"ಯಾವ ಗ್ರಾಮ ಪಂಚಾಯತಿ ಸದಸ್ಯನೂ ಈ ಥರ ಬೀದೀಲಿ ನಿಂತು ಲೆಕ್ಕ ಕೇಳೋಲ್ಲ"
ಮೈಸೂರು, ಜುಲೈ 23: "ಬೀದೀಲಿ ನಿಂತು ಲೆಕ್ಕ ಕೇಳೋದಲ್ಲ. ಸಿದ್ದರಾಮಯ್ಯ ನೀವು ಅಸೆಂಬ್ಲಿಯಲ್ಲಿ ನಿಂತು ಲೆಕ್ಕ ಕೇಳಿ. ಅದಕ್ಕೆ ಲೆಕ್ಕಪತ್ರ ಸಮಿತಿ ಇದೆ. ಅಸೆಂಬ್ಲಿ ಶುರುವಾಗಲಿ ಅಲ್ಲಿ ಬಂದು ಕೇಳಿ. ಯಾವ ಗ್ರಾಮ ಪಂಚಾಯತಿ ಸದಸ್ಯನೂ ಈ ಥರ ಬೀದೀಲಿ ನಿಂತು ಲೆಕ್ಕ ಕೇಳೋಲ್ಲ" ಎಂದು ತಿರುಗೇಟು ನೀಡಿದ್ದಾರೆ ನೂತನ ಎಂಎಲ್ಸಿ ಎಚ್. ವಿಶ್ವನಾಥ್.
ಇಂದು ಮೈಸೂರಿನಲ್ಲಿ, ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಸಿದ್ದರಾಮಯ್ಯ ಅವರ ಕುರಿತು ಮಾತನಾಡಿ, "ಸಿದ್ದರಾಮಯ್ಯ ಬರೀ ರಾಜಕಾರಣ ಮಾಡ್ತಾರೆ ಅಷ್ಟೇ. ಸಿಎಂ ಆಗಿದ್ದವರು, ಆಯವ್ಯಯದ ಬಗ್ಗೆ ಗೊತ್ತಿರುವವರೇ ಈ ಥರ ಮಾತನಾಡಬಹುದಾ?. ಲೆಕ್ಕ ಎಲ್ಲೂ ಹೋಗೋಲ್ಲ ನಿಧಾನವಾಗಿ ಕೇಳಿ" ಎಂದಿದ್ದಾರೆ.
ವಿಧಾನ ಪರಿಷತ್: ಎಚ್. ವಿಶ್ವನಾಥ್ ಸೇರಿ 4 ಸದಸ್ಯರ ನಾಮನಿರ್ದೇಶನ
"ರಾಜಕಾರಣಕ್ಕೆ ಅಂತ್ಯವೇ ಇಲ್ಲ"
ಎಚ್.ವಿಶ್ವನಾಥ್ ರಾಜಕೀಯ ಅಂತ್ಯ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕಾರಣಕ್ಕೆ ಅಂತ್ಯವೇ ಇಲ್ಲ. ಇದು ನಮ್ಮಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಎಲ್ಲೂ ರಾಜಕೀಯಕ್ಕೆ ಅಂತ್ಯ ಇಲ್ಲ. ಉಸಿರು ಇರುವ ತನಕ ರಾಜಕಾರಣ ಮಾಡಬಹುದು. ಇದು ವಯಸ್ಸಿನ ಲೆಕ್ಕ ಅಲ್ಲ. ನನ್ನ ಅನುಭವಕ್ಕೆ, ನನ್ನ ಸಾಹಿತ್ಯಕ್ಕೆ ಸಿಕ್ಕ ಗೌರವ. ಹಾಗಾಗಿ ಇದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಯಾರು ಸಹ ಯಾರ ರಾಜಕಾರಣವನ್ನು ಮುಗಿಸುವುದಿಲ್ಲ. ಅದನ್ನು ನಿರ್ಧರಿಸುವುದು ಜನಶಕ್ತಿ ಮಾತ್ರ. ಸದ್ಯಕ್ಕೆ ಪರಿಷತ್ ಸದಸ್ಯನಾಗಿದ್ದೇನೆ. ಮಂತ್ರಿ ಆಗೋ ವಿಚಾರ ನೋಡೋಣ. ಹೀಗೆ ಆಗಬೇಕು ಇಲ್ಲ ಅಂತೇನೂ ಇಲ್ಲ. ನನ್ನ ಸಾಹಿತ್ಯ ಕೃಷಿ ಮುಂದುವರೆಯುತ್ತದೆ ಎಂದು ಹೇಳಿದರು.
