"ಭೂ ಒತ್ತುವರಿ ತನಿಖೆಯ ವಿಶೇಷಾಧಿಕಾರಿಯಾಗಿ ರೋಹಿಣಿ ಸಿಂಧೂರಿಯನ್ನು ನೇಮಿಸಿ''
ಮೈಸೂರು, ಜೂನ್ 10: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸದ್ದು ಮಾಡುತ್ತಿರುವ ಭೂ ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ಸಮರ ಸಾರಿದ್ದಾರೆ. ಮತ್ತೊಂದೆಡೆ ಐಎಎಸ್ ಅಧಿಕಾರಿ ಪರ ಬ್ಯಾಟ್ ಬೀಸಿರುವ ಎಂಎಲ್ಸಿ ಎಚ್.ವಿಶ್ವನಾಥ್, ಮೈಸೂರು ಸುತ್ತಮುತ್ತ ನಡೆದಿರುವ ಭೂ ಹಗರಣ ವಿಚಾರದ ತನಿಖೆಗೆ ರೋಹಿಣಿ ಸಿಂಧೂರಿಯನ್ನು ವಿಶೇಷಾಧಿಕಾರಿಯಾಗಿ ನೇಮಿಸಲು ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ""ಡಿಸಿ ಚಪರಾಸಿ ಅಲ್ಲ, ಡಿಸಿ ಕುರಿತು ಯಾವ ರೀತಿ ಮಾತನಾಡುತ್ತಿದ್ದೇವೆ. ಸಿಎಂ ಹಾಗೂ ಪಿಎಂ ಕೊರೊನಾ ಓಡಿಸಿ ಅಂತಾ ಕರೆ ನೀಡಿದ್ದರು. ಆದರೆ ಇವರೆಲ್ಲಾ ಸೇರಿ ಐಎಎಸ್ ಅಧಿಕಾರಿಗಳನ್ನೇ ಓಡಿಸುತ್ತಿದ್ದಾರೆ. ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್ ಮಾಡಿದ್ದಾರೆ. ಹಾಸನದಿಂದ ಇಲ್ಲಿ ಬಂದು ಪ್ರೆಸ್ಮೀಟ್ ಮಾಡುತ್ತಾರೆ ಏನಾಗಿದೆ ಮೈಸೂರಿಗೆ?'' ಎಂದು ಪ್ರಶ್ನಿಸಿದ್ದಾರೆ.
ರೋಹಿಣಿ ಸಿಂಧೂರಿ, ಸಾ. ರಾ. ಮಹೇಶ್ ಜಟಾಪಟಿ; ಸ್ಪೋಟಕ ಆಡಿಯೋ
ರಾಜ ಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ
""ರಾಜ ಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಒಂದು ಗುಂಟೆ ಅಲ್ಲ ಸಾವಿರಾರು ಎಕರೆ ಹೋಗಿದೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೊರೊನಾ ಓಡಿಸುವ ಬದಲು ಐಎಎಸ್ ಅಧಿಕಾರಿಯನ್ನು ಓಡಿಸಿದರು. ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಒಳ್ಳೆಯ ಅಧಿಕಾರಿಗಳು. ಇಬ್ಬರು ಐಎಎಸ್ ಹೊರ ಹಾಕಿದ್ದು ರಾಜಕಾರಣಿಗಳ ಸ್ವಾರ್ಥ'' ಎಂದು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.
