ಬಜೆಟ್ ಬಗ್ಗೆ ಸಿಎಂಗೆ ಮಾಜಿ ಸಚಿವ ವಿಶ್ವನಾಥ್ ಕೊಟ್ಟ ಸಲಹೆಯಿದು
ಮೈಸೂರು, ಮಾರ್ಚ್ 5: ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಬೇಕಾಬಿಟ್ಟಿ ಯೋಜನೆಗಳನ್ನು ಘೋಷಿಸದೆ, ಉಳಿತಾಯ ಬಜೆಟ್ ಮಂಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಜೆಟ್ ಮಂಡನೆ ಕೇವಲ ಶಾಸ್ತ್ರವಾಗಬಾರದು. ಬಜೆಟ್ ಎಂಬುದು ಸರ್ಕಾರದ ಜನಪ್ರಿಯತೆಯನ್ನು ಹೆಚ್ಚಿಸುವುದಲ್ಲ. ಬದಲಿಗೆ ರಾಜ್ಯದ ಜನರ ಅನುಕೂಲಕ್ಕೆ ಇರುವುದು. ಈ ನಿಟ್ಟಿನಲ್ಲಿ ಬಜೆಟ್ ನಲ್ಲಿ ಬೇಕಾಬಿಟ್ಟಿ ಯೋಜನೆಗಳ ಘೋಷಣೆ ಮಾಡದೆ, ರಾಜ್ಯಕ್ಕೆ ಅನುಕೂಲವಾಗುವಂತಹ ಉಳಿತಾಯದ ಬಜೆಟ್ ಮಾಡಿ" ಎಂದು ಹೇಳಿದ್ದಾರೆ.
Karnataka Budget 2020 Live Updates: ವಿಧಾನಸೌಧದಲ್ಲಿ ಸಿಎಂ ಬಿಎಸ್ ವೈ ಬಜೆಟ್ ಮಂಡನೆ ಆರಂಭ
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
"ಮಾತೆತ್ತಿದರೆ 14 ಬಾರಿ ಬಜೆಟ್ ಮಂಡನೆ ಮಾಡಿರುವುದಾಗಿ ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಜೆಟ್ ನಲ್ಲಿ ಆರ್ಥಿಕ ಶಿಸ್ತು, ಶಿಷ್ಟಾಚಾರವನ್ನು ತರಲು ಸಾಧ್ಯವಾಗಲಿಲ್ಲ. ರಾಜ್ಯಕ್ಕೆ ಮೂರು ಲಕ್ಷ ಕೋಟಿ ಸಾಲದ ಹೊರೆ ಇದ್ದು, ಅದರಲ್ಲಿ ಸಿದ್ದರಾಮಯ್ಯ ಅವರದ್ದೇ ಒಂದೂವರೆ ಲಕ್ಷ ಕೋಟಿ ಸಾಲದ ಪಾಲಿದೆ. ಆ ಮೂಲಕ ಸಿದ್ದರಾಮಯ್ಯ ಪರಮಾಧಿಕಾರದ ಹೆಸರಿನಲ್ಲಿ ಜನರನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದಾರೆ" ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಎಲ್ಲಾ ಮುಖ್ಯಮಂತ್ರಿಗಳು 10 ವರ್ಷದ ಬಜೆಟ್ ಮಂಡಿಸಿದ್ದಾರೆ. ಆದರೆ ನೀವು ಕೇವಲ ಒಂದು ವರ್ಷದ ಬಜೆಟ್ ಮಾಡಿ ಸಾಕು" ಎಂದರು.
ಯತ್ನಾಳೂ, ದೊರೆಸ್ವಾಮಿಯೂ ಸರಿಯಿಲ್ಲ
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, "ಈ ವಿಷಯದಲ್ಲಿ ಯತ್ನಾಳ್ ಕೂಡ ಸರಿಯಿಲ್ಲ, ದೊರೆಸ್ವಾಮಿಯೂ ಸರಿಯಿಲ್ಲ. ದೊರೆಸ್ವಾಮಿ ಅವರು ಒಂದು ಪಕ್ಷದ ಪರವಾಗಿ ಮಾತನಾಡಬಾರದು, ಅವರ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ. ಹೀಗಾಗಿ ಅವರು ಎಲ್ಲದಕ್ಕೂ ಬಾಯಿ, ತಲೆ ಹಾಕುತ್ತಾ, ಪಕ್ಷದ ವಕ್ತಾರರಂತೆ ಮಾತನಾಡಬಾರದು" ಎಂದು ಹೇಳಿದರು.
"ಅಭಿವೃದ್ಧಿ ಕುರಿತು ಚರ್ಚಿಸಲಿ"
"ವಿಧಾನಸಭೆಯಲ್ಲಿ ವಿಪಕ್ಷಗಳ ಗದ್ದಲ ವಿಚಾರದ ಕುರಿತು ಮಾತನಾಡಿದ ಅವರು, "ಮಾಜಿ ಸಿಎಂ ಸಿದ್ದರಾಮಯ್ಯ, ಮಾತೆತ್ತಿದ್ದರೆ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುತ್ತಾರೆ. ಆದರೆ ಎರಡು ದಿನಗಳು ವಿಧಾನಸಭೆ ನಡೆಯದಂತೆ ತಡೆಯಲಾಗಿದೆ. ಏನಿದರ ಅರ್ಥ?" ಎಂದು ಪ್ರಶ್ನಿಸಿದ್ದಾರೆ.
"ಜನರ ಹಿತದೃಷ್ಟಿ ಗಮನದಲ್ಲಿರಲಿ"
"ಜನರ ಸಮಸ್ಯೆಗಳನ್ನು ಚರ್ಚಿಸಬೇಕಾದ ಕಲಾಪವನ್ನು ನಡೆಯದಂತೆ ತಡೆಯಲಾಗಿದೆ. ಏಕೆ ಈ ರೀತಿ ಮಾಡುವುದು? ಬರೀ ರಾಜಕೀಯ ಮಾಡುವುದೇ?" ಎಂದು ಪ್ರಶ್ನಿಸಿದ ಅವರು, "ಜಗಳ ಮಾಡುವುದಕ್ಕೆ, ಆರೋಪ ಪ್ರತ್ಯಾರೋಪಕ್ಕಾಗಿ ವಿಧಾನಸಭೆ ವೇದಿಕೆಯಲ್ಲ. ಆದ್ದರಿಂದ ಅನಗತ್ಯ ವಿಷಯಗಳ ಬಗ್ಗೆ ಚರ್ಚಿಸುವುದಕ್ಕಿಂತ ಜನರ ಹಿತದೃಷ್ಟಿಯಿಂದ ರಾಜ್ಯದ ಅಭಿವೃದ್ಧಿಯ ವಿಚಾರ ಚರ್ಚೆ ಮಾಡಲಿ" ಎಂದರು.