ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಿರುಕುಳ: ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ
ಮೈಸೂರು, ಜನವರಿ 5: ಅರಣ್ಯ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಕಿರುಕುಳದಿಂದ ಬೇಸತ್ತ ಕುಟುಂಬವೊಂದು ಆತ್ಮಹತ್ಯೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಮೈಸೂರು ನಗರದ ಅರಣ್ಯಭವನದ ಎದುರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಬೆಟ್ಟದ ಬೀಡು ಗ್ರಾಮದ ಕುಮಾರಿ ಎಂಬುವರೇ ತಮ್ಮ ಮಕ್ಕಳೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನನ್ನ ಪತಿ ಬೋರೇಗೌಡ ದಿನಗೂಲಿ ವಾಚರ್ ಆಗಿ ಕಳೆದ 2001 ರಿಂದ ಇಲ್ಲಿಯವರೆಗೂ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಮಾರ್ಚ್ 2020ರಿಂದ ಅಕ್ಟೋಬರ್ 2020ರ ಸಂಬಳವನ್ನು ಕೊಟ್ಟಿಲ್ಲ ಎಂದು ದೂರಿದ್ದಾರೆ.
ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು; ವೇಳಾಪಟ್ಟಿ
ನವೆಂಬರ್ 2020ರಿಂದ ಕೆಲಸಕ್ಕೆ ಬರುವುದು ಬೇಡವೆಂದು ತಿಳಿಸಿದ್ದಾರೆ. ನಮ್ಮ ಯಜಮಾನರು ಕಳೆದ 18-19 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ 43 ವರ್ಷ. ಹಾಗಾಗಿ ಬೇರೆ ಕಡೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ, ಕೆಲಸ ಇಲ್ಲದಿದ್ದರೆ ನಮ್ಮ ಸಂಸಾರ ಬೀದಿಗೆ ಬೀಳುತ್ತದೆ. ನನಗೂ ಆರೋಗ್ಯದ ಸಮಸ್ಯೆ ಇದ್ದು ,ಮಕ್ಕಳನ್ನು ಕೂಲಿ ಮಾಡಿ ಸಾಕಲು ಸಾಧ್ಯವಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಹಿರಿಯ ಅಧಿಕಾರಿಗಳು ನನ್ನ ಗಂಡನಿಗೆ ವಾಚರ್ ಕೆಲಸ ಕೊಡಿಸಬೇಕು. ಇಲ್ಲವಾದರೆ ನನ್ನ ಕುಟುಂಬದ ಎಲ್ಲಾ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ನಮ್ಮ ಸಾವಿಗೆ ಕಾರಣ ಇಲಾಖೆಯ ನೌಕರರಾದ ವಲಯ ಅಧಿಕಾರಿ ಹಾಗೂ ಅರಣ್ಯ ವನಪಾಲಕರಾದ ವಿನೋದ್ ಕುಮಾರ್, ಮಾಲಯ್ಯ, ರಕ್ಷಕರಾದ ರಾಜೇಗೌಡ, ಅರ್ಜುನ ಇವರುಗಳೆಲ್ಲರೂ ನೇರವಾಗಿ ಕಾರಣರಾಗಿದ್ದು, ಇವರಿಗೆ ಶಿಕ್ಷೆ ಆಗಬೇಕು. ಈ ಅಧಿಕಾರಿಗಳು 2018-19 ರಲ್ಲಿ 6 ತಿಂಗಳು ಸಂಬಳ ನೀಡಿಲ್ಲ ಎಂದು ಕುಮಾರಿ ಅವರು ಆರೋಪಿಸಿದ್ದಾರೆ.
ಸರ್ಕಾರ ಕೊಡುವ ಸಂಬಳಕ್ಕೆ ದಾಖಲೆ ಇಲ್ಲದೆ ನಮ್ಮ ಮನೆಯವರಿಗಲ್ಲದೆ ಕೆಲಸ ನಿರ್ವಹಿಸುವ ಎಲ್ಲರಿಗೂ ಹೀಗೆ ಕಿರುಕುಳ ನೀಡುತ್ತಿದ್ದು, ಈ ಕಿರುಕುಳ ನಿಲ್ಲಬೇಕು. ನಮ್ಮ ಪ್ರತಿಭಟನೆಯಿಂದ ಇತರರಿಗೆ ಒಳ್ಳೆಯದಾಗಲಿ ಎಂದು ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.