ಮೈಮುಲ್ ನಲ್ಲಿ ಅವ್ಯವಹಾರ ಆರೋಪ; ಸಾರಾ ಮಹೇಶ್ ಬೆಂಬಲಿಸಿದ ವಿಶ್ವನಾಥ್
ಮೈಸೂರು, ಮೇ 13: ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಸಾ.ರಾ. ಮಹೇಶ್ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಆಗ್ರಹಿಸಿದ್ದಾರೆ.
ಮೈಸೂರು ಮೈಮುಲ್ ನಲ್ಲಿ ಅಕ್ರಮ ನೇಮಕಾತಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕ ಸಾ.ರಾ.ಮಹೇಶ್ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎನ್ನುವ ಮೂಲಕ ಮೈಮುಲ್ ವಿಚಾರವಾಗಿ ಶಾಸಕ ಸಾ.ರಾ.ಮಹೇಶ್ ಬೆಂಬಲಕ್ಕೆ ನಿಂತರು. "ಮೈಮುಲ್ ನಲ್ಲಿ ಅಕ್ರಮ ನೇಮಕಾತಿ ಆರೋಪ ಇದೆ. ಈ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಿ. ಅಲ್ಲಿ ಏನಾಗಿದೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ. ಶಾಸಕ ಸಾ.ರಾ.ಮಹೇಶ್ ಆರೋಪವನ್ನ ಹಾಗೆಯೇ ಬಿಡಬಾರದು ಎಂದು ತಿಳಿಸಿದ್ದಾರೆ.
ಮೈಮುಲ್ ನೌಕರರ ನೇಮಕಾತಿಯಲ್ಲಿ ಭಾರೀ ಅವ್ಯವಹಾರ; ಸಾ.ರಾ. ಮಹೇಶ್ ಆರೋಪ
ನಿನ್ನೆಯಷ್ಟೆ ಶಾಸಕ ಸಾರಾ ಮಹೇಶ್, "ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಭೆಯಲ್ಲಿ ಅಕ್ರಮವಾಗಿ ಅನುಮತಿ ನೀಡಿ ಹೆಚ್ಚುವರಿ ಹುದ್ದೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಸದ್ಯ ನಡೆಯುತ್ತಿರುವ ಎಲ್ಲಾ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಪ್ರಸ್ತುತ ಒಟ್ಟು 168 ಹುದ್ದೆಗಳ ನೇಮಕಾತಿಗೆ ಮಾತ್ರ ಆದೇಶ ಇದ್ದರೂ ಹೆಚ್ಚುವರಿಯಾಗಿ 25 ಹುದ್ದೆಗಳನ್ನು ಇವರು ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. 18 ಸಾವಿರ ಜನ ಪರೀಕ್ಷೆ ಎದುರಿಸಿದ್ದರು.
ಈ ಪೈಕಿ 168 ಹಾಗೂ 25 ಮಂದಿ ಮಾತ್ರ ಪಾಸಾಗಿದ್ದಾರೆ. ಈ ಪರೀಕ್ಷೆ ನಡೆಸಿದ್ದ ಏಜೆನ್ಸಿಯ ಮೇಲೂ ಆರೋಪ ಇದೆ. ಇವೆಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸದ್ಯ ನಡೆಯುತ್ತಿರುವ ಎಲ್ಲಾ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು" ಎಂದು ಒತ್ತಾಯಿಸಿದ್ದರು. ಇದೀಗ ಎಚ್ ವಿಶ್ವನಾಥ್ ಸಾರಾ ಮಹೇಶ್ ಬೆಂಬಲಕ್ಕೆ ನಿಂತು, ಗಂಭೀರವಾಗಿ ತನಿಖೆ ನಡೆಯಬೇಕು ಎಂದಿದ್ದಾರೆ.