ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದ ವಿಶ್ವನಾಥ್
ಮೈಸೂರು, ಮಾರ್ಚ್ 10:- ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು, ರಮೇಶ್ ಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಮೇಶ್ ಕುಮಾರ್ಗೆ ತಲೆ ಕೆಟ್ಟಿದೆ ಅನ್ನಿಸುತ್ತೆ. ಸರ್ಕಾರ ಸುಮ್ಮನೆ ಕೂರದೇ ರಮೇಶ್ ಕುಮಾರ್ ಮೇಲೆ ಕೇಸು ದಾಖಲಿಸಬೇಕು. ನಾನೇ ಬಸವಣ್ಣ, ನಾನೇ ಅಂಬೇಡ್ಕರ್, ನಾನೇ ಸಂವಿಧಾನ ಅಂತೀರಾ ಎಂದು ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಕೊಟ್ಟ ಚಾಮುಂಡೇಶ್ವರಿ ಶಾಸಕ ಜಿ. ಟಿ. ದೇವೇಗೌಡ!
ಒಬ್ಬ ಪ್ರಧಾನಿ ಬಗ್ಗೆ ಸಂವಿಧಾನದ ವಿರೋಧಿಯಾಗಿ ಮಾತನಾಡುತ್ತೀರಾ. ಸ್ಪೀಕರ್ ಆಗಿದ್ದ ವ್ಯಕ್ತಿಯೊಬ್ಬರು ಈ ರೀತಿ ಮಾತನಾಡಲು ಸಾಧ್ಯವೇ? ಸತ್ಯದ ಸಾಕ್ಷಾತ್ಕಾರವನ್ನು ಮಾತಿನ ಚಮತ್ಕಾರದಿಂದ ಮುಚ್ಚುವ ಪ್ರಯತ್ನ ಮಾಡ್ತಿದ್ದೀರಾ. ರಮೇಶ್ ಕುಮಾರ್ ಅವರೇ ಇದೇನಾ ನೀವು ಸಂವಿಧಾನ ರಕ್ಷಣೆ ಮಾಡೋದು ಎಂದು ಹರಿಹಾಯ್ದರು.
ಸಿಎಎ ಬಗ್ಗೆ ಮುಸ್ಲಿಂ ಕೇರಿಯಲ್ಲಿ ಏಕೆ ಪ್ರಚಾರ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ ಸಿ ಬಗ್ಗೆ ಬರೀ ಮುಸ್ಲಿಂ ಕೇರಿಯಲ್ಲಿ ಯಾಕೆ ಮಾತನಾಡುತ್ತೀರಾ? ಬನ್ನಿ ಹಿಂದೂಗಳ ಕೇರಿಯಲ್ಲಿ ಮಾತನಾಡಿ. ಬನ್ನಿ ರಮೇಶ್ ಕುಮಾರ್, ಬನ್ನಿ ಸಿದ್ದರಾಮಯ್ಯ ಹಿಂದೂ ಕೇರಿಯಲ್ಲಿ ಭಾಷಣ ಮಾಡಿ ಎಂದು ಸಿದ್ದರಾಮಯ್ಯ, ರಮೇಶ್ಕುಮಾರ್ಗೆ ಸವಾಲು ಹಾಕಿದರು.
ಮುಸ್ಲಿಮರನ್ನು ಬಲಿಪಶು ಮಾಡೋದು ಕಾಂಗ್ರೆಸ್ನ ಉದ್ದೇಶ. ಸಿಎಎ ದೇಶದ ವಿರೋಧಿ ಆಗಿದ್ದರೆ ಎಲ್ಲ ಕಡೆ ವಿರೋಧಿಸಬೇಕಿತ್ತು, ಆದರೆ ಕಾಂಗ್ರೆಸ್ ನವರು ಬರೀ ಮುಸ್ಲಿಂ ಕೇರಿಯಲ್ಲಿ ಮಾತ್ರ ಹೋರಾಟ ಮಾಡುತ್ತಿದ್ದಾರೆ. ಆ ಮೂಲಕ ಮುಸ್ಲಿಂಮರನ್ನು ಬಲಿಪಶು ಮಾಡ್ತಿದ್ದಾರೆ ಎಂದರು.
ಮುಸ್ಲಿಂ ಆಗಿ ಹುಟ್ಟಬೇಕು ಅಂತ ದೇವೇಗೌಡರು ಭಾಷಣ ಮಾಡುತ್ತಾರೆ
ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಅಂತ ದೇವೇಗೌಡರು ಭಾಷಣ ಮಾಡುತ್ತಾರೆ, ಆದರೆ ಸಮ್ಮಿಶ್ರ ಸರ್ಕಾರ ಇದ್ದಾಗ ಒಬ್ಬ ಮುಸ್ಲಿಂ ಸಮುದಾಯದ ಶಾಸಕರಿಗೆ ಮಂತ್ರಿ ಮಾಡಿದ್ದಾರಾ? ಯಾಕೇ ಮಾಡಲಿಲ್ಲ.
