'ನಾವು ಎಲ್ಲದಕ್ಕೂ ಮುಹೂರ್ತವಿಟ್ಟಿದ್ದು ಇಲ್ಲೇ, ಈಗ ಹೊಸದಾಗಿ ಇಟ್ಟಾಗಿದೆ'- ಎಚ್. ವಿಶ್ವನಾಥ್
ಮೈಸೂರು, ಜೂ. 02: ''ನಾವು ಎಲ್ಲ ವಿಚಾರದಲ್ಲೂ ಮುಹೂರ್ತವಿಟ್ಟಿದ್ದು ಶ್ರೀನಿವಾಸ್ ಪ್ರಸಾದ್ ಮನೆಯಲ್ಲೇ, ಈಗಲೂ ಮುಹೂರ್ತವಿಟ್ಟಾಗಿದೆ. ಆದರೆ ಸದ್ಯಕ್ಕೆ ಯಾವುದಕ್ಕೆ ಎಂದು ಹೇಳುವುದಿಲ್ಲ'' ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೊಸ ಬಾಂಬ್ ಹಾಕಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ವಿಶ್ವನಾಥ್, ''ಸಿದ್ದರಾಮಯ್ಯ ಸೋಲಿಗೆ ನಾವು ಇಲ್ಲಿಯೇ ಮುಹೂರ್ತ ಇಟ್ಟಿದ್ದು, ಸಮ್ಮಿಶ್ರ ಸರ್ಕಾರ ಪತನಕ್ಕೂ ಇಲ್ಲೇ ಮುಹೂರ್ತವಿಟ್ಟಿದ್ದು. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಕ್ಕೂ ಮುಹೂರ್ತ ಇಟ್ಟಿದ್ದು ಇಲ್ಲಿಯೇ'' ಎಂದು ವಿಶ್ವನಾಥ್ ಹೇಳಿದ್ದಾರೆ.
ವಿಧಾನ ಪರಿಷತ್: ಎಚ್. ವಿಶ್ವನಾಥ್ ಸೇರಿ 4 ಸದಸ್ಯರ ನಾಮನಿರ್ದೇಶನ
''ನಮ್ಮ ಹಲವು ಮುಹೂರ್ತಕ್ಕೆ ಶ್ರೀನಿವಾಸ್ ಪ್ರಸಾದ್ ಮನೆ ಸಾಕ್ಷಿಯಾಗಿದ್ದು, ಆ ನಂತರದ ಎಲ್ಲಾ ಬೆಳವಣಿಗೆಗಳಿಗೂ ಸಾಕ್ಷಿಯಾಗಿದೆ ಎಂದು ಹೇಳಿದ ವಿಶ್ವನಾಥ್, ನಾವು ಈಗಲೂ ಮನೆಯಲ್ಲೇ ಹೊಸದಾಗಿ ಮುಹೂರ್ತ ಇಟ್ಟಿದ್ದೇವೆ. ರಾಜಕೀಯ ಹಾಗೂ ಜಿಲ್ಲೆಯ ವಿದ್ಯಮಾನದ ಬಗ್ಗೆ ಪ್ರಸಾದ್ ಜೊತೆ ಮಾತನಾಡಿದ್ದೇವೆ. ಆದರೆ ಯಾವ ಮುಹೂರ್ತ ಎಂದು ಸದ್ಯಕ್ಕೆ ಹೇಳಲ್ಲ'' ಎನ್ನುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.
''ರಾಜ್ಯದ ರಾಜಕಾರಣದಲ್ಲಿ ಹಲವು ಗೊಂದಲಗಳಿವೆ. ಕೆಲವರು ದೆಹಲಿಗೆ ಹೋಗಿ ಬಂದಿದ್ದಾರೆ, ಇನ್ನೂ ಕೆಲವರು ಈ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಆದರೆ ಈ ಬಗ್ಗೆ ಯಡಿಯೂರಪ್ಪ ಏನೂ ಮಾತನಾಡುತ್ತಿಲ್ಲ'' ಎಂದು ಕೂಡಾ ಹೇಳಿದ್ದಾರೆ ವಿಶ್ವನಾಥ್.
ಇನ್ನು ''ಯಾರು ಏನೇ ಹೇಳಿಕೆ ನೀಡಿದರೂ, ಎಲ್ಲಿಗೆ ಹೋಗಿ ಬಂದರೂ ನಿರ್ಧಾರ ಕೈಗೊಳ್ಳುವುದು ಹೈಕಮಾಂಡ್ ಎಂದು ಹೇಳಿದ ವಿಶ್ವನಾಥ್ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ: ಎಚ್.ವಿಶ್ವನಾಥ್
''ಮುಖ್ಯಮಂತ್ರಿ ಯಡಿಯೂರಪ್ಪಗೆ ಆರೋಗ್ಯ ಸರಿಯಿಲ್ಲ. ಅವರ ಆರೋಗ್ಯ ಸರಿಯಾಗಬೇಕಿದೆ. ಅದರೊಂದಿಗೆ ರಾಜ್ಯದ ಆರೋಗ್ಯವೂ ಸರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಶೀಘ್ರವೇ ಒಂದು ನಿರ್ಧಾರ ಕೈಗೊಳ್ಳಬೇಕು'' ಎಂದು ಕೂಡಾ ವಿಶ್ವನಾಥ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)