50 ಸಾವಿರ ರೂ. ಕಳಕೊಂಡವನಿಗೆ ಮತ್ತೆ ಸಿಕ್ಕಿದ್ದು ಹೇಗೆ ಗೊತ್ತಾ?
ಮೈಸೂರು, ಮಾರ್ಚ್ 27: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹಣ ಸಂಪಾದನೆಯೇ ಕಷ್ಟವಾಗಿರುವ ಈ ಕಾಲದಲ್ಲಿ ವ್ಯಕ್ತಿಯೊಬ್ಬ ಕಳೆದುಕೊಂಡಿರುವ 50 ಸಾವಿರ ರುಪಾಯಿ ಮರಳಿ ಸಿಕ್ಕಿರುವುದು ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದ ತ್ರಿವೇಣಿ ನಗರದ ನಿವಾಸಿ ವಿವೇಕ್ ಎಂಬುವವರು ಗುರುವಾರ ರಾತ್ರಿ ಸ್ಟೇಟ್ ಬ್ಯಾಂಕಿನ ಎಟಿಎಮ್ ನಿಂದ 50 ಸಾವಿರ ರುಪಾಯಿ ಹಣವನ್ನು ಡ್ರಾ ಮಾಡಿ ಪರ್ಸಿನಲ್ಲಿಟ್ಟುಕೊಂಡು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು.
ಆದರೆ ಮನೆ ತಲುಪುವುದರಲ್ಲೇ ಹಣ ಇದ್ದ ಪರ್ಸ್ ಬಿದ್ದು ಹೋಗಿತ್ತು. ತೀವ್ರ ದುಃಖದಿಂದ ಪುನಃ ತಾವು ಬಂದ ದಾರಿಯಲ್ಲೇ ಹಿಂತಿರುಗಿ ಹೋದರೂ ಕೂಡ ಹಣದ ಪರ್ಸ್ ಸಿಕ್ಕಿರಲಿಲ್ಲ.
ಏನಾದರೂ ಆಗಲಿ ಒಂದು ಪೊಲೀಸ್ ದೂರು ಕೊಟ್ಟೇ ಬಿಡಲು ತೀರ್ಮಾನಿಸಿ, ತೀ.ನರಸೀಪುರ ಪಟ್ಟಣ ಠಾಣೆಯಲ್ಲೇ ದೂರನ್ನು ನೀಡಿ ಮನೆಗೆ ಹೋದರು. ಹಣ ಸಿಗುವ ಯಾವ ಭರವಸೆ ಅವರಲ್ಲಿ ಇರಲಿಲ್ಲ. ದುಃಖದಿಂದಲೇ ರಾತ್ರಿ ಕಳೆದ ಇವರಿಗೆ ಬೆಳಿಗ್ಗೆ ಪೊಲೀಸ್ ಠಾಣೆಯಿಂದ ಬಂದ ಆ ಕರೆ ಅವರಿಗೆ ಅತೀವ ಸಂತಸ ನೀಡಿತು.
ಆದರೆ, ಗಸ್ತಿನಲ್ಲಿದ್ದ ಪೊಲೀಸರಿಗೆ 50 ಸಾವಿರ ರುಪಾಯಿಗಳಿದ್ದ ಪರ್ಸ್ ಸಿಕ್ಕಿದ್ದು, ಅದನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದರು. ಅದೇ ವೇಳೆಯಲ್ಲಿ ಠಾಣೆಯ ಸಿಬ್ಬಂದಿಯೋರ್ವರು ಕೆಲ ಗಂಟೆಗಳ ಹಿಂದೆ ವ್ಯಕ್ತಿಯೋರ್ವರು 50 ಸಾವಿರ ರೂ.ಕಳೆದುಕೊಂಡಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
ಕೂಡಲೇ ಪೊಲೀಸರು ಹಣ ಕಳೆದುಕೊಂಡಿದ್ದ ವಿವೇಕ್ ಗೆ ಕರೆ ಮಾಡಿ, ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ಮಾಡಿ 50 ಸಾವಿರ ರೂ. ಹಣ ಹಿಂತಿರುಗಿಸಿದ್ದಾರೆ. ಸಿಬ್ಬಂದಿ ದಯಾನಂದ್, ಮಾದೇಶ್, ಮೋಹನ್ ಅವರ ಪ್ರಾಮಾಣಿಕತೆಗೆ ವಿವೇಕ್ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಪ್ರಾಮಾಣಿಕತೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.