ಜೆಡಿಎಸ್ ನವರು ಈಗ ಸಿಎಎ ಮತ್ತು ಎನ್ಆರ್ಸಿ ಬಗ್ಗೆ ಮಾತನಾಡ್ತಾರೆ. ಆದರೆ ಅವರ ಕೈಗೆ ಅಧಿಕಾರ ಸಿಕ್ಕಾಗ ಒಬ್ಬ ಮುಸ್ಲಿಂಮರಿಗೂ ಅಧಿಕಾರ ಕೊಡಲಿಲ್ಲ ಎಂದು ಹರಿಹಾಯ್ದರು.
ಬಿಎಸ್ವೈ ಸಂಪುಟದ ಸಚಿವರೊಬ್ಬರ ವಿರುದ್ದ 'ನಾಲಗೆ, ತೆವಲು' ಪದಬಳಸಿದ ಕುಮಾರಸ್ವಾಮಿ
ಮಕ್ಕಳ ಮದುವೆಯನ್ನು ಸರಳವಾಗಿ ಮಾಡಬೇಕಿತ್ತು
ಇದೇ ಸಂದರ್ಭದಲ್ಲಿ ಅದ್ದೂರಿ ಮದುವೆ ಬಗ್ಗೆ ಮಾತನಾಡಿದ ಎಚ್.ವಿಶ್ವನಾಥ್, ಸಚಿವ ಶ್ರೀರಾಮುಲು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸಾಮಾನ್ಯರಲ್ಲ. ಅವರು ಜವಾಬ್ದಾರಿಯುತ ಜನಪ್ರತಿನಿಧಿಗಳು. ಮಕ್ಕಳ ಮದುವೆಯನ್ನು ಸರಳವಾಗಿ ಮಾಡಬೇಕಿತ್ತು ಎಂದರು.
ಶ್ರೀರಾಮುಲು ಅವರು ಬಳ್ಳಾರಿಯಿಂದ ಬೆಂಗಳೂರಿನವರೆಗೆ, ಕುಮಾರಸ್ವಾಮಿ ಅವರು ರಾಮನಗರದಿಂದ ಚನ್ನಪಟ್ಟಣದವರೆಗೆ ಮದುವೆ ಮಾಡುವ ಅಗತ್ಯವಿರಲಿಲ್ಲ. ನೂರಾರು ಸಾಮೂಹಿಕ ವಿವಾಹ ಮಾಡಿದ್ದ ಶ್ರೀರಾಮುಲು, ಮಗಳ ಮದುವೆಯನ್ನು ಅದೇ ರೀತಿ ಮಾಡಬೇಕಿತ್ತು ಎಂದು ಸಲಹೆ ನೀಡಿದರು.
ಜೆಡಿಎಸ್ ನವರಿಗೆ ಮಾತ್ರ ಮದುವೆಗೆ ಆಹ್ವಾನವೇ?
ಕುಮಾರಸ್ವಾಮಿ ಈ ರಾಜ್ಯಕ್ಕೆ ಸಿಎಂ ಆಗಿದ್ದವರು ಅವರು ಎಲ್ಲರಿಗೂ ಮಾದರಿಯಾಗಬೇಕಿತ್ತು. ಅದು ಬಿಟ್ಟು ಮದುವೆ ಮೂಲಕ ಪಕ್ಷ ಸಂಘಟನೆ ಅಂತ ಹೇಳುತ್ತಾರೆ. ಹಾಗಾದರೆ ಜೆಡಿಎಸ್ ನವರು ಮಾತ್ರ ಮದುವೆಗೆ ಹೋಗಬೇಕಾ? ಸರ್ವರಿಗೂ ಸ್ವಾಗತ ಅಂತ ಹಾಕಿದರೆ ನಮ್ಮಂತವರು ಹೋಗಬಾರದಾ? ಎಂದು ಪ್ರಶ್ನಿಸಿದರು.
ಬಡವನೊಬ್ಬ ಆಡಂಬರದ ಮದುವೆ ಮಾಡಿದರೆ ಅದು ಇನ್ನೊಬ್ಬರಿಗೆ ಮಾದರಿ, ಅದೇ ರೀತಿ ಶ್ರೀಮಂತರು ಸರಳ ಮದುವೆ ಮಾಡಿದರೆ ಅವರು ಇನ್ನೊಬ್ಬರಿಗೆ ಮಾದರಿ ಆಗುತ್ತಾರೆ. ಮಕ್ಕಳ ಮದುವೆಗಳನ್ನು ಸರಳವಾಗಿ ಮಾಡಿರುವ ಸಾಕಷ್ಟು ಜನರಿದ್ದಾರೆ. ಇವರು ಹಾಗೆಯೇ ಮಾಡಬಹುದಿತ್ತು ಎಂದರು.