ನಾವು ಯಾರಿಗೂ ಆಫರ್ ಕೊಟ್ಟಿಲ್ಲ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಗೊತ್ತಿಲ್ಲ: ಬೊಮ್ಮಾಯಿ
ಮೈಸೂರು, ಜೂನ್ 8: ರಾಜ್ಯಸಭಾ ಚುನಾವಣಾ ವಿಚಾರವಾಗಿ ನಾವು ಯಾರಿಗೂ ಆಫರ್ ನೀಡಿಲ್ಲ, ಚುನಾವಣೆ ಸಂಬಂಧ ಕಾಂಗ್ರೆಸ್ -ಜೆಡಿಎಸ್ ಏನು ಮಾಡುತ್ತಾರೋ ಗೊತ್ತಿಲ್ಲ. ನಮಗೆ ಮೂರು ಸ್ಥಾನ ಗೆಲ್ಲಲು ಮತಗಳಿವೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ತಿಳಿಸಿದ್ದಾರೆ.
ಎಚ್ಡಿಕೆ-ಸಿದ್ದು ವೈಮನಸ್ಸೇ ಪಕ್ಷಗಳ ದೋಸ್ತಿಗೆ ಮುಳುವಾಗುತ್ತಿದೆಯಾ?
ಮೇಕೆದಾಟು ಯೋಜನೆ ತಡೆ ಹಿಡಿಯುವ ಸುಪ್ರೀಂಕೋರ್ಟ್ಗೆ ತಮಿಳುನಾಡು ಅರ್ಜಿ ಸಲ್ಲಿಸಿರುವುದನ್ನು ಖಂಡಿಸಿದ ಸಿಎಂ, ಇದು ನ್ಯಾಯ ಸಮ್ಮತವಲ್ಲ. ಕೇಂದ್ರ ಸರಕಾರಕ್ಕೆ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ಸರಿಯಾದ ಕ್ರಮವೂ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್ ನಮಗೆ ನೋಟಿಸ್ ಕೊಟ್ಟಿದ್ದರು. ಅದಕ್ಕೆ ನಾವು ಸಮರ್ಥವಾದ ಉತ್ತರ ಕೊಟ್ಟಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಸುಪ್ರೀಂಕೋರ್ಟ್ ಆದೇಶದನ್ವಯ ರಚನೆಯಾಗಿದೆ. ಕಾವೇರಿ ನದಿಗೆ ಸಂಬಂಧಪಟ್ಟಂತೆ ಯಾವ ಯೋಜನೆ ಜಾರಿಗೊಳಿಸಬೇಕು, ಜಾರಿಗೊಳಿಸಬಾರದು ಎಂದು ತೀರ್ಮಾನ ಮಾಡುವ ಅಧಿಕಾರ ಪ್ರಾಧಿಕಾರಕ್ಕೆ ಮಾತ್ರ ಇದೆ. ಯೋಜನೆ ಸಂಬಂಧ 6 ರಿಂದ 17 ಸಭೆಗಳನ್ನು ಮಾಡಲಾಗಿದೆ ಎಂದರು.
ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದ ಮಾತನಾಡಿದ ಬೊಮ್ಮಾಯಿ, ನೇಮಕಾತಿಗೆ ಸಂಬಂದಪಟ್ಟ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಲೋಕಾಯುಕ್ತರನ್ನು ನೇಮಿಸಲಾಗುವುದು ಆ ವಿಚಾರದಲ್ಲಿ ಇನ್ನು ವಿಳಂಬವಾಗುವುದಿಲ್ಲ ಎಂದರು.
ರಾಜ್ಯಸಭೆ ಚುನಾವಣೆ: ಕೋವಿಡ್-19 ಸೋಂಕಿತ ಶಾಸಕರು ಮತದಾನ ಮಾಡೋದು ಹೇಗೆ?
ಮೈಸೂರು ಕುರಿತು ಮಾತನಾಡುತ್ತಾ, ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರನ್ನ ನಾವು ನೆನೆಸಿಕೊಳ್ಳಬೇಕು. ರಾಜ್ಯ ಇಂದು ಇಷ್ಟು ಪ್ರಗತಿ ಸಾಧಿಸಿದೆ ಎಂದರೆ ಮೈಸೂರು ಅರಸರ ಕೊಡುಗೆ ಬಹಳಷ್ಟಿದೆ. ಮೈಸೂರಿನ ಆಳರಸರು ದೂರದೃಷ್ಟಿ ಹಾಗೂ ಪ್ರಗತಿಪರ ಚಿಂತನೆ ಉಳ್ಳವರಾಗಿದ್ದರು, ಆದ್ದರಿಂದಲೇ ಜಿಲ್ಲೆ ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿದೆ ಎಂದರು.
ಬೆಂಗಳೂರಿನ ನಂತರ ಮೈಸೂರಿನಲ್ಲಿ ಹೆಚ್ಚಿನ ಪಜ್ಞಾವಂತರು, ತಜ್ಞರು ಇದ್ದಾರೆ. ಅತಿ ಹೆಚ್ಚು ತಾಂತ್ರಿಕ ಹಾಗೂ ಮೆಡಿಕಲ್ ಕಾಲೇಜುಗಳು ಕರ್ನಾಟಕದಲ್ಲಿ ಇವೆ. ನಾಲ್ಕು ಫಾರ್ಚೂನ್ ಕೇಂದ್ರಗಳು ಕರ್ನಾಟಕದಲ್ಲಿ ಇವೆ. ಇದೆಲ್ಲ ಆರಂಭವಾಗಿದ್ದು ಮೈಸೂರಿನಿಂದ. ಆಧುನಿಕ ಕರ್ನಾಟಕದ ನಿರ್ಮಾಣದಲ್ಲಿ ಮೈಸೂರು ನಗರ ಪ್ರಮುಖ ಪಾತ್ರ ವಹಿಸಿದೆ. ಬೆಂಗಳೂರು ನಂತರ ಟೈಪ್ ಟು ಸಿಟಿಗಳಲ್ಲಿ ಮೈಸೂರು ಸಹ ಒಂದಾಗಿದೆ. ಮುಂದಿನ ಕರ್ನಾಟಕದ ಬೆಳವಣಿಗೆಯಲ್ಲಿ ಮೈಸೂರು ಸೇರಿದಂತೆ ಐದು ಮಹಾನಗರಗಳು ಪ್ರಮುಖ ಪಾತ್ರ ವಹಿಸಲಿವೆ. ಎಂದು ಮೈಸೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬೊಮ್ಮಾಯಿ ಹೇಳಿದರು.
(ಒನ್ಇಂಡಿಯಾ ಸುದ್ದಿ)