ರಾಮನಗರಕ್ಕೆ ಕೈದಿಗಳ ಸ್ಥಳಾಂತರ; ಎಡಿಜಿಪಿ ಅಲೋಕ್ ಮೋಹನ್ ಮೇಲೆ ಎಚ್ ಡಿಕೆ ಆರೋಪ
ಮೈಸೂರು, ಏಪ್ರಿಲ್ 24: ಪಾದರಾಯನಪುರ ಘಟನೆಯ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿರುವುದರ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಬಂದೀಖಾನೆ ಎಡಿಜಿಪಿ ಅಲೋಕ್ ಮೋಹನ್ ಅವರ ಕೈವಾಡವಿರುವ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, "ಅಲೋಕ್ ಮೋಹನ್ ಆರೋಪಿಗಳ ಸ್ಥಳಾಂತರಕ್ಕೆ ಆದೇಶಿಸಿದ್ದು, ಇದರಿಂದ ಗ್ರೀನ್ ಝೋನ್ ನಲ್ಲಿದ್ದ ರಾಮನಗರಕ್ಕೂ ಕೊರೊನಾ ಹರಡಿಸಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ನಾಯಕರನ್ನು ಕೇಳಿದೆ. ನಿಮಗೆ ಸಲಹೆ ಕೊಟ್ಟವರು ಯಾರು ಎಂದು. ಎಡಿಜಿಪಿ ಪತ್ರ ಬರೆದು ಶಿಫ್ಟ್ ಮಾಡಲು ಹೇಳಿದ್ದಾರೆ ಎಂದು ತಿಳಿದುಬಂದಿದೆ" ಎಂದು ತಿಳಿಸಿದ್ದಾರೆ.
"ನಾನು ಸಿಎಂ ಆಗಿದ್ದಾಗ ಒತ್ತಡ ಹಾಕಿದ್ದರು ಅಲೋಕ್"
ಅಲೋಕ್ ಮೋಹನ್ ನಾನು ಸಿಎಂ ಆಗಿದ್ದಾಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಲು ಒತ್ತಡ ಹಾಕಿದ್ದರು. ಅವರ ಹಿನ್ನೆಲೆ ಗಮನಿಸಿ ಅವಕಾಶ ನೀಡಿರಲಿಲ್ಲ. ಆ ದ್ವೇಷಕ್ಕೆ ಎಡಿಜಿಪಿ ಹೀಗೆ ಮಾಡಿರಬಹುದು. ನನ್ನ ಮೇಲೆ ದ್ವೇಷವಿದ್ದರೆ ತೀರಿಸಿಕೊಳ್ಳಲಿ. ಆದರೆ ರಾಮನಗರದ ಜನರ ಮೇಲೆ ಯಾಕೆ ದ್ವೇಷ ಮಾಡಬೇಕು? ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಸರ್ಕಾರ ಆದೇಶಿಸಬೇಕು. ತಕ್ಷಣ ಆರೋಪಿಗಳನ್ನು ಮೆಡಿಕೇರ್ ಗೆ ಒಳಪಡಿಸಿ ಬೇರೆಯವರಿಗೆ ಸೋಂಕು ಹರಡದಂತೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ರಾಮನಗರಕ್ಕೆ ಕೊರೊನಾ ಲಗ್ಗೆ ಇಡಲು ಸರ್ಕಾರವೇ ಕಾರಣ ಎಂದ ಎಚ್ ಡಿಕೆ
ಜೈಲು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಬೇಕು
ಜೈಲಿನಲ್ಲಿ ಇರುವ ಪೊಲೀಸ್ ಮತ್ತು ಜೈಲು ಸಿಬ್ಬಂದಿಯನ್ನು ಅವಶ್ಯವಾಗಿ ಕ್ವಾರೆಂಟೈನ್ ಮಾಡಬೇಕು. ಬಾಡಿಗೆ ಮನೆಯಲ್ಲಿ ಇದ್ದ ಹಲವರನ್ನು ಮನೆ ಖಾಲಿ ಮಾಡಿ ಅಂತ ಹೇಳಿದ್ದಾರೆ. ಸಿಎಂ ಮತ್ತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಮಧ್ಯಾಹ್ನದ ಒಳಗೆ ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ಎಡಿಜಿಪಿ ಅಲೋಕ್ ಮೋಹನ್ ಗೆ ರಾಮನಗರಕ್ಕೆ ಸ್ಥಳಾಂತರ ಮಾಡಲು ಯಾರು ಒತ್ತಡ ತಂದರು ಎಂದು ಪ್ರಶ್ನಿಸಿದರು.
