ಲಂಚ ಪ್ರಕರಣದಲ್ಲಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗೆ ಕಂಟಕ
ಅಕ್ರಮ ಮರಳುಗಾರಿಕೆಗೆ ಪರವಾನಗಿ ನೀಡಲು ಲಂಚ ಪಡೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಪ್ರೇರೇಪಣೆ ನೀಡಿದ ಪ್ರಕರಣದಲ್ಲಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗೆ ಹಿನ್ನಡೆಯಾಗಿದೆ.
ಮೈಸೂರು, ಫೆಬ್ರವರಿ 21: ಅಕ್ರಮ ಮರಳುಗಾರಿಕೆಗೆ ಪರವಾನಗಿ ನೀಡಲು ಲಂಚ ಪಡೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಪ್ರೇರೇಪಣೆ ನೀಡಿದ ಪ್ರಕರಣದಲ್ಲಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗೆ ಹಿನ್ನಡೆಯಾಗಿದೆ. ಫೆಬ್ರವರಿ 27ರಂದು ಖುದ್ದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.[ನಂಜನಗೂಡು ಉ.ಚು: ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಶವಮೂರ್ತಿ ಬಹುತೇಕ ಖಚಿತ]
ಫೆ.20ರಂದು ಸುನಿಲ್ ಬೋಸ್ ಖುದ್ದು ಹಾಜರಾಗುವಂತೆ ಈ ಹಿಂದೆಯೇ ನ್ಯಾಯಾಲಯ ಆದೇಶಿಸಿತ್ತು. ಆದರೆ ಸುನಿಲ್ ಬೋಸ್ ಪರ ವಕೀಲರು ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು ಎಂದು ಕೇಳಿಕೊಂಡಿದ್ದರು. ಪ್ರಕರಣದಲ್ಲಿ ಸುನಿಲ್ ಬೋಸ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ್ದರಿಂದ ಸುನಿಲ್ ಬೋಸ್ ಹೆಸರನ್ನು ಕೈ ಬಿಡುವಂತೆ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು.[ಸಿದ್ದರಾಮಯ್ಯಗೆ ಪ್ರತ್ಯುತ್ತರ ನೀಡಲು ಶ್ರೀನಿವಾಸ ಪ್ರಸಾದ್ ಸಜ್ಜು]
ಖಡಕ್ ಆದೇಶ
ಆದರೆ ಸದರಿ ಪ್ರಕರಣದಲ್ಲಿ ಸುನಿಲ್ ಬೋಸ್ ಹೆಸರು ಕೈಬಿಡಲು ನಿರಾಕರಿಸಿರುವ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಫೆ.27 ರಂದು ಖುದ್ದು ಹಾಜರಾಜಲೇಬೇಕೆಂದು ಆದೇಶ ನೀಡಿದೆ.
ಪ್ರಕರಣದ ಹಿನ್ನಲೆ:
ಈ ಪ್ರಕರಣ ನಡೆದಿದ್ದು 2010ರಲ್ಲಿ. ಗುತ್ತಿಗೆದಾರ ಬಸವರಾಜುರವರು ಮರಳು ಗಣಿಗಾರಿಕೆಗೆಯ ಗುತ್ತಿಗೆ ಅರ್ಜಿ ಹಾಕಿದ್ದರು. ಆಗ ಲೋಕಾಯುಕ್ತರ ಕೈಗೆ ಲಂಚ ಸ್ವೀಕರಿಸುತ್ತಿದ್ದ ಹಿರಿಯ ಭೂವಿಜ್ಞಾನಿ ಅಲ್ಫೋನ್ಸಿಸ್ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡಿದ್ದರು. ನಂತರ ಲೋಕಾಯುಕ್ತ ಪೊಲೀಸರಿಗೆ ಹೇಳಿಕೆ ನೀಡಿದ ಅಲ್ಫೋನ್ಸಿಸ್ "ಲಂಚ ಪಡೆಯುವ ಇರಾದೆ ನನಗೆ ಇರಲಿಲ್ಲ. ಆದರೆ ಅಂದು ಶಾಸಕರಾಗಿದ್ದ ಮಹದೇವಪ್ಪನವರ ಪುತ್ರ ಸುನೀಲ್ ಬೋಸ್ ತನ್ನ ಮೇಲೆ ಒತ್ತಡ ಹೇರಿ, ನನ್ನ ಬೆಂಬಲಿಗನಿಗೆ ತಲುಪಿಸುವಂತೆ ಪೀಡಿಸಿದ್ದರಿಂದ ಲಂಚ ಪಡೆಯಬೇಕಾಯಿತು," ಎಂದು ಹೇಳಿದ್ದರು.
ಆರೋಪಿ ಸುನಿಲ್ ಬೋಸ್
ಇದರಿಂದಾಗಿ ಪ್ರಕರಣದಲ್ಲಿ ಸುನಿಲ್ ಬೋಸ್ ಕೂಡಾ ಆರೋಪಿಯಾದರು. ಮುಂದೆ ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ಮೂರು ವರ್ಷಗಳ ತನಿಖೆ ನಡೆಸಿ, 2013ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದರು. ಆದರೆ ಇದರಲ್ಲಿ ಸುನೀಲ್ ಬೋಸ್ ಹಾಗೂ ಬೆಂಬಲಿಗ ರಾಜು ಹೆಸರನ್ನು ಕೈಬಿಡಲಾಗಿತ್ತು.
ಆಕ್ಷೇಪ
ಲೋಕಾಯುಕ್ತ ಪೊಲೀಸರ ಚಾರ್ಜ್ ಶೀಟ್ ಪ್ರಶ್ನಿಸಿ ದೂರುದಾರ ಬಸವರಾಜು ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಈ ಅರ್ಜಿಯಲ್ಲಿ ಮಹದೇವಪ್ಪ ಮಗ ಸುನೀಲ್ ಬೋಸ್ ಹಾಗೂ ರಾಜು ಅವರನ್ನು ಕೂಡ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸುವಂತೆ ಮೈಸೂರು ನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಅರ್ಜಿ ಪುರಸ್ಕರಿಸಿದ ನ್ಯಾಯಾಲಯ
2016ರ ಸೆಪ್ಟೆಂಬರ್ 7 ರಂದು ಮೈಸೂರಿನ 3ನೇ ಜೆಎಂಎಫ್ ನ್ಯಾಯಾಲಯ ಬಸವರಾಜುಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ಆರಂಭಿಸಿತ್ತು. ನಂತರ ನ್ಯಾಯಾಧೀಶರು ಸೆಪ್ಟಂಬರ್ 27 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಆದೇಶ ನೀಡಿದ್ದರು. ಆದರೆ ಸುನೀಲ್ ಬೋಸ್ ಹಾಗೂ ಅವರ ವಕೀಲರು ಗೈರಾಗಿದ್ದರು. ಈ ಪ್ರಕರಣದಿಂದ ವಿನಾಯಿತಿ ಕೋರಿ ಬೋಸ್ ಹೈಕೋರ್ಟ್ ಮೊರೆ ಹೋಗಿದ್ದರಾದರೂ ಅದಕ್ಕೆ ಕೋರ್ಟ್ ಸಮ್ಮತಿಸಿಲ್ಲ. ಇದೀಗ ಫೆಬ್ರವರಿ 27ರಂದು ಖುದ್ದು ಹಾಜರಾತಿಗೆ ಆದೇಶ ನೀಡಿದ್ದು ಅಂದು ಬೋಸ್ ಕಟೆಕಟೆ ಏರಬೇಕಾಗಿದೆ.