ವಿಶ್ವನಾಥ್ -ಮಹೇಶ್ ಆಣೆ ಹೈಡ್ರಾಮ; ಚಾಮುಂಡಿ ಕ್ಷೇತ್ರ ಬಳಸಿಕೊಂಡಿದ್ದಕ್ಕೆ ವಿರೋಧ
ಮೈಸೂರು, ಅಕ್ಟೋಬರ್ 17: ಮಾಜಿ ಸಚಿವ ಸಾರಾ ಮಹೇಶ್ ಹಾಗೂ ಅನರ್ಹ ಶಾಸಕ ವಿಶ್ವನಾಥ್ ಅವರ ನಡುವಿನ ಕಿತ್ತಾಟ ಚಾಮುಂಡಿ ಅಂಗಳದವರೆಗೂ ಬಂದು ಮುಟ್ಟಿದೆ. ಆಣೆ ಎಂಬ ಹೈಡ್ರಾಮಾ ಮುಗಿದಿದ್ದು, ಇಬ್ಬರೂ ಅಲ್ಲಿಂದ ಮರಳಿದ್ದಾರೆ. ಆದರೆ ಈ ನಡೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಪವಿತ್ರ ಕ್ಷೇತ್ರವನ್ನು ಈ ರೀತಿ ಬಳಸಿಕೊಂಡಿದ್ದಕ್ಕೆ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಇವರ ರಾಜಕಾರಣಕ್ಕೆ ಈ ಪವಿತ್ರ ಕ್ಷೇತ್ರವನ್ನು ಬಳಸಿದ್ದು ತಪ್ಪು" ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕಿಡಿಕಾರಿದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ನಾಡಿನ ಅಧಿದೇವತೆ ತಾಯಿ ಚಾಮುಂಡಿಯ ಪುಣ್ಯಕ್ಷೇತ್ರವನ್ನು ನಿಮ್ಮ ಆಣೆ ಪ್ರಮಾಣದ ರಾಜಕೀಯ ದೊಂಬರಾಟದ ಅಖಾಡ ಮಾಡಿಕೊಂಡು ಅಪವಿತ್ರ ಗೊಳಿಸಬೇಡಿ ಎಂದು ಹೇಳಿದ್ದಾರೆ.
ಚಾಮುಂಡಿ ಬೆಟ್ಟ ತಲುಪಿದ ಸಾ.ರಾ.ಮಹೇಶ್-ಎಚ್.ವಿಶ್ವನಾಥ್
ಆಣೆ ಪ್ರಮಾಣ ಮಾಡಲು ಗುರುವಾರ ಚಾಮುಂಡಿ ಬೆಟ್ಟಕ್ಕೆ ಬರಬೇಕೆಂದು ಅನರ್ಹ ಶಾಸಕ ವಿಶ್ವನಾಥ್ ಸಾರಾ ಮಹೇಶ್ಗೆ ಸವಾಲು ಹಾಕಿದ್ದರು. ಆದರೆ, ಇಂದು ಚಾಮುಂಡಿ ಬೆಟ್ಟಕ್ಕೆ ಬಂದ ಬಳಿಕ ವಿಶ್ವನಾಥ್, "ನಾನು ಇಲ್ಲಿಗೆ ಆಣೆ ಪ್ರಮಾಣ ಮಾಡಲು ಬಂದಿಲ್ಲ. ನನಗೆ ಹಣ ಕೊಟ್ಟವರನ್ನು ನೋಡಲು ಹಾಗೂ ಆರೋಪ ಮಾಡಿದವರಿಗಾಗಿ ಕಾಯುತ್ತಿದ್ದೇನೆ" ಎಂದರು. " ಸಾರಾ ಮಹೇಶ್ ವಿಧಾನಸಭೆಗೆ ರಾಜೀನಾಮೆ ಪತ್ರ ಸಲ್ಲಿಸಿರುವುದೂ ಸುಳ್ಳೇ, ನಾನು ಕಾನೂನು ಹೋರಾಟ ಮಾಡುತ್ತೇನೆ. ಈಗಾಗಲೇ ಅವರು ಸದನದಲ್ಲಿ ಆರೋಪ ಮಾಡಿರುವ ಸಿಡಿ ತೆಗೆದುಕೊಂಡಿದ್ದೇನೆ, ನಾನು ಹೈಕೋರ್ಟ್ ಗೆ ಹೋಗುತ್ತೇನೆ" ಎಂದರು.
ಇನ್ನೊಂದೆಡೆ, ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದ ಸಾರಾ ಮಹೇಶ್ ಕಣ್ಣೀರಿಟ್ಟರು. 9.15ಕ್ಕೆ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿದ ವಿಶ್ವನಾಥ್ ಪೂಜೆ ಸಲ್ಲಿಸಿ ಹೊರಗೆ ಕಾದು ಕುಳಿತಿದ್ದರು. ಸ್ವಲ್ಪ ಸಮಯದ ನಂತರ ಮಹೇಶ್ ಅವರೂ ತಮ್ಮ ಬೆಂಬಲಿಗರೊಮದಿಗೆ ಆಗಮಿಸಿ ದೇವಾಲಯದ ಒಳಗೇ ಇದ್ದರು. ಪ್ರಮಾಣ ಮಾಡಲು ವಿಶ್ವನಾಥ್ ಅವರು ಒಳಗೆ ಬರಲಿ ಎಂದು ಅವರು ಕಾಯುತ್ತಿದ್ದರು. ಆದರೆ ವಿಶ್ವನಾಥ್ ಅವರು ಪತ್ರಕರ್ತರೊಂದಿಗೆ ಮಾತನಾಡಿ ವಾಪಸ್ ತೆರಳಿದರು. ನಂತರ ಮಹೇಶ್ ಅವರೂ ವಾಪಸ್ ತೆರಳಿದರು.
"ವಿಶ್ವನಾಥ್ ಆರೋಪಕ್ಕೆ ಬೇಸತ್ತು ಸೆಪ್ಟೆಂಬರ್ 18ಕ್ಕೇ ರಾಜೀನಾಮೆ ನೀಡಿದ್ದೆ"
ಜೊತೆಗೆ ಇಂದು ಚಾಮುಂಡೇಶ್ವರಿ ದೇವಾಲಯದ ಆವರಣ ಅನರ್ಹ ಶಾಸಕ ವಿಶ್ವನಾಥ್ ಹಾಗೂ ಶಾಸಕ ಮಹೇಶ್ ಬೆಂಬಲಿಗರ ನಡುವೆ ಪರಸ್ಪರ ಅವಾಚ್ಯ ಪದಗಳ ನಿಂದನೆಗೆ ಸಾಕ್ಷಿಯಾಯಿತು. ಆದರೆ ಸ್ಥಳದಲ್ಲಿ ಪೋಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.