ಚಾಮುಂಡಿ ಬೆಟ್ಟದ ಸುತ್ತಮುತ್ತ ಸಹ ಒತ್ತುವರಿ
""ಮೈಸೂರು ಸುತ್ತಮುತ್ತ ಭೂ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಸಿಎಸ್ ಪಿ.ರವಿಕುಮಾರ್ ಭೇಟಿ ಮಾಡುತ್ತೇನೆ. ಈ ವೇಳೆ ರೋಹಿಣಿ ಸಿಂಧೂರಿಯನ್ನು ವಿಶೇಷಧಿಕಾರಿಯಾಗಿ ನೇಮಿಸಲು ಮನವಿ ಮಾಡುತ್ತೇನೆ. ಅಲ್ಲದೇ ಚಾಮುಂಡಿ ಬೆಟ್ಟದ ಸುತ್ತಮುತ್ತ ಸಹ ಒತ್ತುವರಿಯಾಗಿದೆ. ಹೀಗಾಗಿ 6 ತಿಂಗಳ ಕಾಲ ಅವರನ್ನು ನೇಮಿಸಲು ಒತ್ತಾಯ ಮಾಡುತ್ತೇನೆ'' ಎಂದರು.
ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದಾರೆ
ಶನಿವಾರ ಅಥವಾ ಸೋಮವಾರ ಭೇಟಿ ಮಾಡಿ ಮನವಿ ಮಾಡುತ್ತೇನೆ, ಈಗ ರಿಯಲ್ ಎಸ್ಟೇಟ್ ಇಂಡಸ್ಟ್ರಿಯಾಗಿದೆ. ಸಾ.ರಾ ಮಹೇಶ್ ಯಾವ ಇಂಡಸ್ಟ್ರಿಲಿಯಸ್ಟ್. ಮುಡಾ ಅಧ್ಯಕ್ಷ ಯಾವ ಇಂಡಸ್ಟ್ರಿ ಮಾಡಿದ್ದಾರೆ. ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಶಿಲ್ಪಾನಾಗ್ ಇಲ್ಲಿ ಬಲಿಪಶುವಾಗಿದ್ದಾರೆ. ತಮ್ಮ ಉದ್ದೇಶದ ಬಗ್ಗೆ ಶಿಲ್ಪಾನಾಗ್ ಹೇಳಿದ್ದಾರೆ. ನಿಮ್ಮ ಕಮಿಷನ್ ಏನು? ರೋಹಿಣಿ ಸಿಂಧೂರಿಯವರ ವರ್ಗಾವಣೆ ನಿಮ್ಮ ಕಮಿಷನ್? ಎಂದು ಎಮೆಲ್ಸಿ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಬಫರ್ ಜೋನ್ನಲ್ಲಿ ಅಕ್ರಮ
ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೂ ಅಕ್ರಮದ ವಿಚಾರವನ್ನು ತುರ್ತಾಗಿ ಜಾರಿಗೊಳಿಸುವಂತೆ ನಾನು ಮನವಿ ಮಾಡುತ್ತಿದ್ದು, ನಾಲ್ಕು ಆದೇಶಗಳನ್ನು ಹಿಂದಿನ ಡಿಸಿ ಆದೇಶ ಮಾಡಿದ್ದಾರೆ. ಅದರ ಪ್ರತಿಗಳನ್ನು ಮನವಿ ಪತ್ರದ ಜೊತೆ ಸಲ್ಲಿಸಿದ ಎಚ್.ವಿಶ್ವನಾಥ್, ನಾಲ್ಕು ಪ್ರಕರಣಗಳು ಮಾತ್ರವಲ್ಲ ಇಂತಹ ಹಲವು ಪ್ರಕರಣಗಳಿವೆ, ಸುಪ್ರೀಂ ಕೋರ್ಟ್ ಆದೇಶ ಇದೆ. ಬಫರ್ ಜೋನ್ ಬಗ್ಗೆ ಇಲ್ಲಿ ಯಾವುದೇ ಮನೆ ಕೈಗಾರಿಕೆ ಬರುವಂತಿಲ್ಲ. ಇಲ್ಲಿ ಬಫರ್ ಜೋನ್ನಲ್ಲಿ ಅಕ್ರಮ ನಡೆಸಲಾಗುತ್ತಿದೆ. ಇದರ ಬಗ್ಗೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಎಚ್.ವಿಶ್ವನಾಥ್ ಮನವಿ ಮಾಡಿದರು.