ಕುಮಾರಸ್ವಾಮಿ ಆಲೂಗಡ್ಡೆ ಬೆಳೆದು ಶ್ರೀಮಂತರಾದವರು: ಶೋಭಾ ಕರಂದ್ಲಾಜೆ
ಮೈಸೂರು, ಅಕ್ಟೋಬರ್ 7: ಶೋಭಾ ಕರಂದ್ಲಾಜೆ ಅವರಿಗೆ ರೈತರು ಎಂದರೆ ಗೊತ್ತಾ? ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಸೋಮವಾರ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, 'ನನಗಿಂತಲೂ ಚೆನ್ನಾಗಿ ಕುಮಾರಸ್ವಾಮಿ ಅವರಿಗೆ ರೈತರ ಕಷ್ಟ ಗೊತ್ತಿರಬಹುದು. ಅವರು ಆಲೂಗಡ್ಡೆ ಬೆಳೆದು ಶ್ರೀಮಂತರಾದವರು' ಎಂದು ವ್ಯಂಗ್ಯವಾಡಿದರು.
'ಕುಮಾರಸ್ವಾಮಿ ಅವರು ನಮ್ಮ ಊರಿಗೆ ಬಂದು ನೋಡಲಿ. ಕರಂದ್ಲಾಜೆ ಎಲ್ಲಿದೆ, ಚಾರ್ವಾಕ ಎಲ್ಲಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ. ಯಾರು ರೈತರು, ಯಾರು ರೈತರಲ್ಲ ಎನ್ನುವುದು ಅವರಿಗೆ ಆಮೇಲೆ ತಿಳಿಯುತ್ತದೆ' ಎಂದರು.
ಮೋದಿ, ಬಿಎಸ್ವೈ ಭಿನ್ನಾಭಿಪ್ರಾಯದ ಬಗ್ಗೆ ಹೊಸ ಹುಳ ಬಿಟ್ಟ ಕುಮಾರಸ್ವಾಮಿ
ದಸರಾ ಕಾರ್ಯಕ್ರಮದಲ್ಲಿ ಭಾಗಹಿಸುವ ಸಲುವಾಗಿ ಮೈಸೂರಿಗೆ ಬಂದಿರುವ ಶೋಭಾ ಕರಂದ್ಲಾಜೆ ಅವರು, ಆನೆಗಳ ಮಾವುತರು ಮತ್ತು ಕಾವಾಡಿಗಳ ಕುಟುಂಬಕ್ಕೆ ಆಹಾರ ವ್ಯವಸ್ಥೆ ಕಲ್ಪಿಸಿದ್ದರು. ಈ ವೇಳೆ ಅವರು ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ತಾವೇನೆಂದು ಒಂದು ವರ್ಷದಲ್ಲಿ ತೋರಿಸಿದ್ದಾರೆ
'ಕುಮಾರಸ್ವಾಮಿ ಅವರು ತಾವು ಏನು ಎಂಬುದನ್ನು ಕಳೆದ ಒಂದು ವರ್ಷದಲ್ಲಿ ಅವರೇ ತೋರಿಸಿದ್ದಾರೆ. ಅವರ ಆರೋಪಕ್ಕೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ರೈತ ಕುಟುಂಬದವಳಲ್ಲ ಎಂದರೆ ಏನು ಎಂಬುದನ್ನು ಅವರೇ ಹೇಳಬೇಕು' ಎಂದು ಹೇಳಿದರು.
ಬೊಕ್ಕಸ ಖಾಲಿಯಾಗಿರುವುದು ಯಾರದ್ದು?; ಬಿಎಸ್ ವೈ ಪುತ್ರನ ವಿರುದ್ಧ ಹರಿಹಾಯ್ದ ಎಚ್ ಡಿಕೆ
ಕ್ಷೇತ್ರದಿಂದ ಕಾಲ್ಕಿತ್ತಿದ್ದಾರೆ
'ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಹ ಬಂದು ಸಾವಿರಾರು ಕುಟುಂಬಗಳ ಬದುಕು ಡೋಲಾಯಮಾನವಾಗಿದೆ. ನೆರೆ ಪರಿಹಾರ ಸಿಗುತ್ತಿಲ್ಲ ಎಂದು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾನ್ಯ ಸಂಸದರು ಅವರೊಂದಿಗಿದ್ದು ಧೈರ್ಯ ತುಂಬುವ ಕೆಲಸ ಮಾಡುವ ಬದಲು ಕ್ಷೇತ್ರದಿಂದ ಕಾಲ್ಕಿತ್ತಿರುವುದು ಅವರ 'ರೈತಪರ ಕಾಳಜಿ'ಯನ್ನು ಎತ್ತಿತೋರಿಸುತ್ತದೆ!' ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಬಿಜೆಪಿ ಹೆಸರಲ್ಲಿ ಶೋಭಾಗೆ ಮತ
'ಬಿಜೆಪಿ ಹೆಸರಲ್ಲಿ ಶೋಭಾ ಕರಂದ್ಲಾಜೆ ಅವರ ರಾಜಕಾರಣ ಸಾಗುತ್ತಿದೆ. ಜನ ಬಿಜೆಪಿ ಹೆಸರಲ್ಲಿ ಅವರಿಗೆ ಮತ ಹಾಕುತ್ತಾರೆ. ಶೋಭಾ ಮತ ಹಾಕಿಸಿಕೊಂಡು ಓಡಾಡಿಕೊಂಡಿದ್ದಾರೆ. ಶೋಭಾ ಅವರಿಗೆ ರೈತರು ಎಂದರೆ ಗೊತ್ತಾ? ಅವರಿಗೆ ರೈತರನ್ನು ಕಟ್ಟಿಕೊಂಡು ಏನಾಗಬೇಕು. ಅವರ ಜೀವನದಲ್ಲಿ ರೈತರ ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರಾ? ಅವರಿಂದ ಜನರು ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವಂತಿಲ್ಲ' ಎಂದು ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಕಳಸದಲ್ಲಿ ಭಾನುವಾರ ವಾಗ್ದಾಳಿ ನಡೆಸಿದ್ದರು.
ಫೋನ್ ಕದ್ದಾಲಿಕೆ: ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ ? ಶೋಭಾ ಪ್ರಶ್ನೆ
ಮಾವುತರ ಕುಟುಂಬಕ್ಕೆ ಉಪಹಾರ
ಪ್ರತಿ ದಸರಾದಂತೆ ಈ ಬಾರಿ ಕೂಡ ಶೋಭಾ ಕರಂದ್ಲಾಜೆ ಅವರು ಮೈಸೂರಿನ ಅರಮನೆ ಆವರಣದ ಗಜಪಡೆ ಮಾವುತರು ಮತ್ತು ಕಾವಾಡಿಗರ ಕುಟುಂಬಕ್ಕೆ ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡಿದ್ದರು. ಮಸಾಲೆ ದೋಸೆ, ಪೊಂಗಲ್, ಇಡ್ಲಿ, ವಡೆ, ಖಾರಾಬಾತ್ ಮತ್ತು ಹಾಲುಬಾಯಿ ವ್ಯವಸ್ಥೆ ಮಾಡಲಾಗಿತ್ತು. 40 ಕುಟುಂಬದ ಸುಮಾರು 300 ಮಂದಿಗೆ ಉಪಹಾರ ನೀಡಲಾಯಿತು. ಶೋಭಾ ಅವರು ಸ್ವತಃ ಕೆಲವರಿಗೆ ಆಹಾರ ಬಡಿಸಿದರು.