"ಕುಮಾರಸ್ವಾಮಿ ಅರ್ಧ ಸತ್ಯ ಮಾತ್ರ ಹೇಳಿದ್ದಾರೆ"
ನನ್ನ ಜೊತೆ ಇದ್ದವರಿಂದಲೇ ಮೈತ್ರಿ ಸರ್ಕಾರ ಬಿದ್ದಿದೆ ಎಂಬ ಎಚ್ಡಿಕೆ ಹೇಳಿಕೆ ವಿಚಾರವಾಗಿಯೂ ಮಾತನಾಡಿ, "ಕುಮಾರಸ್ವಾಮಿ ಅರ್ಧ ಸತ್ಯ ಮಾತ್ರ ಹೇಳಿದ್ದಾರೆ. ಇನ್ನು ಅರ್ಧ ಸತ್ಯವನ್ನು ಅವರೇ ಹೇಳಬೇಕು. ಆಗ ಎಲ್ಲರಿಗೂ ಗೊತ್ತಾಗಲಿದೆ" ಎಂದು ತಿಳಿಸಿದ್ದಾರೆ.
"ರಾಜಸ್ಥಾನದ ಇಂದಿನ ರಾಜಕೀಯ ಬೆಳವಣಿಗೆಗೆ ನಾವೇ ಮೂಲ ಕಾರಣ''
"ಜವಾಬ್ದಾರಿ ನಿರ್ವಹಿಸಲು ಸಿಕ್ಕ ಅವಕಾಶ"
ವಿಧಾನ ಪರಿಷತ್ ಸದಸ್ಯನಾಗಿ ನಿನ್ನೆ ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನಗೊಂಡಿರುವುದಕ್ಕೆ ಮೈಸೂರಿನಲ್ಲಿ ಇಂದು ಪ್ರತಿಕ್ರಿಯಿಸಿದ ವಿಶ್ವನಾಥ್ ಅವರು,"ನನ್ನನ್ನು ಸಾಹಿತ್ಯ ವಲಯದಿಂದ ವಿಧಾನ ಪರಿಷತ್ ಗೆ ಆಯ್ಕೆ ಮಾಡಿದ್ದಾರೆ. ನನ್ನ ರಾಜಕೀಯ ಸಾಹಿತ್ಯವನ್ನು ಗೌರವಿಸಿದ್ದಾರೆ. ಇದು ನನಗೆ ಸಂತೋಷ ತಂದಿದೆ. ವಿಧಾನ ಪರಿಷತ್ ಆಯ್ಕೆ ಆಗಿರುವುದು ಹೆಮ್ಮೆ ಅನ್ನಿಸುತ್ತಿದೆ" ಎಂದಿದ್ದಾರೆ. ''ಇದು ಅಧಿಕಾರ ಅಲ್ಲ. ಜವಾಬ್ದಾರಿ ನಿರ್ವಹಿಸಲು ಸಿಕ್ಕ ಅವಕಾಶ. ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಕಡೆಗೆ ನನ್ನ ಆದ್ಯತೆ. ನನ್ನ ಆಯ್ಕೆಗೆ ಯಾವುದೇ ತಾಂತ್ರಿಕ ಅಡೆತಡೆ ಇಲ್ಲ. ನಾವು ಚುನಾವಣೆಗೆ ಸ್ಪರ್ಧಿಸಿ ಸೋತಾಗಲೇ ಅರ್ಹರಾಗಿದ್ದೇವೆ. ಈಗ ಕಾನೂನಿನ ತೊಡಕು ಇಲ್ಲ" ಎಂದು ಹೇಳಿದ್ದಾರೆ.
"ವಿಶ್ವನಾಥ್ ಹೋರಾಟದ ಮೂಲಕ ಏಳುಬೀಳು ಕಂಡಿದ್ದಾರೆ"
ವಿಧಾನ ಪರಿಷತ್ ಗೆ ನೂತನವಾಗಿ ಆಯ್ಕೆಯಾದ ವಿಶ್ವನಾಥ್ ಅವರು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ್ದರು. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ಹೂಗುಚ್ಛ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭ ಮಾತನಾಡಿದ ಶ್ರೀನಿವಾಸ ಪ್ರಸಾದ್, "ವಿಶ್ವನಾಥ್ ಛಲ ಬಿಡದ ತ್ರಿವಿಕ್ರಮ. ಈಗ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ್ದಾರೆ. ಮುಂದೆ ಏನಾಗುತ್ತೋ ಅದು ಅವರಿಗೆ ಬಿಟ್ಟ ವಿಚಾರ. ವಿಶ್ವನಾಥ್ ಹೋರಾಟದ ಮೂಲಕ ಏಳುಬೀಳುಗಳನ್ನು ಕಂಡಿದ್ದಾರೆ. ಈಗ ಸಿಕ್ಕಿರುವ ಸ್ಥಾನದ ಬಗ್ಗೆಯೇ ಖುಷಿಯಾಗಿದ್ದಾರೆ ಎಂದು ಹೇಳಿದ್ದಾರೆ.