ಭೂ ಹೋರಾಟ ಜಿಲ್ಲೆಯಿಂದ ಬಂದ ಸಿಎಂ ಹೀಗೆ ಮಾಡಬಹುದಾ?: ಎಚ್ಸಿಎಂ
ಮೈಸೂರು, ಜೂನ್ 25: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ ಉಳುವವನೇ ಭೂಮಿಯ ಒಡೆಯ ಅನ್ನುವ ಹೋರಾಟ ಆರಂಭವಾಯಿತು. ಆದರೆ ಅದೇ ಜಿಲ್ಲೆಯಿಂದ ಬಂದ ಸಿಎಂ ಭೂ ಕಾಯ್ದೆ ತಿದ್ದುಪಡಿ ನಿರ್ಧಾರ ಮಾಡಿರುವುದು ದುರಂತ ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಹೇಳಿದರು.
Recommended Video
ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಮಹದೇವಪ್ಪ, ಭೂಮಿ ರೈತನಿಗೆ ಒಂದು ಸಾಮಾಜಿಕ ಸ್ಥಾನಮಾನ ತಂದುಕೊಡುತ್ತದೆ. ಇದನ್ನು ಸ್ವತಃ ಡಾ.ಬಿ.ಆರ್ ಅಂಬೇಡ್ಕರ್ ಹೇಳಿದ್ದಾರೆ ಎಂದರು.
ನಾಮ ನಿರ್ದೇಶನದ ಮೂಲಕ ಪರಿಷತ್ ಸ್ಥಾನ; ಎಚ್ ವಿಶ್ವನಾಥ್ ಭರವಸೆ
ಪ್ರಧಾನಿ ನರೇಂದ್ರ ಮೋದಿ ಕೃಷಿಕರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ದೇಶದ ಯಾವ ನ್ಯಾಯಲಯವು ಭೂ ಕಾಯ್ದೆಯ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಆದರೂ ಸರ್ಕಾರ ಈ ಬಗ್ಗೆ ಚರ್ಚೆಯೇ ಮಾಡದೆ ನಿರ್ಧಾರ ತೆಗೆದುಕೊಂಡಿದೆ ಎಂದು ಟೀಕಿಸಿದರು.
ವಸಾಹತು ಶಾಯಿಗಳ ವಿರುದ್ಧ ಹೋರಾಟ ಮಾಡಿದ್ದ ನಾಡಿನಲ್ಲಿ ಮತ್ತೆ ಅವರಿಗೆ ಭೂಮಿ ಕೊಡುತ್ತಿದ್ದಾರೆ. ಇದು ರೈತರಿಗೆ ಮರಣ ಶಾಸನವೆಂದು ಮೈಸೂರಿನಲ್ಲಿ ಮಾಜಿ ಸಚಿವ ಎಚ್.ಸಿ ಮಹದೇವಪ್ಪ ತಿಳಿಸಿದರು.
ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿಲ್ಲ. ಈ ನಡುವೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿದೆ. ಇದು ರಾಜ್ಯಕ್ಕೆ ದೊಡ್ಡ ಅಘಾತ ಎಂದರು.
ರೈತರ ಬಗ್ಗೆ ಯೋಚನೆ ಮಾಡದೆ ಬಿಜೆಪಿ ಸರ್ಕಾರ 79(A) ರದ್ದು ಪಡಿಸುವ ನಿರ್ಧಾರ ಮಾಡಿದ್ದು, ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದು ರೈತ ವಿರೋಧಿ ನಿಲುವು ಎಂದು ವಾಗ್ದಾಳಿ ನಡೆಸಿದರು.
ಎಚ್ ವಿಶ್ವನಾಥ್ ಗೆ ತಪ್ಪಿದ ಟಿಕೆಟ್; ಸಾರಾ ಮಹೇಶ್ ಏನಂದರು...
ಸರ್ಕಾರ ಮಹಾಭಾರತದ ಸಂದರ್ಭದ ರೀತಿಯಲ್ಲಿ ಹೊಂಚು ಹಾಕಿ ಯುದ್ಧ ಗೆಲ್ಲಲು ಹೊರಟಿದೆ. ಲಾಕ್ಡೌನ್ ಸಂದರ್ಭದಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಮುಂದಾಗಿದೆ. ಜನರು, ವಿಪಕ್ಷಗಳು ಹೋರಾಟ ಮಾಡಲು ಅವಕಾಶ ಇಲ್ಲದಂತಾಗಿದ್ದು, ಇಡೀ ಕೃಷಿ ಕ್ಷೇತ್ರವೇ ಕಿತ್ತುಕೊಂಡು ಹೋಗುವ ಮುನ್ಸೂಚನೆ ಇದೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ನೋಡಿದರೆ ಈ ನಿರ್ಧಾರ ಅವರೊಬ್ಬರೇ ಮಾಡಿದಂತೆ ಕಾಣುತ್ತಿಲ್ಲ. ಯಾವುದೋ ಹಿಡನ್ ಅಜೆಂಡಾ, ಕಾಣದ ಕೈ ಇದರ ಹಿಂದೆ ಇದೆ ಎಂದ ಅವರು, ಕಾಂಗ್ರೆಸ್ ಯಾವಾಗಲೂ ಭೂ ಸುಧಾರಣೆ ಕಾಯ್ದೆ ಪರ ಇರುತ್ತದೆ. ಮುಂದೆಯೂ ರೈತರ ಪರ ಹಾಗೂ ಬಡವರ ಪರ ಇರಲಿದೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಹೇಳಿಕೆ ನೀಡಿದರು.