಕುಟುಂಬದವರ ಜನ್ಮ ಭೂಮಿ. ಕಳೆದ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರದ ಮತದಾರ ಬಂಧುಗಳು ಹಾಗೂ ಕಾರ್ಯಕರ್ತರ ಶ್ರಮದಿಂದ ಗೆಲುವು ಕಂಡಿದ್ದೇನೆ. ಮುಂದಿನ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರಕ್ಕಾಗಲಿ, ಮಾಗಡಿ ಕ್ಷೇತ್ರಕ್ಕಾಗಲಿ ಹೋಗಲ್ಲ ಎಂದಿದ್ದಾರೆ. ಜತೆಗೆ ಇದೆಲ್ಲವೂ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರವಾಗಿದ್ದು, ಇದಕ್ಕೆಲ್ಲ ಕಿವಿಗೊಡಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಬಿಟ್ಟ ಜಿಟಿಡಿ ಮುಂದಿನ ನಡೆ ಕುತೂಹಲ
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜಿ. ಟಿ. ದೇವೇಗೌಡರಿಗೆ ಪರ್ಯಾಯವಾಗಿ ಮತ್ತೊಬ್ಬ ನಾಯಕನನ್ನು ಜೆಡಿಎಸ್ ತಯಾರಿ ಮಾಡಬೇಕಾಗಿದೆ. ಅದು ಅಷ್ಟು ಸುಲಭದ ಕೆಲಸವೂ ಅಲ್ಲ. ಈಗಾಗಲೇ ಜೆಡಿಎಸ್ ನಿಂದ ಗೆದ್ದು ಶಾಸಕರಾಗಿರುವ ಜಿ. ಟಿ. ದೇವೇಗೌಡರು ಪಕ್ಷದಿಂದ ಒಂದು ಕಾಲನ್ನು ಹೊರ ಇಟ್ಟಿದ್ದಾರೆ. ಅವರು ಕಾಂಗ್ರೆಸ್ ಸೇರುತ್ತಾರೋ ಅಥವಾ ಬಿಜೆಪಿ ಸಖ್ಯ ಬೆಳೆಸುತ್ತಾರೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ಮೂಲಕ ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಸೆಳೆದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವ ಹಠಕ್ಕೆ ಬಿದ್ದಿದೆ ಬಿಜೆಪಿ. ಹಾಗಾಗಿ ಮುಂದೆ ಏನೆಲ್ಲ ರಾಜಕೀಯವಾಗಿ ಬೆಳವಣಿಗೆಗಳು ನಡೆಯಬಹುದು ಎಂಬುದು ಕುತೂಹಲವಾಗಿಯೇ ಉಳಿದಿದೆ.
Recommended Video