ಉಪ ಚುನಾವಣೆ: ಹುಣಸೂರಿನಲ್ಲಿ ತಾತ, ಮೊಮ್ಮಗನ ಭರ್ಜರಿ ಪ್ರಚಾರ
ಮೈಸೂರು, ನವೆಂಬರ್ 27: ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಹುಣಸೂರು ಉಪ ಚುನಾವಣೆ ಅಖಾಡದಲ್ಲಿ ತಾತ ಹಾಗೂ ಮೊಮ್ಮಗ ಪ್ರಚಾರದ ಭರಾಟೆ ಜೋರಾಗಿತ್ತು. ಉಪ ಚುನಾವಣೆ ಹಿನ್ನೆಲೆಯಲ್ಲಿ ಹುಣಸೂರಿನ ಮನಗನಹಳ್ಳಿಯಲ್ಲಿ ಭರ್ಜರಿ ಕ್ಯಾಂಪೈನ್ ನಡೆಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ, ರೋಡ್ ಶೋ ಮೂಲಕ ಮತದಾರರ ಮನಸೆಳೆಯುವ ಪ್ರಯತ್ನ ನಡೆಸಿದರು.
ತಾತ ಮೊಮ್ಮಗನ ಜಂಟಿ ಪ್ರಚಾರಕ್ಕೆ ಮಾಜಿ ಸಚಿವ ಸಾ.ರಾ.ಮಹೇಶ್, ಪರಿಷತ್ ಸದಸ್ಯ ಬೋಜೇಗೌಡ, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಕೂಡ ಸಾಥ್ ನೀಡಿದರು.
ವಿಶ್ವನಾಥ್ ವಿರುದ್ಧ ಪ್ರಜ್ವಲ್ ಕಿಡಿ: ತಾಲೂಕಿನ ಹಲವು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರಜ್ವಲ್ ರೇವಣ್ಣ, ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು. ರೈತರು ಕಷ್ಟ ಅಂದಾಗ ನಮ್ಮ ಮೈಸೂರು ಸಂಸದರು, ಶಾಸಕರು ಎಲ್ಲಿದ್ರು ಗೊತ್ತಾ? ಮೈಸೂರು ಸಂಸದರು ವ್ಯಾಪಾರ ಮಾಡ್ತಿದ್ರು. ಹುಣಸೂರು ಶಾಸಕರು ವ್ಯಾಪಾರ ಆಗ್ತಿದ್ರು ಎಂದು ಇಬ್ಬರ ಹೆಸರೇಳದೆ ಟಾಂಗ್ ನೀಡಿದರು.
ಅಲ್ಲದೇ ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರದ ಬಗ್ಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ವಿಶ್ವನಾಥ್ ದನಿ ಎತ್ತಲಿಲ್ಲ. ಒಂದು ವೇಳೆ ಹೇಳಿದ್ದರೆ ಹಬ್ಬದ ಊಟ ಹಾಕಿಸಿ ಜಿಲ್ಲೆ ಮಾಡುತ್ತಿದ್ದರು. ನಮ್ಮ ಪಕ್ಷ ಬಿಟ್ಟ ಮೇಲಾದ್ರು ಜಿಲ್ಲೆ ಮಾಡಿ. ಮತ ಕೇಳೋಕೆ ಮಾತ್ರ ಈಗ ಜಿಲ್ಲೆ ವಿಚಾರ ಮಾತಾಡ್ತಿದ್ದಾರೆ ಅಷ್ಟೇ ಎಂದು ವಿಶ್ವನಾಥ್ ವಿರುದ್ಧ ಕಿಡಿಕಾರಿದರು.