ಮೋದಿಯಿಂದ ವಿಪಕ್ಷ ನಾಯಕರ ಮೇಲೆ ಮಾತ್ರ ದಾಳಿ, ಬಿಜೆಪಿಯಲ್ಲಿರುವವರೆಲ್ಲ ಸತ್ಯವಂತರಾ?; ದೇವೇಗೌಡ ಆರೋಪ
ಮೈಸೂರು, ಅಕ್ಟೋಬರ್ 11: "ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐಟಿ, ಇಡಿ, ಸಿಬಿಐ ಎಲ್ಲಾ ತನಿಖಾ ಸಂಸ್ಥೆಗಳನ್ನು ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರ ಮೇಲೆ ಮಾತ್ರ ಐಟಿ ದಾಳಿ ನಡೆಯುತ್ತಿದೆ. ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯವಂತರೇ?" ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.
ಜಿ ಪರಮೇಶ್ವರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು?
ಮೈಸೂರಿನಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, "ತಮ್ಮ ಎದುರಾಳಿಗಳನ್ನು ಮಣಿಸಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಜಿ.ಪರಮೇಶ್ವರ್ ತಂದೆ ಮೆಡಿಕಲ್ ಕಾಲೇಜ್ ಸ್ಥಾಪಿಸಿ ಅದನ್ನು ಬೆಳೆಸಿದ್ದಾರೆ. ಅವರೇನೂ ನಿನ್ನೆ ಮೊನ್ನೆ ಶ್ರೀಮಂತರಾದವಲ್ಲ. ಪರಮೇಶ್ವರ್ ತಂದೆ ಮಾಡಿದ ಆಸ್ತಿ ಅದು. 50 ವರ್ಷದ ಹಿಂದೆಯೇ ಅವರು ಈ ಆಸ್ತಿ ಮಾಡಿದ್ದರು. ಪರಮೇಶ್ವರ್ ಏನು ಮಾಡಿದ್ದಾರೆ. ಹೊಸ ಪ್ರವೇಶಾತಿಯಲ್ಲಿ ಒಂದಿಷ್ಟು ವ್ಯತ್ಯಾಸ ಆಗಿರಬಹುದು. ಪರಮೇಶ್ವರ್ ದಿಢೀರನೆ ಐದು ಸಾವಿರ ಕೋಟಿ ಆಸ್ತಿ ಮಾಡಿಲ್ಲ. ಹಾಗಾದರೆ ಬಿಜೆಪಿಯಲ್ಲಿ ಇರುವವರೆಲ್ಲಾ ಪ್ರಾಮಾಣಿಕರಾ? ಅವರಲ್ಲಿ ತಪ್ಪು ಮಾಡಿದವರೇ ಇಲ್ವಾ?" ಎಂದು ಪ್ರಶ್ನಿಸಿದರು.
"ನಾನೇನೂ ಅಧಿಕಾರ ಕೊಡಿ ಅಂತಾ ಕಾಂಗ್ರೆಸ್ ಮನೆಗೆ ಹೋಗಿರಲಿಲ್ಲ. ಗುಲಾಂ ನಬಿ ಆಜಾದ್ ಅವರೇ ಮನೆಗೆ ಬಂದು ನನ್ನ ಕೈ ಹಿಡಿದುಕೊಂಡು ಒದ್ದಾಡಿ ನಮಗೆ ಅಧಿಕಾರ ಕೊಟ್ಟರು. ನಮಗೆ ಅಧಿಕಾರ ಬೇಡ, ಖರ್ಗೆ ಅವರನ್ನು ಸಿಎಂ ಮಾಡಿ ಅಂದೆ. ಆದರೂ ಕೈ ಹಿಡಿದುಕೊಂಡು ನನ್ನನ್ನು ಒಪ್ಪಿಸಿದರು. ಮೈತ್ರಿ ಸರಕಾರ ಇದ್ದಾಗ ನನ್ನ ಒಂದು ಕಾರ್ಯಕ್ರಮವೂ ನಿಲ್ಲಬಾರದು ಅಂತ ಸಿದ್ದರಾಮಯ್ಯ ಕಂಡೀಷನ್ ಹಾಕಿದ್ರು. ಆ ಯೋಜನೆಗಳನ್ನು ಮುಂದುವರಿಸಿ, ಅದಕ್ಕೆ ಹಣ ಹೊಂದಿಸಿ ನಂತರ ಕೊಡಗಿಗೂ ಎಚ್.ಡಿ.ಕುಮಾರಸ್ವಾಮಿ ಪರಿಹಾರ ಹಣ ಕೊಟ್ಟರು. ಆಗ ಕೇಂದ್ರ ಸರಕಾರ ತತ್ ಕ್ಷಣ ಒಂದು ರೂಪಾಯಿ ಕೊಟ್ಟಿರಲಿಲ್ಲ. ಕುಮಾರಸ್ವಾಮಿ ಎಲ್ಲವನ್ನು ಸರಿದೂಗಿಸಿದರು" ಎಂದು ಮಗನ ಆಡಳಿತವನ್ನು ಪ್ರಶಂಸಿಸಿದರು.
ವಿಧಾನಸಭೆ ಕಲಾಪ ವರದಿಗೆ ಮಾಧ್ಯಮಕ್ಕೆ ನಿರ್ಬಂಧ: ದೇವೇಗೌಡ ಖಂಡನೆ
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರನ್ನು ಅಕಸ್ಮಾತ್ ಭೇಟಿಯಾದ ದೇವೇಗೌಡ ಅವರು ಸೋಮಣ್ಣ ಅವರ ಬೆನ್ನು ತಟ್ಟಿ ಯಶಸ್ವಿಯಾಗಿ ದಸರಾ ನಿರ್ವಹಿಸಿದ ಬಗ್ಗೆ ಪ್ರಶಂಶಿಸಿದರು.