ನಾಗರಹೊಳೆ ರಸ್ತೆಯಲ್ಲಿ ಪ್ರತಿ 500ಮೀಟರ್ಗೆ ಒಂದು ಹಂಪ್ ನಿರ್ಮಾಣ
ಬೆಂಗಳೂರು, ಮಾರ್ಚ್ 8: ಇತ್ತೀಚೆಗೆ ವಾಹನಗಳಿಗೆ ಸಿಲುಕಿ ಪ್ರಾಣಿಗಳು ಮೃತಪಡುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಹೊಳೆಯ ಅಭಯಾರಣ್ಯದಲ್ಲಿ ಪ್ರತಿ ಅರ್ಧ ಕಿ.ಮೀಗೆ ಒಂದು ಹಂಪ್ ಹಾಕಲು ಹೈಕೋರ್ಟ್ ಆದೇಶಿಸಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ಹೆದ್ದಾರಿ ಸಂಖ್ಯೆ 90ರ 11 ಕಿ.ಮೀ ಉದ್ದದ ರಸ್ತೆಯಲ್ಲಿ ಮುಂದಿನ 10ದಿನಗಳಲ್ಲಿ ಪ್ರತಿ 500 ಮೀಟರ್ಗೆ ಒಂದು ಹಂಪ್ ನಿರ್ಮಿಸುವಂತೆ ತಿಳಿಸಿದೆ.
ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ನಗರದ ನಿವಾಸಿಗಳಾದ ಎಚ್ಸಿ ಪ್ರಕಾಶ್ ಮತ್ತು ಎಎಂ ಮಹೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶ ನೀಡಿದೆ.
ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ , 2018ರ ಅ.8ರಂದು ಬಸ್ವೊಂದು ಡಿಕ್ಕಿ ಹೊಡೆದ ಪರಿಣಾಮ ರಂಗ ಎಂಬ ಆನೆ ಮೃತಪಟ್ಟಿತ್ತು.