"ವಿಶ್ವನಾಥ್ ಪಾಪದ ಕೊಡ ತುಂಬಿದೆ, ಮಂತ್ರಿಯೂ ಆಗಲ್ಲ, ಶಾಸಕನೂ ಆಗಲ್ಲ"
ಮೈಸೂರು, ನವೆಂಬರ್ 20: "ಮಾಜಿ ಸಚಿವ ಎಚ್. ವಿಶ್ವನಾಥ್ ಅವರ ಪಾಪದ ಕೊಡ ತುಂಬಿದೆ. ವಿಶ್ವನಾಥ್ ಮಂತ್ರಿ ಆಗುವುದಿಲ್ಲ, ಶಾಸಕನೂ ಆಗುವುದಿಲ್ಲ" ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹುಣಸೂರು ಉಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, "ದೇವೇಗೌಡರ ಕುಟುಂಬವನ್ನು ವಾಚಾಮಗೋಚರವಾಗಿ ಬೈದುಕೊಂಡೇ ಬಂದಿದ್ದ ವಿಶ್ವನಾಥ್, ಕಾಂಗ್ರೆಸ್ ಬಿಟ್ಟು ಬಂದಾಗ ಅದೇ ದೇವೇಗೌಡರು ಕ್ಷಮಿಸಿ ಪಕ್ಷಕ್ಕೆ ಸೇರಿಸಿಕೊಂಡರು. ಚುನಾವಣೆಯಲ್ಲಿ ಗೆದ್ದ ಮೇಲೆ ದೇವೇಗೌಡರ ಫೋಟೋವನ್ನು ದೇವರ ಫೋಟೋ ಜತೆ ಇಟ್ಟುಕೊಂಡು ಪೂಜೆ ಮಾಡುತ್ತೇನೆ ಅಂತ ಹೇಳಿದ್ದರು. ಈಗ ಪಕ್ಷದ ಕಚೇರಿ ಜೆ.ಪಿ.ಭವನವನ್ನು ದೇವೇಗೌಡರು ತಮ್ಮ ಮನೆಯವರ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಆ ಕಚೇರಿ ಜಯಪ್ರಕಾಶ್ ನಾರಾಯಣ್ ಟ್ರಸ್ಟ್ ಹೆಸರಿನಲ್ಲಿದೆ. ಅಂತಹ ನೀಚನನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಬೇಡಿ" ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಹೀಗೆ ಹೇಳುವುದೇ?
ಎಲ್ಲವನ್ನೂ ದೇವರೇ ಬಲ್ಲ: "ಯಾರು ಕೋಮುವಾದಿಗಳೋ, ಯಾರು ಜಾತ್ಯಾತೀತರೋ ದೇವರೇ ಬಲ್ಲ. ನಾನು ಸಿಎಂ ಆಗಿದ್ದಾಗ ಸ್ವತಂತ್ರವಾಗಿ ಕೆಲಸ ಮಾಡಲಿಲ್ಲ. ಜೆಡಿಎಸ್ ಗೆ 60ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಅವಕಾಶವಿತ್ತು. ಆದರೆ ಅದನ್ನು ತಪ್ಪಿಸಿದ್ದು ಸಿದ್ದರಾಮಯ್ಯ. ಜೆಡಿಎಸ್ ಗೆ ವೋಟು ಹಾಕಿದರೆ ಬಿಜೆಪಿಗೆ ವೋಟು ಕೊಟ್ಟಂತೆ ಅಂತ ಭಾಷಣ ಮಾಡಿದರು. ಮುಸ್ಲಿಂ ಸಂಘಟನೆಗಳು, ಮುಸ್ಲಿಂ ಧರ್ಮಗುರುಗಳ ಜತೆಗೂಡಿ ವೋಟು ಬಾರದಂತೆ ನೋಡಿಕೊಂಡರು. ರಾಹುಲ್ ಗಾಂಧಿ ಅವರಿಂದ ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತ ಭಾಷಣ ಮಾಡಿಸಿದರು. ಚುನಾವಣೆ ಮುಗಿದ ಮೇಲೆ ನಮ್ಮ ಮನೆ ಮುಂದಕ್ಕೆ ಬಂದು ಸಿಎಂ ಆಗಿ ಅಂತ ಕೇಳಿಕೊಂಡರು" ಎಂದು ಕಿಡಿಕಾರಿದರು.