"ನನ್ನೊಂದಿಗೆ ಬೇರೆ ರೀತಿ ಹೋರಾಟ ಮಾಡಲಿ"
ಈ ವಿದ್ಯಮಾನವನ್ನೆಲ್ಲಾ ನೋಡಿದರೆ, ನನ್ನ ಮೇಲಿನ ದ್ವೇಷಕ್ಕೆ ಕೈದಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದ್ದಾರೆನೋ ಅನಿಸುತ್ತಿದೆ. ನನ್ನ ಮೇಲಿನ ದ್ವೇಷ ಇದ್ದರೆ ಬೇರೆ ರೀತಿ ಹೋರಾಟ ಮಾಡಲಿ. ಸರ್ಕಾರವನ್ನು ಇಕ್ಕಟ್ಟಿಗೆ ತರದೆ ಸಹಕಾರ ನೀಡುತ್ತಿದ್ದೇನೆ. ಇದನ್ನು ದೌರ್ಬಲ್ಯ ಎಂದು ಸರ್ಕಾರ ತಿಳಿಯಬಾರದು ಎಂದರು.
ರಾಮನಗರ ಜೈಲಿನಲ್ಲಿ ಆತಂಕ, ಕೈದಿಗಳಿಂದ ಪ್ರತಿಭಟನೆ, ರೋಗಿಗಳು ವಿಕ್ಟೋರಿಯಾಗೆ ಶಿಫ್ಟ್
"ಆಶಾ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯ ಇನ್ನೂ ಇಳಿದಿಲ್ಲ"
ಆಶಾ ಕಾರ್ಯಕರ್ತೆ ಮೀನಾಕ್ಷಿ ಭಯದಿಂದ ಇನ್ನೂ ಹೊರಬಂದಿಲ್ಲ. ಕೊರೊನಾ ಬಗ್ಗೆ ಮಾಹಿತಿ ಪಡೆಯಲು ಹೋದಾಗ ಕಂಪ್ಯೂಟರ್ ವರ್ಕರ್ ಅವಿನಾಶ್ ಮತ್ತು ಇತರರು ಮೀನಾಕ್ಷಿ ವಿರುದ್ಧ ಹರಿಹಾಯ್ದಿದ್ದಾರೆ. ಮನ ಬಂದಂತೆ ಮಾತನಾಡಿ ಕಿರುಕುಳ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ತೊಂದರೆ ಕೊಡುವ ಪ್ರಕರಣ ಹೆಚ್ಚಾಗುತ್ತಿದೆ. ಹೆಡೆಮುರಿ ಕಟ್ಟುತ್ತೇವೆ ಅಂತ ಮಾಧ್ಯಮಗಳ ಮುಂದೆ ಪ್ರಚಾರಕ್ಕೆ ಹೇಳಿದ್ದಾರೋ ಅಥವಾ ಕೊರೊನಾ ವಾರಿಯರ್ಸ್ ಗೆ ರಕ್ಷಣೆ ಕೊಡಲು ಹೇಳಿದ್ದಾರೋ ತಿಳಿಯದು. ಮೀನಾಕ್ಷಿ ಆತ್ಮಹತ್ಯೆ ಯತ್ನಕ್ಕೆ ಕಾರಣರಾದವರನ್ನು ಈಗಾಗಲೇ ರಾಜಕೀಯ ಒತ್ತಡ ಹೇರಿ ಪೊಲೀಸ್ ಸ್ಟೇಷನ್ ನಲ್ಲಿ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಇಂತಹ ಹಲವು ಘಟನೆಗಳಿಂದ ರಾಜ್ಯ ಸರ್ಕಾರ ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಿದೆ. ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದು ಟೀಕಿಸಿದರು.